ಸುದ್ದಿ ಕಣಜ.ಕಾಂ | DISTRICT | SAKSHAMA
ಶಿವಮೊಗ್ಗ: ಅಂಗವಿಕಲರ ಹಕ್ಕುಗಳ ಅಧಿನಿಯಮ ಅಡಿ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ವಿಕಲಚೇತನರಿಗೆ ರ್ಯಾಂಪ್, ರೀಲಿಂಗ್ಸ್, ಶೌಚಾಲಯ ಕಡ್ಡಾಯ. ಆದರೆ, ನಗರದಲ್ಲಿರುವ ವಿಕಲಚೇತನರ ಕಚೇರಿಗೇ ಈ ವ್ಯವಸ್ಥೆ ಸರಿಯಾಗಿಲ್ಲ.
ಹೀಗೆಂದು ಆರೋಪಿಸಿ ‘ಸಕ್ಷಮ’ ಜಿಲ್ಲಾ ಘಟಕದಿಂದ ಬುಧವಾರ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಸ್ಮಾರ್ಟ್ ಸಿಟಿಯಿಂದ ಫುಟ್ ಪಾತ್ ಕಾಮಗಾರಿಯನ್ನು ಮಾಡಿದ್ದು, ಅದರಿಂದಾಗಿ ವಿಕಲಚೇತನರಿಗೆ ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಸ್ಮಾರ್ಟ್ ಸಿಟಿ ಎಂಡಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಚೇರಿಗೂ ಮಾಹಿತಿ ನೀಡಲಾಗಿದೆ. ಆದರೆ, ಪ್ರಯೋಜನವಾಗಿಲ್ಲ ಎಂದು ಸಕ್ಷಮದ ಜಿಲ್ಲಾ ಕಾರ್ಯದರ್ಶಿ ಕೆ.ಜೆ.ಕುಮಾರ್ ಆರೋಪಿಸಿದ್ದಾರೆ.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಚೇರಿಗೆ ಓಡಾಡಲು ನೇರವಾಗಿ ರ್ಯಾಂಪ್ ಮತ್ತು ರೀಲಿಂಗ್ಸ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.