ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಮಹಾಮಾರಿಯಿಂದಾಗಿ ಕಳೆದ ಆರೇಳು ತಿಂಗಳಿಂದ ಸ್ಥಗಿತಗೊಂಡಿರುವ ರಂಗ ಚಟುವಟಿಕೆ ಮತ್ತೆ ಗರಿಗೆದರಲಿದೆ.
ಶಿವಮೊಗ್ಗ ರೆಪರ್ಟರಿ ಕಲಾವಿದರು ಅಭಿನಯಿಸಿರುವ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನವು ನವೆಂಬರ್ 29 ಮತ್ತು 30ರಂದು ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಂಜೆ 6.15ಕ್ಕೆ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಹೇಳಿದರು.
ಶಿವಮೊಗ್ಗ ರಂಗಾಯಣದ ಎರಡನೇ ರೆಪರ್ಟರಿಯ ಪ್ರಥಮ ನಾಟಕ ಇದಾಗಿದೆ. ಪ್ರಥಮ ಪ್ರಯೋಗವಾಗಿ ಕೆ.ವಿ.ಸುಬ್ಬಣ್ಣ ರಚನೆಯ, ಬಿ.ಆರ್.ವೆಂಕಟರಮಣ ಐತಾಳ ಅವರ ನಿರ್ದೇಶನದ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನಕ್ಕೆ ಸಿದ್ಧವಾಗಿದೆ ಎಂದು ತಿಳಿಸಿದರು.
ರಾಘು ಪುರಪ್ಪೇಮನೆ ಮತ್ತು ಎಚ್.ಕೆ.ಶ್ವೇತಾ ರಾಣಿ ಅವರು ಸಹ ನಿರ್ದೇಶನ ಮಾಡಿದ್ದು, ಕೆ.ಎನ್.ಭಾರ್ಗವ ಮತ್ತು ಶ್ರೀಪಾದ ತೀರ್ಥಹಳ್ಳಿ ಅವರ ಸಂಗೀತವಿದೆ. ರಂಗವಿನ್ಯಾಸವನ್ನು ವಿನೀತ್ ಕುಮಾರ್ ಅವರು ನಿರ್ವಹಿಸಿದ್ದಾರೆ. ಹಿರಿಯ ರಂಗಕರ್ಮಿ ಪುರುಷೋತ್ತಮ ತಲವಾಟ ಪ್ರಸಾಧನ ಹಾಗೂ ಬೆಳಕಿನ ವಿನ್ಯಾಸವನ್ನು ಶಂಕರ್ ಬೆಳಕಟ್ಟೆ ಅವರು ನಿರ್ವಹಿಸಿದ್ದಾರೆ.
ನಾಟಕದಲ್ಲಿ ಪಾಲ್ಗೊಳ್ಳಲಿರುವವರು: ರಂಗಾಯಣ, ಶಿವಮೊಗ್ಗ ರೆಪರ್ಟರಿಯ ನೂತನ ಕಲಾವಿದ ಆರ್.ಪ್ರಸನ್ನ ಕುಮಾರ್, ಡಿ.ಆರ್.ನಿತಿನ್, ಎಸ್.ಎಂ.ರವಿಕುಮಾರ್, ಸುಜಿತ್ ಕಾರ್ಕಳ, ಎನ್.ಚಂದನ್, ಎಂ.ಎಲ್.ಶರತ್ ಬಾಬು, ಬಿ.ಕೆ.ಮಹಾಬಲೇಶ್ವರ್, ಸವಿತಾ ಆರ್.ಕಾಳಿ, ಆರ್.ರಮ್ಯ, ಆರ್.ರಂಜಿತಾ, ಎಂ.ಎಚ್.ದೀಪ್ತಿ, ಕಾರ್ತಿಕ ಕಲ್ಲುಕುಟಿಕರ್, ಶಂಕರ್ ಕೆ., ಪ್ರಶಾಂತ್ ಕುಮಾರ್, ಎಂ.ಯು.ರಾಘವೇಂದ್ರ ಪ್ರಭು ಇವರುಗಳು ನಾಟಕದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಮಾರ್ಗಸೂಚಿ ಕಡ್ಡಾಯ: ಸರ್ಕಾರಿ ನಿಯಮದಂತೆ ಕೋವಿಡ್-19ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು. 250 ಜನಕ್ಕೆ ಮಾತ್ರ ಪ್ರವೇಶವಿದ್ದು, ರೂ.20 ಪ್ರವೇಶ ಶುಲ್ಕವಿದೆ ಎಂದು ಹೇಳಿದರು.
ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದೀನ್, ರಂಗ ಸಮಾಜದ ಸದಸ್ಯ ಹಾಲಸ್ವಾಮಿ ಉಪಸ್ಥಿತರಿದ್ದರು.