ಸುದ್ದಿ ಕಣಜ.ಕಾಂ | KARNATAKA | RAILWAY NEWS
ಶಿವಮೊಗ್ಗ: ಕೋವಿಡ್ ಹಿನ್ನೆಲೆ ನಿಲುಗಡೆ ಮಾಡಿದ್ದ ರೈಲನ್ನು ಪುನರಾರಂಭಿಸಲಾಗಿದೆ.
2019-20ರಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ಶಿವಮೊಗ್ಗ -ರೇಣಿಗುಂಟ(ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಮದ್ರಾಸ್ ಎಕ್ಸ್ ಪ್ರೆಸ್ ವಾರಕ್ಕೆ ಎರಡು ಬಾರಿ ಸಂಚರಿಸುವ ಸೇವೆಗಳನ್ನು ಆರಂಭಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ದೇಶದಾದ್ಯಂತ ರೈಲು ಸೇವೆಗಳನ್ನು ನಿಲುಗಡೆ ಮಾಡಿದ ಸಂದರ್ಭದಲ್ಲಿ ಈ ಎರಡು ರೈಲು ಸೇವೆಗಳನ್ನು ಸಹ ರೈಲ್ವೆ ಇಲಾಖೆಯಿಂದ ಹಿಂಪಡೆಯಲಾಗಿತ್ತು.
READ | ಪೊಲೀಸರ ಭರ್ಜರಿ ಕಾರ್ಯಾಚರಣೆ, ಖಾಕಿ ಖೆಡ್ಡಕ್ಕೆ ಬಿದ್ದ ಬೈಕ್ ಕಳ್ಳರ ಗ್ಯಾಂಗ್, 22 ಬೈಕ್ ಸೀಜ್
ಈ ಹಿಂದೆ ಶಿವಮೊಗ್ಗದಿಂದ ತಿರುಪತಿಗೆ ಹೊರಡುವ ರೈಲು ಬೆಳಗ್ಗೆ ಶಿವಮೊಗ್ಗದಿಂದ ಹೊರಟು ರಾತ್ರಿ 8 ಗಂಟೆಗೆ ರೇಣಿಗುಂಟವನ್ನು ತಲುಪಿ ಅರ್ಧ ಗಂಟೆಯ ನಂತರ ಕೂಡಲೇ ಶಿವಮೊಗ್ಗಕ್ಕೆ ಮರು ಪ್ರಯಾಣವನ್ನು ಆರಂಭಿಸುತ್ತಿತ್ತು. ಇದರಿಂದಾಗಿ ಮಲೆನಾಡಿನ ಭಾಗದ ಯಾತ್ರಾರ್ಥಿಗಳಿಗೆ ಈ ರೈಲಿನಿಂದ ಹೆಚ್ಚಿನ ಅನುಕೂಲವಾಗುತ್ತಿರಲಿಲ್ಲ.
ಈ ರೈಲು ಸೇವೆಯ ಸದುಪಯೋಗವನ್ನು ಪಡೆದುಕೊಳ್ಳಲಿ. ಶಿವಮೊಗ್ಗ ಹಾಗೂ ಮಲೆನಾಡಿನ ಜನತೆಗೆ ಇದರಿಂದ ಅನುಕೂಲವಾಗಲಿದೆ. ನೂತನ ರೈಲು ಸೇವೆಯನ್ನು ಆರಂಭಿಸಲು ಕಾರಣರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ, ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ
– ಬಿ.ವೈ.ರಾಘವೇಂದ್ರ, ಸಂಸದರು, ಶಿವಮೊಗ್ಗ
ಈ ಬಗ್ಗೆ ಸಾರ್ವಜನಿಕರಿಂದಲೂ ಸಾಕಷ್ಟು ಅಹವಾಲುಗಳನ್ನು ನೀಡಲಾಗಿತ್ತು. ಶಿವಮೊಗ್ಗ-ಬೆಂಗಳೂರು ಮದ್ರಾಸ್ ಎಕ್ಸ್ ಪ್ರೆಸ್ ಹಾಗೂ ಶಿವಮೊಗ್ಗ-ರೇಣಿಗುಂಟ(ತಿರುಪತಿ) ರೈಲುಗಳನ್ನು ಒಗ್ಗೂಡಿಸಿ ಶಿವಮೊಗ್ಗದಿಂದ ತಿರುಪತಿ ಹಾಗೂ ಮದ್ರಾಸ್ ಗೆ ತೆರಳುವ ಯಾತ್ರಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲಿನ ಸಮಯ ಹಾಗೂ ಮಾರ್ಗವನ್ನು ಬದಲಿಸಿ ಶಿವಮೊಗ್ಗ-ರೇಣಿಗುಂಟ-ಮದ್ರಾಸ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆರಂಭಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ರೈಲ್ವೆ ಸಚಿವರನ್ನು ಹಲವಾರು ಬಾರಿ ಒತ್ತಾಯಿಸಿದ್ದರು.
READ | ಶಿವಮೊಗ್ಗ – ತುಮಕೂರು ನಡುವೆ ಹೊಸ ರೈಲು ಸಂಚಾರ, ಎಷ್ಟು ಬೋಗಿ, ಯಾವಾಗಿಂದ ಆರಂಭ, ಎಲ್ಲೆಲ್ಲಿ ನಿಲುಗಡೆ
ಏಪ್ರಿಲ್ 17ರಿಂದ ರೈಲು ಸೇವೆ ಆರಂಭ
ಸಂಸದರ ಪ್ರಯತ್ನದ ಫಲವಾಗಿ ಏಪ್ರಿಲ್ 17ರಿಂದ ಶಿವಮೊಗ್ಗ-ಮದ್ರಾಸ್-ಶಿವಮೊಗ್ಗ (ವಯಾ-ರೇಣಿಗುಂಟ (ತಿರುಪತಿ) ಎಕ್ಸ್ ಪ್ರೆಸ್ ರೈಲು ಸೇವೆಯು ಆರಂಭಗೊಳ್ಳುತ್ತಿದೆ. ಶಿವಮೊಗ್ಗದಿಂದ ಭಾನುವಾರ ಹಾಗೂ ಮಂಗಳವಾರ ಮತ್ತು ಮದರಾಸ್ ನಿಂದ ಸೋಮವಾರ ಮತ್ತು ಬುಧವಾರಗಳಂದು ಈ ರೈಲು ಸಂಚರಿಸಲಿದೆ.
ವಾರಕ್ಕೆ ಎರಡು ದಿನ ಸಂಚರಿಸುವ ಈ ರೈಲು ಸೇವೆಯು ಶಿವಮೊಗ್ಗದಿಂದ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 8.20 ಗಂಟೆಗೆ ರೇಣಿಗುಂಟವನ್ನು ಹಾಗೂ 11.10ಕ್ಕೆ ಮದ್ರಾಸ್ ತಲುಪುತ್ತದೆ. ಅದೇ ದಿನ ಮದ್ರಾಸ್ ನಿಂದ ಸಂಜೆ 3.50ಕ್ಕೆ ಹೊರಡುವ ಈ ರೈಲು ರೇಣಿಗುಂಟಕ್ಕೆ ಸಂಜೆ 6.10 ಕ್ಕೆ ತಲುಪಿ ಮರುದಿನ ಬೆಳಿಗ್ಗೆ 7.55ಕ್ಕೆ ಶಿವಮೊಗ್ಗವನ್ನು ತಲುಪಲಿದೆ.
ಮಲೆನಾಡಿನ ಜನರಿಗೆ ಆಗಲಿದೆ ಅನುಕೂಲ
ಮಲೆನಾಡು, ಕರಾವಳಿ ಹಾಗೂ ಶಿವಮೊಗ್ಗ ಭಾಗದ ಜನರು ರೇಣಿಗುಂಟಕ್ಕೆ ಮುಂಜಾನೆ ತಲುಪಿ ಸಂಜೆಯ ವೇಳೆಗೆ ತಿರುಪತಿಯಲ್ಲಿ ದೇವರ ದರ್ಶನ ಪಡೆದು ಅದೇ ದಿನ ರಾತ್ರಿ ಶಿವಮೊಗ್ಗ ಮರು ಪ್ರಯಾಣ ಆರಂಭಿಸಲು ಈ ಬದಲಾದ ಸಮಯ ನೆರವಾಗಲಿದೆ.
ಈ ಮೊದಲಿನ ರೈಲು ಸೇವೆಯು ಶಿವಮೊಗ್ಗದಿಂದ ಮುಂಜಾನ ತನ್ನ ಪ್ರಯಾಣವನ್ನು ಆರಂಭಿಸುತ್ತಿರುವುದರಿಂದ ಶಿವಮೊಗ್ಗದಿಂದ ತಿರುಪತಿಗೆ ತೆರಳಲು ಬಯಸುತ್ತಿದ್ದ ಯಾತ್ರಾರ್ಥಿಗಳು ಇಡೀ ದಿನವನ್ನು ರೈಲಿನಲ್ಲಿ ಕಳೆಯ ಬೇಕಾಗಿತ್ತು. ಬದಲಾದ ಸಮಯದ ಈ ರೈಲು ಸೇವೆಯಿಂದ ರಾತ್ರಿಯ ಪ್ರಯಾಣದ ಮೂಲಕ ತಿರುಪತಿಯನ್ನು ತಲುಪಬಹುದಾಗಿದೆ.
ಈ ರೈಲು ಸೇವೆಯಿಂದ ಮಲೆನಾಡಿನ ಜನತೆಯು ಚಿತ್ರದುರ್ಗ, ಬಳ್ಳಾರಿ, ಗುಂತಕಲ್ ಮೂಲಕ ರೇಣಿಗುಂಟ ಹಾಗೂ ಮದರಾಸಿನೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗಲಿದೆ.
ರೈಲು ಸಂಚರಿಸಲಿರುವ ಮಾರ್ಗ
ಈ ರೈಲು ಮಾರ್ಗದಲ್ಲಿ ಭದ್ರಾವತಿ, ತರೀಕೆರೆ, ಬೀರೂರು, ಅಜ್ಜಂಪುರ, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಕೂರು, ರಾಯದುರ್ಗ, ಬಳ್ಳಾರಿ, ಗುಂತಕಲ್, ತಾಡಪತ್ರಿ, ಗುತ್ತಿ, ಯರಗುಂಟ, ಕಡಪ, ರಾಯಪೇಟ, ರೇಣಿಗುಂಟ, ಅರಕೋಣಂ, ಪರಂಬೂರ್ ರೈಲು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ.