HIGHLIGHTS
- ಜನವರಿ ಮಾಸಾಂತ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ, ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಕೋರಿಕೆ
- ಮಲೆನಾಡಿಗರ ಬಹುದಿನಗಳ ಕನಸು ಈಡೇರುವ ಸಮಯ ಸನ್ನಿಹಿತ
- ನವೆಂಬರ್ ಅಂತ್ಯಕ್ಕೆ ಎಲ್ಲ ಪ್ರಮುಖ ಕಾಮಗಾರಿಗಳು ಸಂಪನ್ನ ಸಾಧ್ಯತೆ
ಸುದ್ದಿ ಕಣಜ.ಕಾಂ | DISTRICT | 24 SEP 2022
ಶಿವಮೊಗ್ಗ(shivamogga): ಮಲೆನಾಡಿಗರ ಬಹುದಿನಗಳ ಕನಸು ಸಾಕಾರಗೊಳ್ಳುವ ದಿನ ಸನ್ನಿಹಿಸಿದೆ. ಶಿವಮೊಗ್ಗ ನೆಲದಿಂದ ಆಗಸಕ್ಕೆ ಲೋಹದ ಹಕ್ಕಿ ಹಾರುವ ದಿನ ನಿಗದಿಯಾಗಿದೆ.
ಸಂಸದ ಬಿ.ವೈ.ರಾಘವೇಂದ್ರ (BY Raghavendra) ಅವರು ಸೋಗಾನೆ (Sogane)ಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ, ಜನವರಿ ಅಂತ್ಯಕ್ಕೆ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳಲಿದೆ ಎಂದು ಘೋಷಿಸಿದರು.
ರನ್ ವೇ(Run way), ಟರ್ಮಿನಲ್ ಕಟ್ಟಡ(Terminal Building) , ವಿಮಾನ ಸಂಚಾರ ನಿಯಂತ್ರಣ ಘಟಕ ಸೇರಿದಂತೆ ಅನೇಕ ಕಾಮಗಾರಿಗಳು ಭರದಿಂದ ಸಾಗಿವೆ. ಸೌಕರ್ಯಗಳನ್ನು ಕಲ್ಪಿಸುವ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಈ ಎಲ್ಲ ಕಾಮಗಾರಿಗಳು ನವೆಂಬರ್ ಅಂತ್ಯಕ್ಕೆ ಪೂರ್ಣಗೊಂಡು ವಿಮಾನ ನಿಲ್ದಾಣ ಲೋಕಾರ್ಪಣೆಗೆ ಸರ್ವ ಸನ್ನದ್ಧಗೊಳ್ಳಲಿದೆ ಎಂದು ಸಂಸದರು ಹೇಳಿದರು.
VIDEO REPORT
ಸೋಗಾನೆ ವಿಮಾನ ನಿಲ್ದಾಣಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಪರ ಕಾರ್ಯದರ್ಶಿ ಉಷಾಪಾಧಿ, ಗೌರವ್ ಗುಪ್ತಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯಮಟ್ಟದ ತಂತ್ರಜ್ಞರು, ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಬಿ.ವೈ.ರಾಘವೇಂದ್ರ ಹೇಳಿದ್ದೇನು?
- ವಿಮಾನ ನಿಲ್ದಾಣದ ವ್ಯವಸ್ಥಿತ ನಿರ್ವಹಣೆ, ಸಂಚಾರ ಸಂಪರ್ಕ ಮತ್ತು ಉಸ್ತುವಾರಿ ಕಾರ್ಯಗಳ ಕುರಿತು ಗಮನಹರಿಸಬೇಕಾದ ಅಗತ್ಯವಿದೆ. ನಿಲ್ದಾಣದ ನಿರ್ವಹಣೆ ಕುರಿತು ಉನ್ನತ ಮಟ್ಟದ ಅಧಿಕಾರಿಗಳು ಸಭೆ ಸೇರಿ ನಿರ್ಣಯ ಕೈಗೊಂಡು ಮುಂದಿನ ಕ್ರಮಗಳಿಗೆ ಅನುವು ಮಾಡಿಕೊಡುವಂತೆ ಗೌರವ್ ಗುಪ್ತಾ ಅವರಿಗೆ ಮನವಿ
- ನಿಲ್ದಾಣದ ಉದ್ಘಾಟನೆಗೆ ಜನವರಿ ಮಾಸಾಂತ್ಯದೊಳಗಾಗಿ ಪ್ರಧಾನಮಂತ್ರಿ ಅವರ ಸಮಯವನ್ನು ನಿಗದಿಗೊಳಿಸಿಕೊಡುವಂತೆ ರಾಜ್ಯ ಸರ್ಕಾರದ ವತಿಯಿಂದ ಕೋರಲಾಗುವುದು.
- ಶಿವಮೊಗ್ಗ-ಬೆಂಗಳೂರು ಅಲ್ಲದೇ ನೆರೆ ರಾಜ್ಯಗಳ ಹಲವು ಪ್ರಮುಖ ನಗರಗಳ ಸಂಪರ್ಕ ಹಾಗೂ ಸಂಚಾರಕ್ಕೆ ಕ್ರಮ ವಹಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ. ಅಲ್ಲದೇ ರಾಜ್ಯದ ಉನ್ನತ ಅಧಿಕಾರಿಗಳ ತಂಡ ಸದ್ಯದಲ್ಲಿ ನೆರೆಯ ರಾಜ್ಯ ಮಹಾರಾಷ್ಟ್ರದ ಶಿರಡಿ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಮತ್ತು ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದೆ.
- ಈಗಾಗಲೇ ಗತಿಶಕ್ತಿ ಯೋಜನೆಯಡಿ ಕೇಂದ್ರ ಸರ್ಕಾರವು 65 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಶೀತಲೀಕರಣ ಘಟಕಗಳು, ಗೋದಾಮುಗಳು, ಕಿರು ಉದ್ಯಮ ಘಟಕಗಳ ಆರಂಭದಿಂದಾಗಿ ಸರಕು-ಸಾಗಾಟಕ್ಕೆ ಅನುಕೂಲವಾಗಲಿದೆ.
READ | ಸ್ಬೂಡಾ ಖಡಕ್ ವಾರ್ನಿಂಗ್, ಮನೆ ಕಟ್ಟದಿದ್ದರೆ ನಿವೇಶನ ರದ್ದತಿ ಎಚ್ಚರಿಕೆ, ವರದಿ ಸಲ್ಲಿಕೆಗೆ ಡೆಡ್ ಲೈನ್
ಬ್ರಿಗೇಡಿಯರ್ ಪೂರ್ವಿಮಠ್, ರಾಜೀವ್ ಕುಮಾರ್ ರೈ, ಹೆಪ್ಸಿಬಾರಾಣಿ ಕೊರ್ಲಪಾಟಿ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಚ್.ಆರ್.ರಾಜಪ್ಪ, ರೈಟ್ಸ್ ಸಂಸ್ಥೆಯ ಎಂಜಿನಿಯರ್ ರವಿ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.¯ಕ್ಷ್ಮೀಪ್ರಸಾದ್, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಕಾಂತರಾಜ್, ಸಂಪತ್ ಕುಮಾರ್ ಮುಂತಾದ ಅಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆಯ ತಂತ್ರಜ್ಞರು, ಗುತ್ತಿಗೆದಾರರು ಉಪಸ್ಥಿತರಿದ್ದರು.
https://suddikanaja.com/2022/04/01/shimoga-smart-city-work-progress/