ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಹದಿಹರೆಯದ ಹೆಣ್ಣು ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದ ಸ್ಯಾನಿಟರಿ ನ್ಯಾಪ್ಕಿನ್ ಶುಚಿ ಯೋಜನೆಯು ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದು, ಕೂಡಲೇ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದ್ದಾರೆ.
READ | ಸಹ್ಯಾದ್ರಿ ಕಾಲೇಜಿನಲ್ಲಿ ಉದ್ಯೋಗ ಮೇಳ, 7ನೇಯಿಂದ ಪಿಜಿವರೆಗಿನ ಅಭ್ಯರ್ಥಿಗಳು ಭಾಗವಹಿಸಬಹುದು, ಎಷ್ಟು ಕಂಪೆನಿಗಳು ಭಾಗಿ?
ಹೆಣ್ಣುಮಕ್ಕಳು ಮುಟ್ಟಾದಾಗ ನೈರ್ಮಲ್ಯ ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭವಾಗಿದ್ದ ಶುಚಿ ಯೋಜನೆ ಮೂರು ವರ್ಷಗಳಿಂದ ಸ್ಥಗಿತಗೊಂಡಿದೆ ಎಂದು ಆರೋಪಿಸಿದ್ದಾರೆ.
20 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು
ರಾಜ್ಯದ ವೈದ್ಯಕೀಯ ಸರಬರಾಜು ನಿಗಮ ನಿಯಮಿತ(ಕೆ.ಎಸ್.ಎಂ.ಸಿ.ಎಲ್) ನ್ಯಾಪ್ಕಿನ್’ಗಳನ್ನು ಖರೀದಿಸಿ ವಿತರಿಸುವ ಯೋಜನೆ ಜಾರಿಯಲ್ಲಿತ್ತು. ರಾಜ್ಯದಲ್ಲಿ ಸುಮಾರು 47 ಕೋಟಿ ರೂಪಾಯಿ ಮೌಲ್ಯದ ಸುಮಾರು 20 ಲಕ್ಷಕ್ಕೂ ಹೆಚ್ಚು ಶುಚಿ ಫಲಾನುಭವಿಗಳಿದ್ದರು. ಆದರೆ, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದ್ದಾರೆ.
ಈ ಯೋಜನೆಯಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಪ್ರಯೋಜನವಾಗುತ್ತಿತ್ತು. ಕೂಡಲೇ ಸರ್ಕಾರ ಇದರೆಡೆಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಮ್ಯಾನೇಜಿಂಗ್ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಎಸ್.ಎ.ರಾಜಮ್ಮ, ಡಾ.ಶೇಖರ್ ಗೌಳೇರ್, ಎಲ್.ಆರ್.ಗೋಪಾಲಕೃಷ್ಣ, ಕೂಡ್ಲು ಶ್ರೀಧರ್, ಎಸ್.ಸಿ.ರಾಮಚಂದ್ರ, ಸಿ.ಎಸ್.ಶಿವಕುಮಾರ್, ಕೆ.ಮೋಹನ್, ಶಂಕರ್ನಾಯ್ಕ ಉಪಸ್ಥಿತರಿದ್ದರು.
https://suddikanaja.com/2022/12/09/plastic-ban-in-more-than-15-items-including-ear-buds/