ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಈ ತಿಂಗಳ ಕೊನೆಯ ವಾರದಲ್ಲಿ ಅಧಿಕೃತವಾಗಿ ವಿಮಾನ ಹಾರಾಟ ಪ್ರಾರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆರು ಕೋಟಿ ರೂ. ವೆಚ್ಚದ ಮೂರು ಅಗ್ನಿಶಾಮಕ ವಾಹನಗಳು ಬರುವವರೆಗೆ ಕ್ಲಿಯರೆನ್ಸ್ ನೀಡುವುದಿಲ್ಲ ಎಂದು ವಿಮಾನಯಾನ ಸಚಿವಾಲಯ ಸೂಚನೆ ನೀಡಿತ್ತು. ಈಗ ಅದು ಕೂಡ ವಾರದೊಳಗೆ ಬರುತ್ತಿದ್ದು, ಈ ತಿಂಗಳ ಕೊನೆಯೊಳಗೆ ಅಧಿಕೃತವಾಗಿ ವಿಮಾನ ಹಾರಾಟ ಪ್ರಾರಂಭವಾಗಲಿದೆ ಎಂದರು.
READ | ಮಾ.25ರಂದು ಶಿವಮೊಗ್ಗದ ಹಲವು ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ಪ್ರತಿ ಟಿಕೆಟಿಗೆ ₹500 ಅನುದಾನ
ಪ್ರತಿ ಟಿಕೆಟ್ ಗೆ ರಾಜ್ಯ ಸರ್ಕಾರ ೫೦೦ ರೂ. ಅನುದಾನವನ್ನು ಇಂಡಿಗೋ ಏರ್ ಲೈನ್ಸ್ ಗೆ ನೀಡುತ್ತಿದ್ದು, ಬೆಂಗಳೂರು -ಶಿವಮೊಗ್ಗ ಹಾರಾಟಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಮಾ.25 ರಂದು ರಾಜ್ಯಕ್ಕೆ ಆಗಮಿಸುವ ಪ್ರಧಾನಿ ಮೋದಿ ದಾವಣಗೆರೆ ಕಾರ್ಯಕ್ರಮ ಮುಗಿಸಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಇಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇದು ವಿಮಾನ ನಿಲ್ದಾಣದ ಪ್ರಾಮುಖ್ಯತೆ ಸೂಚಿಸುತ್ತದೆ ಎಂದು ತಿಳಿಸಿದರು.
ಶಾಸಕರಾದ ಕೆ.ಎಸ್. ಈಶ್ವರಪ್ಪ, ಡಿ.ಎಸ್. ಅರುಣ್, ಸೂಡಾ ಅಧ್ಯಕ್ಷ ನಾಗರಾಜ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಕೆ.ಇ. ಕಾಂತೇಶ್, ಶಿವರಾಜ್, ಜ್ಞಾನೇಶ್ವರ್, ರಾಮಣ್ಣ, ಹೃಷಿಕೇಶ್ ಪೈ. ಇ. ವಿಶ್ವಾಸ್, ಅಣ್ಣಪ್ಪ ಉಪಸ್ಥಿತರಿದ್ದರು.