ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕ್ಷಿಪ್ರ ಕಾರ್ಯ ಪಡೆ(ಆರ್.ಎ.ಎಫ್)ಗೆ ಕಾಂಗ್ರೆಸ್ ಅವಧಿಯಲ್ಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಜಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದು ಈ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರ ಮಾರ್ಚ್ ತಿಂಗಳಲ್ಲೇ ಭದ್ರಾವತಿಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ನ ಒಂದು ಬಟಾಲಿಯನ್ ಸ್ಥಾಪಿಸಲು 30 ಎಕರೆ ಜಮೀನು ಹಂಚಿಕೆ ಮಾಡಲು ಅನುಮೋದನೆ ನೀಡಲಾಗಿತ್ತು ಎಂದು ತಿಳಿಸಿದರು.
VIDEO REPORT
ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಆರ್.ಎ.ಎಫ್.ಗೆ ಶಂಕುಸ್ಥಾಪನೆ ನೆರವೇರಿಸಿ ತಾವೇ ಎಲ್ಲವನ್ನೂ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ವಾಸ್ತವದಲ್ಲಿ ಇದು ಕಾಂಗ್ರೆಸ್ ಆಡಳಿತದಲ್ಲಿದ್ದಾಗಲೇ ಮಾಡಿರುವ ಕೆಲಸ ಎಂದು ಹೇಳಿದರು.
ಲಭ್ಯವಿರುವ 90 ಎಕರೆ 27 ಗುಂಟೆ ಜಮೀನಿನಲ್ಲಿ 50 ಎಕರೆ ಜಮೀನನ್ನು ಸಿ.ಆರ್.ಪಿ.ಎಫ್.ಗೆ ಉಚಿತವಾಗಿ ಹಂಚಿಕೆ ಮಾಡುವಂತೆ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಎಸ್.ಗೋಪಾಲ್ ಅವರು ಈ ಹಿಂದೆ ಆದೇಶಿಸಿರುವ ಪ್ರತಿಯನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದರು.
ಶಾಸಕರಾದ ಬಿ.ಕೆ.ಸಂಗಮೇಶ್, ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮುಖಂಡರಾದ ತೀನ.ಶ್ರೀನಿವಾಸ್, ಶೇಷಾದ್ರಿ, ಶ್ರೀನಿವಾಸ್, ಗೋಣಿ ಮಾಲತೇಶ್ ಸೇರಿದಂತೆ ಉಪಸ್ಥಿತರಿದ್ದರು.