ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿ.ಎಸ್.ಟಿ. ಕಾಯ್ದೆಯಲ್ಲಿರುವ ತಪ್ಪುಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಜನವರಿ 29ರಂದು ಬೆಳಗ್ಗೆ 10 ಗಂಟೆಗೆ ಎಲ್.ಬಿ.ಎಸ್. ನಗರದಲ್ಲಿರುವ ಸಿ.ಜಿ.ಎಸ್.ಟಿ. ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ನಂತರ ಗೋಪಾಳದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗೂ ಭೇಟಿ ನೀಡಲು ಉದ್ದೇಶಿಸಲಾಗಿದೆ.
ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ತೆರಿಗೆದಾರರ ಸಂಘದ ಅಧ್ಯಕ್ಷ ಜಫರುಲ್ಲಾ ಸತ್ತಾರ್ ಖಾನ್, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಐದು ವರ್ಷಗಳಿಂದ ದೇಶದ ತೆರಿಗೆ ವ್ಯವಸ್ಥೆಯನ್ನು ಕಂಪ್ಯೂಟರೀಕರಣಗೊಳಿಸಲು ಒತ್ತು ನೀಡಲಾಗುತ್ತಿದೆ. ಆದರ, ಹಲವು ಸಣ್ಣ, ಮಧ್ಯಮ ತೆರಿಗೆದಾರರಿಗೆ ಇದು ಸಾಧ್ಯವಾಗುತ್ತಿಲ್ಲ. ತಮ್ಮ ಎಲ್ಲ ವಾಣಿಜ್ಯೋದ್ಯಮದ ಕೆಲಸಗಳನ್ನು ಮುಗಿಸಿ ತೆರಿಗೆ ಕಾನೂನುಗಳನ್ನು ಪಾಲಿಸುವುದಕ್ಕೆ ತಾವೇ ತೊಡಗಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಹೇಳಿದರು.
ಮಧುಸೂದನ್ ಐತಾರ್ ಮಾತನಾಡಿ, ಕಾನೂನಿನಲ್ಲಿನ ತೊಡಕುಗಳನ್ನು ಕಟ್ಟುವವರ ಮೇಲೆ ಹೇರುವ ಪದ್ಧತಿ ಸರಿಯಲ್ಲ. ತೆರಿಗೆ ಕಟ್ಟುವುದಕ್ಕೆ ಸಾಕಷ್ಟು ಸಮಯ ವ್ಯಯವಾಗುತ್ತಿದೆ. ಇದು ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಜತೆಗೆ, ಪೆÇೀರ್ಟಲ್ ಸರಿಯಿಲ್ಲ. ಯಾರೋಮಾಡಿದ ವ್ಯವಸ್ಥೆ, ತೊಂದರೆಗೆ ವ್ಯಾಪಾರಸ್ಥರು ಕಷ್ಟಪಡಬೇಕೆ ಎಂದು ಪ್ರಶ್ನಿಸಿದರು.
ಜಿ.ಎಸ್.ಟಿ.ಉತ್ತಮ ವ್ಯವಸ್ಥೆಯಾಗಿದೆ. ಆದರೆ, ಅದರಲ್ಲಿರುವ ಲೋಪಗಳನ್ನು ಸರಿಪಡಿಸಿ. ತೆರಿಗೆ ಕಟ್ಟುವುದಕ್ಕೆ ನೀಡಿರುವ ಕಾಲಾವಧಿಯಲ್ಲಿ ದಾಖಲೆಗಳನ್ನು ಅಪ್ ಲೋಡ್ ಮಾಡಲಾಗುತ್ತಿಲ್ಲ. ಹೀಗಾಗಿ, ಕಾಲಾವಕಾಶ ಕೊಡಿ ಎಂದು ಆಗ್ರಹಿಸಿದರು.
ಜಿ.ಎಸ್.ಟಿ. ಕಾನೂನಿನಲ್ಲಿ ಸಮಸ್ಯೆಗಳಿಲ್ಲ. ಆದರೆ, ಅನುಷ್ಠಾನದಲ್ಲಿ ಸಾಕಷ್ಟು ಲೋಪಗಳಿವೆ. ಅವುಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಸೈಯದ್ ವಹೀದ್, ಮೊಹಮ್ಮದ್ ಯಾಹ್ಯಾ, ಸಾದಿಕ್, ಮೊಹಮ್ಮದ್ ರಬ್ಬನ್, ಸಮೀರ್ ಬೇಗ್, ಸೈಯದ್ ಅಹ್ಮದ್, ಮೊಹಮ್ಮದ್ ರಫೀ ಉಪಸ್ಥಿತರಿದ್ದರು.