ಸುದ್ದಿ ಕಣಜ.ಕಾಂ
ಶಿವಮೊಗ್ಗ: ದೀಪಾವಳಿ ಬಳಿಕ ಮನೆಯಲ್ಲಿನ ಕಸ ನೀಡಬೇಕಾದರೆ, ಹಸಿ ಮತ್ತು ಒಣ ಕಸವೆಂದು ವಿಂಗಡನೆ ಮಾಡಲೇಬೇಕು. ಇಲ್ಲದಿದ್ದರೆ ಮಹಾನಗರ ಪಾಲಿಕೆ ದಂಡ ವಿಧಿಸಲಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ 35 ವಾರ್ಡ್ ಗಳಿಗೆ ಈ ನಿಯಮ ಅನ್ವಯವಾಗಲಿದ್ದು, ಮನೆ ಮನೆಗೆ ಕಸ ಸಂಗ್ರಹಿಸಲು ಬರುವ ಗಾಡಿಗಳಿಗೆ ಒಣ ಮತ್ತು ಹಸಿ ಕಸವೆಂದು ಕಡ್ಡಾಯವಾಗಿ ವಿಂಗಡಿಸಿಯೇ ಕೊಡಬೇಕು ಎಂದು ಪಾಲಿಕೆ ಪರಿಸರ ಎಂಜಿನಿಯರ್ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ ದಿನ ಯಾವ ಕಸ: ಪ್ರತಿ ಭಾನುವಾರ ಮತ್ತು ಬುಧವಾರ ಒಣ ಕಸ (ಪೇಪರ್, ಪ್ಲಾಸ್ಟಿಕ್, ಗ್ಲಾಸ್ ಚೂರು, ಇತರೆ ಕಚ್ಚಾ ವಸ್ತು) ಸಂಗ್ರಹಿಸಲಾಗುವುದು.
ಉಳಿದ ದಿನಗಳಂದು ಕೊಳೆತ ತರಕಾರಿ, ಅಡುಗೆ ಮನೆಯ ತ್ಯಾಜ್ಯ ಸೇರಿದಂತೆ ಹಸಿ ಕಸವನ್ನು ತ್ಯಾಜ್ಯ ಸಂಗ್ರಹಿಸಲು ಬರುವವರಿಗೆ ನೀಡತಕ್ಕದ್ದು. ಬಯೋಮೆಡಿಕಲ್ ತ್ಯಾಜ್ಯ ( ಮಾಸ್ಕ್, ಗ್ಲೌಸ್) ವಿಂಗಡಿಸಿ ನೀಡಬೇಕು.
ಸಾರ್ವಜನಿಕರಿಗೆ ಈಗಾಗಲೇ ಕಸ ವಿಂಗಡನೆ ಮಾಡಿ ನೀಡಲು ತಿಳಿಸಲಾಗಿದ್ದು, ದೀಪಾವಳಿ ಹಬ್ಬದ ನಂತರ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.