ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಸರ್ಕಾರ ಕಾಲೇಜು ಪುನರಾರಂಭಕ್ಕೆ ಮುಹೂರ್ತ ಫಿಕ್ಸ್ ಮಾಡುತ್ತಿದ್ದಂತೆಯೇ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ. 9 ತಿಂಗಳ ಬಳಿಕ ಡಿಪ್ಲೋಮಾ, ಎಂಜಿನಿಯರಿಂಗ್, ಪದವಿ ಮತ್ತು ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಿದ್ದು, ಮೊದಲ ದಿನವಾದ ಮಂಗಳವಾರ ವಿದ್ಯಾರ್ಥಿಗಳಿಂದ ಅಷ್ಟೊಂದು ಸ್ಪಂದನೆ ಸಿಕ್ಕಿಲ್ಲ.
ಶಿವಮೊಗ್ಗದ ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಆಗಮಿಸಿದ್ದರು. ಬೆಳಗ್ಗೆಯೇ ಕಾಲೇಜು ಸುತ್ತ ಸ್ಯಾನಿಟೈಸರ್ ಸಿಂಪರಣೆ ಮಾಡಲಾಯಿತು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಕೋವಿಡ್ ಪರೀಕ್ಷೆ ಮಾಡುವುದಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದರು. ಸಾಮಾಜಿಕ ಅಂತರ ಕಾಪಾಡಿಕೊಂಡು ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಯಿತು.
ನಗರದ ಸಹ್ಯಾದ್ರಿ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಡಿವಿಎಸ್, ಜೆಎನ್ಎನ್ಸಿಸಿ ಸೇರಿದಂತೆ ಪ್ರಮುಖ ಕಾಲೇಜುಗಳಲ್ಲಿ ಭಾರಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದರು.
ಆತಂಕದ ಮಧ್ಯೆಯೇ ಕೋವಿಡ್ ಪರೀಕ್ಷೆ: ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ, ಆತಂಕ ಮತ್ತು ಭಯದ ಮಧ್ಯೆಯೇ ಗಂಟಲು ದ್ರವದ ಮಾದರಿ ನೀಡಿದರು.