ಕುವೆಂಪು ವಿವಿ: ಹೇಗಿತ್ತು ಗೊತ್ತಾ ಮೊದಲ ದಿನದ ಕೌನ್ಸೆಲಿಂಗ್, ಎಷ್ಟು ಸೀಟು ಭರ್ತಿಯಾದವು, ಇಲ್ಲಿದೆ ಕಂಪ್ಲೀಟ್ ಮಾಹಿತಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಶುಕ್ರವಾರದಿಂದ ಕೌನ್ಸೆಲಿಂಗ್ ಆರಂಭಗೊಂಡಿದೆ. ಮೊದಲ ದಿನದ ಸ್ನಾತಕೋತ್ತರ ಪದವಿ ಪ್ರವೇಶ ಕೌನ್ಸೆಲಿಂಗ್‍ನಲ್ಲಿ 30ಕ್ಕೂ ಹೆಚ್ಚು ವಿಭಾಗಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡರು.
ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಪ್ರಕಾರ ಶುಕ್ರವಾರ ಸಂಜೆ 4 ಗಂಟೆಯ ಹೊತ್ತಿಗೆ ಎಲ್ಲ ಸ್ನಾತಕೋತ್ತರ ವಿಭಾಗಗಳ ಶೇ. 65ರಷ್ಟು ಸೀಟುಗಳು ಭರ್ತಿಯಾಗಿದ್ದವು. ಕೋವಿಡ್19 ಕಾರಣದಿಂದಾಗಿ ಇನ್ನುಳಿದ ಆಕಾಂಕ್ಷಿಗಳು ಶನಿವಾರ ಮತ್ತು ಸೋಮವಾರ ವಿವಿಗೆ ಆಗಮಿಸಿ ಪ್ರವೇಶ ಪಡೆಯಲಿದ್ದಾರೆ.

ಮೆರಿಟ್ ಸೀಟುಗಳಿಗೆ ಪ್ರವೇಶಾತಿ ಪ್ರಕ್ರಿಯೆ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೇ ಜರುಗಿತು. 19 ಹಾಗೂ 21 ರಂದು ಪೇಮೆಂಟ್ ಮತ್ತು ಇತರೆ ಕೋಟಾಗಳ ಸೀಟುಗಳಿಗೆ ಪ್ರವೇಶಾತಿ ನಡೆಯಲಿದೆ.

ವಿವಿಯ ವಿಭಾಗಗಳನ್ನು ಕಲೆ ಮತ್ತು ಸಮಾಜವಿಜ್ಞಾನ ವಿಷಯಗಳು, ವಾಣಿಜ್ಯ ಮತ್ತು ನಿರ್ವಹಣಾ ವಿಷಯಗಳು, ಅನ್ವಯಿಕ ವಿಜ್ಞಾನಗಳು ಮತ್ತು ಮೂಲ ವಿಜ್ಞಾನಗಳೆಂದು ವಿಂಗಡಿಸಿ ಅನುಕ್ರಮವಾಗಿ ಸಮಾಜವಿಜ್ಞಾನ, ವಾಣಿಜ್ಯಶಾಸ್ತ್ರ, ಗಣಿತ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯಗಳ ಸಮುಚ್ಚಯಗಳಲ್ಲಿ ಪ್ರವೇಶಾತಿ ಹಮ್ಮಿಕೊಳ್ಳಲಾಗಿತ್ತು. ಮುಂದಿನ ಎರಡು ದಿನವೂ ಇದೇ ಕಟ್ಟಡಗಳಲ್ಲಿ ಕೌನ್ಸೆಲಿಂಗ್ ನಡೆಯಲಿದೆ. ಸೀಟುಗಳ ವಿವರ, ವಿದ್ಯಾರ್ಥಿ ಮತ್ತು ಕಾಲೇಜು ಆಯ್ಕೆ ಕುರಿತ ಮಾಹಿತಿಗಳನ್ನು ಯಾವುದೇ ಗೊಂದಲಗಳಿಗೆ ದಾರಿಯಾಗದಂತೆ ಡಿಜಿಟಲ್‍ಬೋರ್ಡ್‍ಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಮೈಕ್ ಮೂಲಕ ಆಯ್ಕೆಗೊಂಡವರ ಹೆಸರುಗಳನ್ನು ಘೋಷಿಸಲಾಗುತ್ತಿತ್ತು.

Kuvempu university counselling 1ಎಲ್ಲೆಲ್ಲಿ ಕೌನ್ಸೆಲಿಂಗ್: ವಿಶ್ವವಿದ್ಯಾಲಯದ ಮುಖ್ಯ ಆವರಣ, ಕಡೂರು ಪಿ.ಜಿ.ಕೇಂದ್ರ, ಚಿಕ್ಕಮಗಳೂರು ಪಿಜಿ ಕೇಂದ್ರ ಮತ್ತು 20ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲ ವಿಭಾಗಗಳಿಗೆ ಡಿಸೆಂಬರ್ 18, 19 ಮತ್ತು 21 ರಂದು ಪ್ರವೇಶಾತಿ ಕೌನ್ಸೆಲಿಂಗ್ ಏರ್ಪಡಿಸಲಾಗಿದೆ.

ಆನ್ ಲೈನ್, ಆಫ್ ಲೈನ್: ಪ್ರವೇಶಾತಿ ಪಡೆದ ಕೋರ್ಸುಗಳ ದಾಖಲಾತಿ ನಿರ್ವಹಣೆ ಹಾಗೂ ಶುಲ್ಕ ಭರಿಸಲು ವಿದ್ಯಾರ್ಥಿಗಳಿಗೆ ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ಮಾದರಿಗಳಲ್ಲಿ ಅವಕಾಶಗಳನ್ನು ನೀಡಲಾಗಿತ್ತು. ಆಫ್ ಲೈನ್‍ನಲ್ಲಿ ಶುಲ್ಕ ಭರಿಸುವವರ ಸಂಖ್ಯೆ ಹೆಚ್ಚಾದಂತೆ ಮೂರು ಕೌಂಟರ್‍ಗಳನ್ನು ಬ್ಯಾಂಕಿನಲ್ಲಿ ತೆರೆಯಲಾಗಿತ್ತು. ಕೋವಿಡ್-19 ಮಾರ್ಗದರ್ಶಿ ಸೂತ್ರಗಳೊಂದಿಗೆ ವಿದ್ಯಾರ್ಥಿಗಳು ಮತ್ತು ಪಾಲಕರು ಸುರಕ್ಷಿತವಾಗಿ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಮಾರ್ಗಸೂಚಿ ಅನ್ವಯ ಕೌನ್ಸೆಲಿಂಗ್: ಕೋವಿಡ್ ಮಾರ್ಗಸೂಚಿಯಂತೆ ವಿಶ್ವವಿದ್ಯಾಲಯವು ಪ್ರವೇಶ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿತ್ತು. ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ದೇಹದ ಉಷ್ಣಾಂಶ ಪರೀಕ್ಷಿಸಿ ವಿವಿ ಕ್ಯಾಂಪಸ್ ಒಳಬಿಡುವ ಜೊತೆಗೆ ವಿಭಾಗಗಳಲ್ಲಿ ಕೂರಲು 6 ಅಡಿ ಅಂತರ ನೀಡಿ ಕುರ್ಚಿಗಳನ್ನು ಹಾಕಲಾಗಿತ್ತು.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ಸೀಟು ಆಕಾಂಕ್ಷಿಗಳು ಮತ್ತು ಅವರ ಪೋಷಕರು ಉತ್ಸುಕತೆಯಿಂದ ಪ್ರವೇಶ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

error: Content is protected !!