ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆ.ಎಸ್.ಆರ್.ಟಿ.ಸಿ) ನೌಕರರು ಕರೆ ನೀಡಿರುವ ಮುಷ್ಕರದಿಂದಾಗಿ ಬುಧವಾರ ಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗದನ್ವಯ ಸಂಬಳ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ನೌಕರರು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಶಿವಮೊಗ್ಗದಿಂದ ಸಂಚರಿಸುವ ಬಸ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಮುಷ್ಕರದ ಮುನ್ನಾ ದಿನವಾದ ಮಂಗಳವಾರ ಸಂಜೆಯಿಂದಲೇ ಶೇ.50ರಷ್ಟು ಬಸ್ ಗಳು ರಸ್ತೆಗೆ ಇಳಿದಿರಲಿಲ್ಲ. ಹೀಗಾಗಿ, ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು, ದಾವಣಗೆರೆ ಇನ್ನಿತರ ಕಡೆ ಹೋಗಬೇಕಾದವರು ಪರದಾಡಿದರು. ರಾತ್ರಿಯವರೆಗೂ ಬಸ್ ನಿಲ್ದಾಣದಲ್ಲಿಯೇ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶಿವಮೊಗ್ಗದಲ್ಲಿ ಒಂದು ಸಾವಿರಕ್ಕೂ ಅಧಿಕ ಚಾಲಕರು ಮತ್ತು ನಿರ್ವಾಹಕರಿದ್ದಾರೆ. ಇವರು ಕರ್ತವ್ಯಕ್ಕೆ ಹಾಜರಾದರೆ ಯಾವುದೇ ಸಮಸ್ಯೆ ಉಲ್ಬಣಿಸುವುದಿಲ್ಲ. ಆದರೆ, ಈಗಿನ ಲಕ್ಷಣಗಳನ್ನು ಗಮನಿಸಿದರೆ ಬಸ್ ಸಂಚಾರ ಅನುಮಾನ ಎನ್ನಲಾಗುತ್ತಿದೆ.
ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಸ್ ಓಡಿಸುವುದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇದುವರೆಗೆ ಎಲ್ಲ ಸಿಬ್ಬದಿ ಕರ್ತವ್ಯಕ್ಕೆ ಹಾಜರಾಗುವ ಭರವಸೆ ನೀಡಿದ್ದಾರೆ. ಹೀಗಾಗಿ, ಎಂದಿನಂತೆ ಬಸ್ ಓಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಎಷ್ಟು ಜನ ಕರ್ತವ್ಯಕ್ಕೆ ಬರುತ್ತಾರೆ ಎಂಬುವುದರ ಬಗ್ಗೆ ಇನ್ನಷ್ಟು ಸ್ಪಷ್ಟತೆ ಇಲ್ಲದಿರುವುದರಿಂದ ಸದ್ಯಕ್ಕೆ ಏನೂ ಹೇಳಲಾಗದು ಎನ್ನುತ್ತವೆ ಸಾರಿಗೆ ಸಂಸ್ಥೆ ಮೂಲಗಳು.
ಪ್ರಯಾಣಿಕರ ಅನುಕೂಲಕ್ಕೆ ಖಾಸಗಿ ಬಸ್ ಸೇವೆ | ಪ್ರಯಾಣಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿ ಜಿಲ್ಲಾಡಳಿತ ಖಾಸಗಿ ಬಸ್ ಸೇವೆ ನೀಡಲು ಮುಂದಾಗಿದೆ. ಈ ಸಂಬಂಧ ಸಾರಿಗೆ ಸಂಸ್ಥೆಯಿಂದ ಮಾಹಿತಿಯನ್ನೂ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ಜಿಲ್ಲೆಯೊಳಗೆ ಖಾಸಗಿ ಬಸ್ ಗಳೇ ಅಧಿಕ ಸಂಖ್ಯೆಯಲ್ಲಿ ಓಡಾಡುವುದರಿಂದ ಪ್ರಯಾಣಿಕರಿಗೆ ಅಷ್ಟೊಂದು ಸಮಸ್ಯೆ ಆಗುವುದಿಲ್ಲ. ಆದರೆ, ಹೊರ ಜಿಲ್ಲೆಯವರಿಗೆ ಖಂಡಿತ ತೊಂದರೆ ಆಗುವ ಸಾಧ್ಯತೆ ಇದೆ.
https://www.suddikanaja.com/2021/03/04/abvp-protest-for-restart-bus-facility-in-shivamogga/