ಸುದ್ದಿ ಕಣಜ.ಕಾಂ| DISTRICT | ASHRAYA MANE
ಶಿವಮೊಗ್ಗ: ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಬೆಂಗಳೂರು ಇವರ ಆದೇಶ ಹಾಗೂ ನಗರ ಆಶ್ರಯ ಸಮಿತಿ ತೀರ್ಮಾನದಂತೆ ನಗರದ ಗೋಪಿಶೆಟ್ಟಿಕೊಪ್ಪ ಗ್ರಾಮದ ಒಟ್ಟು 19 ಎಕರೆ 23 ಗುಂಟೆ ಜಮೀನಿನಲ್ಲಿ ಜಿ+2 ಮಾದರಿಯ ಮನೆಗಳನ್ನು ನಗರದ ನಿವೇಶನರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವೆಬ್ಸೈಟ್ Shivamoggacitycorp.org ಇಲ್ಲಿ 18 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು (ಪುರುಷ ಅಭ್ಯರ್ಥಿಯಾಗಿದ್ದಲ್ಲಿ ಮಾಜಿ ಸೈನಿಕ, ವಿಕಲಚೇತನ, ವಿಧುರ ಹಾಗೂ ಹಿರಿಯ ನಾಗರಿಕ ಅಭ್ಯರ್ಥಿಯಾಗಿರಬೇಕು). ಜುಲೈ 1 ರಿಂದ ಜುಲೈ 31 ರವರೆಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಮೂಲಕ ನಿಗದಿತ ಶುಲ್ಕ ಪಾವತಿಸಲು ಆಗಸ್ಟ್ 7 ಕಡೆಯ ದಿನವಾಗಿದೆ.
READ | ಮಳೆ ಆವಾಂತರ, ಹಲವೆಡೆ ಗದ್ದೆ ಮುಳುಗುವ ಭೀತಿ, ಮನೆಗಳ ಚಾವಣಿ ಕುಸಿತ
ಸಾಮಾನ್ಯ ಪ್ರವರ್ಗ 1, 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅರ್ಜಿದಾರರಿಗೆ ಅರ್ಜಿ ಶುಲ್ಕ 200 ರೂಪಾಯಿ, ಇಎಂಡಿ ಮೊತ್ತ 8000 ರೂ. ಒಟ್ಟು 8200 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಜಿದಾರರಿಗೆ ಅರ್ಜಿ ಶುಲ್ಕ 100 ರೂ., ಇಎಂಡಿ 5000 ರೂ. ಒಟ್ಟು 5100 ರೂ. ಶುಲ್ಕವನ್ನು ಶಿವಮೊಗ್ಗ ನಗರದ ಕೆನರಾ ಬ್ಯಾಂಕ್ನ ಎಲ್ಲ ಶಾಖೆಗಳಲ್ಲಿ, ಬ್ಯಾಂಕ್ ಆಫ್ ಬರೋಡಾದ ಎಸ್.ಆರ್.ಶಾಖೆ, ಇಂಡಿಯನ್ ಬ್ಯಾಂಕ್ನ ಮಹಾನಗರಪಾಲಿಕೆ ಶಾಖೆ ಹಾಗೂ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದು ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಾಗಿರಬೇಕು. ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರಬೇಕು. ಅರ್ಜಿದಾರ ಮತ್ತು ಅವರ ಕುಟುಂಬದವರು ಸ್ವಂತ ನಿವೇಶನ/ಮನೆಯನ್ನು ಹೊಂದಿರಬಾರದು. ಬೇರೆ ಯಾವುದೇ ಯೋಜನೆಯಡಿ ನಿವೇಶನ/ವಸತಿ ಸೌಲಭ್ಯ ಪಡೆದಿರಬಾರದು. ಅರ್ಜಿದಾರರ ಹೆಸರಿನಲ್ಲಿ ಇರುವ ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ ಪತ್ರ(86,000 ರೂ. ಕಡಿಮೆ ಆದಾಯ ಹೊಂದಿರಬೇಕು). ತೃತೀಯ ಲಿಂಗಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು.
READ | ಶಿವಮೊಗ್ಗದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಅರ್ಜಿಯೊಂದಿಗೆ ಈ ದಾಖಲೆ ಲಗತ್ತಿಸಿ
ಅರ್ಜಿದಾರರು ಇತ್ತೀಚಿನ 1 ಪಾಸ್ಪೋರ್ಟ್ ಸೈಜಿನ ಕಲರ್ ಭಾವಚಿತ್ರ, ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ, ಪ.ಜಾ/ಪ.ಪಂ/ ವಿಕಲಚೇತನ/ ಹಿರಿಯನಾಗರೀಕ/ ಮಾಜಿ ಸೈನಿಕ/ ಸೈನಿಕರ ವಿಧವೆಯರು/ ವಿಧುರರು/ ಸ್ವಾತಂತ್ರ್ಯ ಯೋಧರು ಸಕ್ಷಮ ಪ್ರಾಧಿಕಾರದಿಂದ ಪಡೆದಂತಹ ಪ್ರಮಾಣ ಪತ್ರವನ್ನು ಹೊಂದಿರಬೇಕು. ಅರ್ಜಿದಾರರ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಬ್ಯಾಂಕಿನ ಪಾಸ್ ಪುಸ್ತಕ, ವಾರ್ಷಿಕ ಆದಾಯ ಪ್ರಮಾಣ ಪತ್ರ ಈ ದಾಖಲೆಗಳನ್ನು ಹೊಂದಿದ್ದು ಎಲ್ಲಾ ಮೂಲ ದಾಖಲಾತಿಗಳು ಹಾಗೂ ದಾಖಲಾತಿಗಳ ಸಂಖ್ಯೆಗಳನ್ನು ಆನ್ಲೈನ್ ಅರ್ಜಿ ಸಲ್ಲಿಸುವ ಸಮಯದಲ್ಲಿ ಮೂಲ ದಾಖಲೆಯಂತೆ ಮಾಹಿತಿಯನ್ನು ಸ್ಪಷ್ಟವಾಗಿ ಸಲ್ಲಿಸುವುದು. ಅಪೂರ್ಣ ವಿವರ ನೀಡಿದಲ್ಲಿ ಅಥವಾ ತಪ್ಪು ಮಾಹಿತಿ ನೀಡಿದ್ದಲ್ಲಿ ಅರ್ಜಿದಾರರಿಗೆ ಯಾವುದೇ ತಿಳಿವಳಿಕೆ ನೀಡದೆ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ಶಿವಮೊಗ್ಗ ನಗರ ಆಶ್ರಯ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.