ಸುದ್ದಿ ಕಣಜ.ಕಾಂ ಸಾಗರ
SAGAR: ಕೆ.ಅಹ್ಮದ್ ಅಬ್ದುಲ್ ಬಾಕಿ ಎಂಬುವವರ ಬಳಿಯಿಂದ ಲಂಚ (Bribe) ಪಡೆದ ಹಣವನ್ನು ಸ್ಟೌ ಮೇಲಿಟ್ಟು ಸುಟ್ಟ ಪಂಚಾಯಿತಿ ಸದಸ್ಯನನ್ನು ಸೋಮವಾರ ಬಂಧಿಸಲಾಗಿದೆ.
READ | ಶಿವಮೊಗ್ಗ ಟ್ರಯಲ್ ಬ್ಲಾಸ್ಟ್- ಮಂಗಳೂರು ಸ್ಫೋಟಕ್ಕೆ ಕನೆಕ್ಷನ್ ಇದೆ ಎಂ ಗೃಹ ಸಚಿವ ಆರಗ ಜ್ಞಾನೇಂದ್ರ
ಜೋಗ-ಕಾರ್ಗಲ್ (Jog-Kargal) ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸಿ.ಹರೀಶ್ ಎಂಬಾತನನ್ನು ಬಂಧಿಸಲಾಗಿದೆ. ಜೋಗ್ ಫಾಲ್ಸ್ (Jogfalls) ಬಜಾರ್ ಲೈನ್ ನಿವಾಸಿ ಕೆ.ಅಹ್ಮದ್ ಅಬ್ದುಲ್ ಬಾಕಿ ಅವರು ಜೋಗ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ಕೋಳಿ ಮಾಂಸದ ವ್ಯಾಪಾರವನ್ನು ಮಾಡುತ್ತಿದ್ದಾರೆ. ಈ ಅಂಗಡಿಗೆ ಪರವಾನಗಿ ಇಲ್ಲದ ಕಾರಣದಿಂದಾಗಿ ತೆರವುಗೊಳಿಸಲು ಪಂಚಾಯಿತಿಯವರು ಮೌಖಿಕವಾಗಿ ತಿಳಿಸಿದ್ದರು. ಅಹ್ಮದ್ ಅವರು ನವೆಂಬರ್ 14ರಂದು ವ್ಯಾಪಾರ ಪರವಾನಗಿ ನೀಡುವಂತೆ ಪಪಂಗೆ ಮನವಿ ಸಲ್ಲಿಸಿದ್ದರು. ಆದರೂ ಪರವಾನಗಿ ಇಲ್ಲದೇ ವ್ಯಾಪಾರ ಮಾಡುತ್ತಿರುವುದರಿಂದ ಅಂಗಡಿ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರು. ಆಗ ವಾರ್ಡ್ ಸದಸ್ಯ ಹರೀಶ್ ಬಳಿ ಹೋಗಿ ವಿಚಾರ ತಿಳಿಸಿದ್ದಾರೆ. ಅವರು ಮಾಸಿಕ 3 ಸಾವಿರ ರೂ. ನೀಡುವಂತೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದು ಕಷ್ಟವಾಗುತ್ತದೆ ಎಂದು ತಿಳಿಸಿದ್ದಕ್ಕೆ 50 ಸಾವಿರ ರೂ. ನೀಡಿ ಒನ್ ಟೈಂ ಸೆಟಲ್ಮೆಂಟ್ ಮಾಡುವಂತೆ ತಿಳಿಸಿದ್ದಾನೆ. ಅದರಂತೆ ಪೂರ್ಣ ಹಣವನ್ನು ಸೋಮವಾರ ನೀಡಿದ್ದಾರೆ.
ಲೋಕಾಯುಕ್ತರನ್ನು ಕಂಡು ಹಣಕ್ಕೆ ಬೆಂಕಿ
ಅಹ್ಮದ್ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದು, ಹಣ ಪಡೆದ ಹರೀಶ್ ಮನೆಯ ಮೇಲೆಯೇ ದಾಳಿ ನಡೆಸಿದ್ದಾರೆ. ಆಗ ವಿಚಲಿತನಾದ ಹರೀಶ್ ಅವರು ಗ್ಯಾಸ್ ಸ್ಟೌ ಮೇಲೆ ಲಂಚದ ಹಣವನ್ನಿಟ್ಟು ಸುಟ್ಟಿದ್ದಾರೆ. ಅವರನ್ನು ತಕ್ಷಣ ಬಂಧಿಸಲಾಗಿದೆ.
ಕಾರ್ಯಾಚರಣೆ ಕೈಗೊಂಡ ತಂಡದಲ್ಲಿ ಯಾರಿದ್ದರು?
ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಕಚೇರಿಯ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಎಚ್.ರಾಧಾಕೃಷ್ಣ, ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷ ಎನ್.ಮೃತ್ಯುಂಜಯ, ಪೊಲೀಸ್ ನಿರೀಕ್ಷಕ ಎಚ್.ಎಂ.ಜಗನ್ನಾಥ್, ಸಿಬ್ಬಂದಿ ಪ್ರಸನ್ನ, ಪ್ರಶಾಂತ್ ಕುಮಾರ್, ಬಿ.ಲೋಕೇಶಪ್ಪ, ಅರುಣ್ ಕುಮಾರ್, ಪುಟ್ಟಮ್ಮ, ಸಾವಿತ್ರಮ್ಮ, ಗಂಗಾಧರ, ತರುಣ್ ಕುಮಾರ್, ಪ್ರದೀಪ್ ಕುಮಾರ್ ಹಾಜರಿದ್ದರು.
https://suddikanaja.com/2022/11/21/shivamogga-police-raid-at-thirthahalli/