ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆಡಳಿತಾರೂಢ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಅಧಿಕಾರ ಅವಧಿಯಲ್ಲಿ ಎದೆತಟ್ಟಿ ಹೇಳಬಹುದಾದ ಒಂದೇ ಒಂದು ಯೋಜನೆಯನ್ನು ತಿಳಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ (R.Dhruvanarayana) ಸರ್ಕಾರಕ್ಕೆ ಚಾಲೆಂಜ್ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ನೀಡಲಾಗಿದೆ. ಆದರೆ, ಬಿಜೆಪಿ ಇಂತಹ ಹೇಳಿಕೊಳ್ಳಬಹುದಾದ ಯೋಜನೆಗಳನ್ನು ಜನರಿಗೆ ನೀಡಿಲ್ಲ. ಪ್ರಾಣಾಳಿಕೆಯಲ್ಲಿನ 600 ಅಂಶಗಳ ಪೈಕಿ ಬರೀ 60ರಷ್ಟನ್ನೂ ಅನುಷ್ಠಾನಗೊಳಿಸಿಲ್ಲ ಎಂದು ಆರೋಪಿಸಿದರು.
ಶರಾವತಿ ಸಂತ್ರಸ್ತರ ಪರ ಮೇಲ್ಮನವಿ ಸಲ್ಲಿಸಿಲ್ಲವೇಕೆ?
ಶರಾವತಿ ಸಂತ್ರಸ್ತರ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೂ ಏಕೆ ರಾಜ್ಯ ಸರ್ಕಾರ ಮೌನವಾಗಿದೆ? ಎಂದು ಪ್ರಶ್ನಿಸಿದರು.
ಶರಾವತಿ ಸಂತ್ರಸ್ತರು ರಾಜ್ಯಕ್ಕೆ ಬೆಳಕು ನೀಡಿದ್ದಾರೆ. ಆದರೆ, ಈಗ ಅವರ ಬದುಕು ಕತ್ತಲಿನಲ್ಲಿದೆ. ಅದಕ್ಕೋಗೋಸ್ಕರ ಮಲೆನಾಡು ಜನಾಕ್ರೋಶ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಹಾಗೂ ಮಲೆನಾಡಿನ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ನ.28ರಂದು ಆಯನೂರಿನಿಂದ ಬೆಳಗ್ಗೆ 9 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಸುಮಾರು 50,000ಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ.
| ಧ್ರುವನಾರಾಯಣ್, ಕೆಪಿಸಿಸಿ ಕಾರ್ಯಾಧ್ಯಕ್ಷ
ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಆರಂಭಿಸಿ
ಚುನಾವಣೆ ಸಂದರ್ಭದಲ್ಲಿ ಅಮಿತ್ ಶಾ ಅವರು ತೀರ್ಥಹಳ್ಳಿಗೆ ಭೇಟಿ ನೀಡಿದ್ದರು. ಆಗ ಅಡಿಕೆ ಸಂಶೋಧನಾ ಕೇಂದ್ರ ಆರಂಭಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಅದು ನೆರವೇರಿಲ್ಲ. ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜನಾಕ್ರೋಶ ಯಾತ್ರೆಯು ಶಿವಮೊಗ್ಗದ ಎನ್.ಇ.ಎನ್ ಮೈದಾನದವರೆಗೆ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಸಮಾವೇಶ ಜರುಗಲಿದೆ. ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಉಸ್ತುವಾರಿ ಸಯೀದ್ ಅಹಮೆದ್, ಪ್ರಮುಖರಾದ ಇಸ್ಮಾಯಿಲ್ ಖಾನ್ , ಇಕ್ಕೇರಿ ರಮೇಶ್ , ರಮೇಶ್ ಹೆಗ್ಡೆ , ಸೌಗಂಧಿಕಾ , ಬ್ಲಾಕ್ ಅಧ್ಯಕ್ಷ ಕಲೀಮ್ ಪಾಶಾ, ದೀಪಕ್ ಸಿಂಗ್ , ಜಿಲ್ಲಾ ಪದಾಧಿಕಾರಿಗಳಾದ ಚಂದ್ರಬೋಪಾಲ್ , ರಾಜು, ಚಂದ್ರಶೇಖರ್, ಮೂರ್ತಿ, ಮಧು , ವಿಜಯ ಕುಮಾರ್ , ಸಾಮಾಜಿಕ ಜಾಲತಾಣದ ಪ್ರವೀಣ್, ಅರುಣ್, ಸೂಡೂರು ಶಿವಣ್ಣ, ಮಂಜಪ್ಪ ಮುಂತಾದವರಿದ್ದರು.