ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ (Gurudatta Hegde) ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಶುಕ್ರವಾರ ಕೆಎಫ್ಡಿ ಮತ್ತು ಡೆಂಗ್ಯೂ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಿಸಿ ನೀಡಿದ ಸೂಚನೆಗಳೇನು?
1. ಮಳೆ ಕಡಿಮೆ ಆದ ಮೇಲೆ ಡೆಂಗ್ಯೂ ಹೆಚ್ಚುವ ಸಂಭವ ಇದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಡೆಂಗ್ಯೂ ಲಕ್ಷಣಗಳಿರುವವರನ್ನು ಫಿವರ್ ಕ್ಲಿನಿಕ್ಗೆ ಕರೆ ತರಬೇಕು.
2. ಹಾಟ್ಸ್ಟಾಪ್ ಪ್ರದೇಶಗಳಲ್ಲಿ ಸೊಳ್ಳೆ ನಿವಾರಕಗಳನ್ನು ನೀಡಲು ಕ್ರಮ ವಹಿಸಬೇಕು.
3. ಪ್ರತಿ ವಾರ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಬೇಕು. ನಗರ ಭಾಗದಲ್ಲಿ ಆಶಾ, ಅಂಗನವಾಡಿ ಕೊರತೆ ಇರುವ ಕಾರಣ ನರ್ಸಿಂಗ್ ವಿದ್ಯಾರ್ಥಿಗಳನ್ನು ನಿಯೋಜಿಸಬೇಕು.
4. ಮೆಡಿಕಲ್ ಕಾಲೇಜುಗಳ ಫ್ಯಾಮಿಲಿ ಅಡಾಪ್ಷನ್ ಪ್ರೊಗ್ರಾಮ್ ನ್ನು ಡೆಂಗಿ ಸಮಸ್ಯಾತ್ಮಕ ಗ್ರಾಮ/ವಾರ್ಡ್ ಗಳಿಗೆ ವಿಸ್ತರಿಸಬೇಕು.
5. ಉಣ್ಣೆ(Ticks)ಗಳು ಈಗ ವಯಸ್ಕ ಅವಸ್ಥೆಯಲಿದ್ದು ದನ ಮತ್ತು ಎಮ್ಮೆಗಳ ಮೂಲಕ ಮನೆಗಳಿಗೆ ತಲುಪುವುದನ್ನು ತಪ್ಪಿಸಲು ಜಾನುವಾರುಗಳ ಮೈಮೇಲೆ ನಿವಾರಕಗಳ ಲೇಪನ ಮತ್ತು ಲಸಿಕೆ ನೀಡುವ ಮೂಲಕ ಉಣ್ಣಿ ನಿಯಂತ್ರಣ ಮಾಡಲು ಕ್ರಮ ವಹಿಸಬೇಕು.
6. ಟಿಎಚ್ಓ ಮತ್ತು ವೈದ್ಯಾಧಿಕಾರಿಗಳು ತಾಲ್ಲೂಕುಗಳಲ್ಲಿ ಮೇಲ್ವಿಚಾರಣೆ ಕೈಗೊಳ್ಳಬೇಕು. ಪ್ರತಿವಾರ ಲಾರ್ವಾ ಸರ್ವೆ, ಫಾಗಿಂಗ್, ಜ್ವರ ಸಮೀಕ್ಷೆ ನಡೆಸಬೇಕು.
READ | ಭಾರಿ ಮಳೆ, ಶಿವಮೊಗ್ಗದ ಯಾವೆಲ್ಲ ತಾಲೂಕುಗಳಲ್ಲಿ ಜು.20ರಂದು ರಜೆ ಘೋಷಿಸಲಾಗಿದೆ?
ಜಾನುವಾರುಗಳ ವರದಿ ಪಡೆಯಿರಿ
ಜಿಲ್ಲಾ ಪಂಚಾಯಿತಿ ಸಿಇಓ ಎನ್.ಹೇಮಂತ್ ಮಾತನಾಡಿ, ಕೆಎಫ್ಡಿ (kyaskyasanur forest disease) ನಿಯಂತ್ರಣ ಮುನ್ನೆಚ್ಚರಿಕೆ ಕ್ರಮವಾಗಿ ಜಾನುವಾರುಗಳಲ್ಲಿ ಉಣ್ಣಿಗಳನ್ನು ನಿಯಂತ್ರಿಸಲು ಕೆಎಂಎಫ್ ಸಂಪರ್ಕಿಸಿ ಎಂಪಿಸಿಎಸ್ ಸೊಸೈಟಿ ಹಾಗೂ ಪಶುಪಾಲನಾ ಇಲಾಖೆಯಡಿ ನೋಂದಣಿಯಾದ ಜಾನುವಾರುಗಳ ಸಂಖ್ಯೆಯ ವರದಿಯನ್ನು ಪಡೆಯುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಜಾನುವಾರುಗಳು ಹೊರಗಡೆ ಮೇಯುವುದನ್ನು ತಪ್ಪಿಸಬೇಕು ಎಂದರು.
ಪ್ರಸ್ತುತ ಕಾಲೇಜಿನ ವಿದ್ಯಾರ್ಥಿಗಳು ಫ್ಯಾಮಿಲಿ ಅಡಾಪ್ಷನ್ ಪ್ರೊಗ್ರಾಮ್ ನಲ್ಲಿ ಗ್ರಾಮಗಳಲ್ಲಿ 3 ರಿಂದ 4 ಕುಟುಂಬಗಳನ್ನು ಅಡಾಪ್ಟ್ ಮಾಡಿಕೊಂಡಿದ್ದು, 2 ರಿಂದ 3 ಪ್ರದೇಶಗಳಲ್ಲಿ ಸ್ಕ್ರೀನಿಂಗ್ ಶಿಬಿರಗಳನ್ನು ಮಾಡುತ್ತಿದ್ದಾರೆ. ಇಲ್ಲಿ ಡೆಂಗಿ ಕುರಿತು ಅರಿವು ಮೂಡಿಸಲಾಗುವುದು.
– ಡಾ.ಪ್ರವೀಣ್, ಸಿಮ್ಸ್ ಕಾಲೇಜು, ಶಿವಮೊಗ್ಗ
ಜಿಲ್ಲೆಯಲ್ಲಿ 17 ಫೀವರ್ ಕ್ಲಿನಿಕ್
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 360 ಡೆಂಗಿ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು 2 ಸಾವು ದೃಢಪಟ್ಟಿದೆ. ಡೆಂಗಿ ನಿಯಂತ್ರಿಸಲು ಪ್ರತಿ ವಾರ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಫಾಗಿಂಗ್ ಮಾಡಲಾಗುತ್ತಿದೆ. ಈಗ ಶುಕ್ರವಾರಗಳಂದು ನೀರು ಸಂಗ್ರಹಿಸುವ ಪರಿಕರ ಸ್ವಚ್ಚಗೊಳಿಸುವ ಶುಷ್ಕ ದಿನ ಆಚರಿಸಲಾಗುತ್ತಿದೆ. ಜಿಲ್ಲೆಯ 17 ಕಡೆ ಫಿವರ್ ಕ್ಲಿನಿಕ್ ತೆರೆಯಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ 5 ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ 10 ಹಾಸಿಗೆಗಳನ್ನು ಡೆಂಗಿ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಂದಿನ ವಾರದಿಂದ ಹಾರ್ನಹಳ್ಳಿಯಲ್ಲಿ ಫ್ಯಾಮಿಲಿ ಅಡಾಪ್ಶನ್ ಕಾರ್ಯಕ್ರಮದಡಿ ಡೆಂಗಿ ಅರಿವು ಮೂಡಿಸಲಾಗುವುದು.
– ಡಾ.ಬಾಲು, ಸುಬ್ಬಯ್ಯ ಮೆಡಿಕಲ್ ಕಾಲೇಜು, ಶಿವಮೊಗ್ಗ
ಸಭೆಯಲ್ಲಿ ಪಾಲಿಕೆ ಸಿಎಓ ಮೋಹನ್ ಕುಮಾರ್, ಡಿಎಸ್ಓ ಡಾ.ಮಲ್ಲಪ್ಪ, ಡಾ.ಕಿರಣ್, ಡಾ.ಹರ್ಷವರ್ದನ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಐಎಂಎ ಅಧ್ಯಕ್ಷ ಡಾ.ರಮೇಶ್, ಟಿಎಚ್ಓ ಗಳು, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.