ಸುದ್ದಿ ಕಣಜ.ಕಾಂ | DISTRICT | RAILWAY
ಶಿವಮೊಗ್ಗ: ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲೆ ಮಾರ್ಗ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ಅನುಮೋದನೆ ನೀಡಿದ್ದು, ಭೂಸ್ವಾದೀನ ಪ್ರಕ್ರಿಯೆಯನ್ನು ಫೆ.28ರೊಳಗಾಗಿ ಪೂರ್ಣಗೊಳಿಸಿ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಅನುವು ಮಾಡಿಕೊಡುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಹೊಸ ರೈಲ್ವೆ ಮಾರ್ಗದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.
VIDEO REPORT
READ | ಶಿವಮೊಗ್ಗ ನಗರದಲ್ಲಿ ನಾಲ್ಕು ದಿನ ನಿಷೇಧಾಜ್ಞೆ ಜಾರಿ, ಯಾವಾಗಿಂದ ಅನ್ವಯ, ಆದೇಶದಲ್ಲೇನಿದೆ?
ಕಾಮಗಾರಿ ಮಂದಗತಿಗೆ ಬೇಸರ
ಹೊಸ ರೈಲು ಮಾರ್ಗದ ನಿರ್ಮಾಣಕ್ಕೆ ಅನುಮೋದನೆ ದೊರೆತು ವರ್ಷಗಳೇ ಸಂದಿದ್ದರೂ ಯೋಜನೆಯ ಅನುಷ್ಠಾನ ಕಾರ್ಯ ಮಂದಗತಿಯಲ್ಲಿ ಸಾಗಿರುವುದು ಬೇಸರದ ಸಂಗತಿ. ಅನವಶ್ಯಕವಾಗಿ ಕಾಲಹರಣ ಮಾಡದೆ, ಸಂಬಂಧಿಸಿದ ಮಾರ್ಗದಲ್ಲಿ ಜಮೀನು ನೀಡುತ್ತಿರುವ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಧನ ಒದಗಿಸಿ, ಭೂಸ್ವಾದೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಭದ್ರಾವತಿಯ ಕಡದಕಟ್ಟೆ ಸೇರಿದಂತೆ 4 ಕಡೆಗಳಲ್ಲಿ ಕೈಗೊಂಡಿರುವ ಮೇಲ್ಸೇತುವೆ ಕಾಮಗಾರಿಗಳನ್ನು ಗುತ್ತಿಗೆದಾರರು ಹಗಲಿರುಳು ಕಾರ್ಯನಿರ್ವಹಿಸಿ, ಜನರಿಗೆ ಯಾವುದೇ ಅಡಚಣೆಯಾಗದಂತೆ ಹಾಗೂ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಗುರುತಿಸಿ ಅನುಕೂಲ ಮಾಡಿಕೊಡಬೇಕು. ರೈಲ್ವೆ ಮಾರ್ಗಕ್ಕಾಗಿ ಜಮೀನು ಒದಗಿಸಿರುವ ರೈತರಲ್ಲಿರಬಹುದಾದ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ದೊರೆಕಿಸಿಕೊಡಲಾಗುವುದು. ಅದಕ್ಕೂ ಮುನ್ನ ಧರೆಕುಸಿತದ ಹಾಗೂ ಆಕಾರಬಂದ್ ಮಾಡುವ ಪ್ರದೇಶಗಳನ್ನು ಖುದ್ದು ಪರಿಶೀಲಿಸಿ ಕ್ರಮವಹಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಲಾಗುವುದು.
– ಡಾ.ಸೆಲ್ವಮಣಿ, ಜಿಲ್ಲಾಧಿಕಾರಿ
ಸಂಬಂಧಪಟ್ಟ ಗ್ರಾಮದ ಜಮೀನುಗಳ ಮಾಲೀಕರೊಂದಿಗೆ ಮುಕ್ತ ಸಮಾಲೋಚನೆ ನಡೆಸಿ, ಸಹಕಾರ ನೀಡುವಂತೆ ಹಾಗೂ ತ್ವರಿತವಾಗಿ ಪರಿಹಾರ ಧನ ನೀಡುವ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೇ ನ್ಯಾಯಾಲಯಗಳಲ್ಲಿ ದಾವೆ ಹೂಡುವುದರಿಂದ ರೈತರಿಗೆ ಆಗಬಹುದಾದ ನಷ್ಟಗಳ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡುವಂತೆ ತಿಳಿಸಿದರು.
ಭೂ ಸ್ವಾಧೀನಪಡಿಸಿಕೊಳ್ಳುವ ರೈತರ ಜಮೀನಿಗೆ ಭೂದರ ಸಲಹಾ ಸಮಿತಿಯು ನಿಗದಿಪಡಿಸಿದಂತೆ ಪರಿಹಾರ ಧನ ನಿಗದಿಪಡಿಸಲಾಗಿದೆ. ಅದರಂತೆ ಅಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸದರಿ ಪ್ರದೇಶದಲ್ಲಿನ ರೈತರ ಅಹವಾಲುಗಳನ್ನು ಅಧಿಕಾರಿಗಳು ಖುದ್ದಾಗಿ ಆಲಿಸಿ, ಪರಿಹಾರವನ್ನು ಕಂಡುಕೊಳ್ಳಬೇಕು. ಅಲ್ಲಿನ ಆಸ್ತಿಪಾಸ್ತಿಗಳ ಮೌಲ್ಯವನ್ನು ಸರಿಯಾದ ಪ್ರಮಾಣದಲ್ಲಿ ದಾಖಲಿಸುವಂತೆ ಅವರು ಸಲಹೆ ನೀಡಿದರು.
READ | ‘ಓಲ್ಡ್ ಮಾಂಕ್’ ರಹಸ್ಯ ಬಿಚ್ಚಿಟ್ಟ ಡೈರೆಕ್ಟರ್ ಶ್ರೀನಿ, ಶಿವಮೊಗ್ಗ ಬಗ್ಗೆ ಹೇಳಿದ್ದೇನು?
ಪರಿಹಾರ ಧನ ವಿತರಣೆ
ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಬಳಿ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆಗಾಗಿ ರಸ್ತೆಯ ಇಕ್ಕೆಲಗಳ ವಸತಿ ಮತ್ತು ವಾಣಿಜ್ಯ ಪ್ರದೇಶಗಳ ಮಾಲೀಕರಲ್ಲಿ ಬಹುತೇಕರಿಗೆ ಈಗಾಗಲೆ ಪರಿಹಾರ ಧನವನ್ನು ವಿತರಿಸಲಾಗಿದೆ. ಅವರು ಈ ಪ್ರದೇಶದಲ್ಲಿ ಪಾದಚಾರಿಗಳು ಸುಗಮವಾಗಿ ಸಂಚರಿಸುವಂತೆ, ಅಲ್ಲಿನ ವಸತಿಗರಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಅಡಚಣೆಯಾಗದಂತೆ ಗಮನಹರಿಸಬೇಕು. ಇಲ್ಲಿ ನಿರ್ಮಾಣವಾಗುವ ಕೇಳಸೇತುವೆಯಲ್ಲಿ ಮಳೆಗಾಲದಲ್ಲಿ ಮಳೆ ನೀರು ಸಂಗ್ರಹಗೊಂಡು ಅವ್ಯವಸ್ಥೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಲ್ಲದೆ ನಗರದಲ್ಲಿನ ಹಸಿರು ಪರಿಸರ ಹಾಗೂ ನಗರ ಸೌಂದರ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಬಿ.ಎಂ.ಲಕ್ಷ್ಮೀಕಾಂತ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ರೈಲ್ವೆ ಅಧಿಕಾರಿ ಶ್ರೀಧರಮೂರ್ತಿ, ಮೇಯರ್ ಸುನೀತಾ ಅಣ್ಣಪ್ಪ, ದತ್ತಾತ್ರಿ, ಚನ್ನಬಸಪ್ಪ, ಮೇಘರಾಜ್, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಉಪವಿಭಾಗಾಧಿಕಾರಿ ಟಿ.ಬಿ.ಪ್ರಕಾಶ್, ಪೀರ್ಪಾಶಾ ಉಪಸ್ಥಿತರಿದ್ದರು.
https://www.suddikanaja.com/2022/02/07/in-the-union-budget-a-grant-of-rs-50-crore-has-been-announced-for-the-shimoga-shikaripura-ranebennur-railway-line-ambitious-project-connect-between-malnad-to-north-karnataka/