ಸುದ್ದಿ ಕಣಜ.ಕಾಂ | DISTRICT | KSRP
ಶಿವಮೊಗ್ಗ: ಮಾಚೇನಹಳ್ಳಿಯ ಕೆಎಸ್.ಆರ್.ಪಿ (KSRP) ಎಂಟನೇ ಪಡೆಯಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ವತಿಯಿಂದ ವಿಶೇಷ ಮೀಸಲು ಪೊಲೀಸ್ ಕಾನ್’ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚನ ಶನಿವಾರ ಜರುಗಿತು.
ಪ್ರಸ್ತುತ ನಿರ್ಗಮಿತ 224 ಪ್ರಶಿಕ್ಷಣಾರ್ಥಿಗಳಲ್ಲಿ ಹೆಚ್ಚಿನವರು ಉನ್ನತ ವಿದ್ಯಾಭ್ಯಾಸ ಮಾಡಿರುವುದು ವಿಶೇಷವಾಗಿದೆ. 14 ಪ್ರಶಿಕ್ಷಣಾರ್ಥಿಗಳು ಸ್ನಾತಕೋತ್ತರ ಪದವೀಧರರು, 14 ಜನರು ಎಂಜಿನಿಯರ್ ಪದವೀಧರರು, 120 ಜನರು ಪದವೀಧರರು, 62 ಪದವಿಪೂರ್ವ, 1 ಐಟಿಐ, 5 ಡಿಪ್ಲೊಮಾ ಹಾಗೂ 8 ಪ್ರಶಿಕ್ಷಣಾರ್ಥಿಗಳು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಅವಕಾಶ ಸಿಕ್ಕಿದ್ದು ಅದೃಷ್ಟ
ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್.ಹಿತೇಂದ್ರ. ಸಾರ್ವಜನಿಕರಿಗೆ, ಅಶಕ್ತರಿಗೆ ಸಹಾಯ ಮಾಡಲು ಸಾಕಷ್ಟು ಅವಕಾಶ ನೀಡುವ ಹಾಗೂ ಶಿಸ್ತಿಗೆ ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ ತಮಗೆ ಹುದ್ದೆ ದೊರೆತಿರುವುದು ಅದೃಷ್ಟ. ಇಂತಹ ಸಾರ್ವಜನಿಕ ಸೇವೆಯ ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
READ | ಶಿವಮೊಗ್ಗದಲ್ಲಿ ವಧು-ವರರ ಅನ್ವೇಷಣೆಗೆ ಅಗಮುಡಿ ಮೆಟ್ರಿಮೊನಿಯಲ್ ವೆಬ್ ಸೈಟ್
ಪೊಲೀಸ್ ಇಲಾಖೆ ಅತ್ಯಂತ ಶಿಸ್ತಿನ ಇಲಾಖೆಯಾಗಿದ್ದು ತಾವು ಶಿಸ್ತಿನ ಸಿಪಾಯಿಗಳೆಂಬುದನ್ನು ಮರೆಯದೆ ಸಾರ್ವಜನಿಕರಿಗೆ, ಅಶಕ್ತರಿಗೆ ಸಹಾಯ ಮಾಡಬೇಕು. ನಿಮ್ಮಿಂದ ಸಾರ್ವಜನಿಕರು ಹೆಚ್ಚಿನ ಸೇವೆಯನ್ನು ನಿರೀಕ್ಷಿಸುತ್ತಾರೆ. ಈ ನಿಟ್ಟಿನಲ್ಲಿ ತಾವು ಸನ್ನದ್ಧರಾಗಿರಬೇಕು.
ಪ್ರಶಿಕ್ಷಣಾರ್ಥಿಗಳಾಗಿದ್ದ ವೇಳೆ ಅನೇಕ ರೀತಿಯ ಒಳಾಂಗಣ ಮತ್ತು ಹೊರಾಂಗಣ ತರಬೇತಿ ನೀಡಲಾಗಿದ್ದು, ಇದೇ ದೈಹಿಕ ಸದೃಢತೆಯನ್ನು ಉಳಿಸಿಕೊಂಡು ಹೋಗಬೇಕು. ಉತ್ತಮ ಆರೋಗ್ಯವಿದ್ದಲ್ಲಿ ಉತ್ತಮ ಮನಸ್ಸು ಇರುತ್ತದೆ. ಯಾವುದೇ ದುಶ್ಚಟಗಳಿಗೆ ಬೀಳದೆ ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸಬೇಕು. ಉನ್ನತ ವಿದ್ಯಾಭ್ಯಾಸ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ತಮಗೆಲ್ಲ ಇನ್ನೂ ಒಳ್ಳೆಯ ಹುದ್ದೆ ಲಭಿಸಲಿ. ಇಲಾಖೆಯಲ್ಲಿನ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಿರಿ ಎಂದು ಸಲಹೆ ನೀಡಿದರು.
ನಿರ್ಗಮನ ಪ್ರಶಿಕ್ಷಣಾರ್ಥಿಗಳ ಶಿಸ್ತಿನ ಮತ್ತು ಕ್ರಮಬದ್ಧಪಥ ಸಂಚಲನ, ವಾದ್ಯಮೇಳ, ಕನ್ನಡದಲ್ಲಿ ನೀಡಿದ ಕವಾಯತು ಆದೇಶ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆಯಿತು.
ಉಪ ಪೊಲೀಸ್ ಮಹಾ ನಿರೀಕ್ಷಕ ಎಂ.ವಿ.ರಾಮಕೃಷ್ಣ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್, ಇತರೆ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
https://suddikanaja.com/2021/02/16/target-to-ksrp-police-to-reduce-obesity/