ಸುದ್ದಿ ಕಣಜ.ಕಾಂ| KARNATAKA | 30 OCT 2022
ಶಿವಮೊಗ್ಗ(Shivamogga): ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನವೆಂಬರ್ 6ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು, “ಭಾನುವಾರ ನಾನು ಪೂರ್ವಭಾವಿ ಸಭೆ ಕರೆಯುತ್ತಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರು ಈ ಉನ್ನತ ಹುದ್ದೆಗೆ ಆಯ್ಕೆಯಾಗಿರುವುದರಿಂದ ನಮ್ಮ ರಾಜ್ಯಕ್ಕೆ ಒಂದು ದೊಡ್ಡ ಶಕ್ತಿ ಬಂದಿದೆ. 50 ವರ್ಷಗಳ ನಂತರ ರಾಜ್ಯದವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಹಿರಿಯರು, ಪ್ರಾಮಾಣಿಕ ನಾಯಕರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿ” ಎಂದರು.
VIDEO REPORT
READ | ಚೋರಡಿ ಬಳಿ ಬಸ್, ಆಟೋ, ಬೈಕ್ ನಡುವೆ ಸರಣಿ ಅಪಘಾತ, ಸಹಾಯಕ್ಕೆ ಧಾವಿಸಿದ 112
ಪಕ್ಷದ ಎಲ್ಲರಿಗೆ ಶುಭ ಕೋರಲು ಬುಲಾವ್
ನ.6ರಂದು ರಾಜ್ಯದ ಎಲ್ಲ ಕಾರ್ಯಕರ್ತರು ಬಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭ ಕೋರಬಹುದು. ಈ ಕಾರ್ಯಕ್ರಮವನ್ನು ಎಲ್ಲಿ, ಹೇಗೆ ಮಾಡಲಾಗುವುದು ಎಂಬ ಬಗ್ಗೆ ಭಾನುವಾರದ ಚರ್ಚೆ ನಂತರ ನಿಗದಿ ಮಾಡುತ್ತೇವೆ. ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಂಚಾಯಿತಿ ಸದಸ್ಯರು, ಮುಖಂಡರು, ಜಿಲ್ಲಾ ಕಾಂಗ್ರೆಸ್ ನಾಯಕರು ಸೇರಿದಂತೆ ವಿವಿಧ ಸೆಲ್ ಮುಖ್ಯಸ್ಥರು ಈ ಕಾರ್ಯಕ್ರಮಕ್ಕೆ ಆಗಮಿಸಲು ತಯಾರಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಶಿವಮೊಗ್ಗದಲ್ಲಿ ಬದಲಾವಣೆಯ ಗಾಳಿ ಬೀಸಿದೆ
ಶಿವಮೊಗ್ಗ ಜಿಲ್ಲೆ ಕಾಂಗ್ರೆಸ್ ಪಕ್ಷ ಸಂಘಟನೆ ಬಗ್ಗೆ ಕೇಳಿದಾಗ, ‘ಶಿವಮೊಗ್ಗದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. 1999ರಲ್ಲಿ ಯಾವ ರೀತಿ ಬದಲಾವಣೆ ಆಯಿತೊ, ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆದಾಗ ಹೇಗೆ ಬಿಜೆಪಿಯ ದೊಡ್ಡ ನಾಯಕರು ಸೋಲನ್ನನುಭವಿಸಿದ್ದರೋ ಅಂತಹುದೇ ವಾತಾವರಣ ಈಗ ನಿರ್ಮಾಣವಾಗಿದೆ’ ಎಂದು ಹೇಳಿದರು.
READ | ಕಣ್ಣಿಗೆ ಖಾರದ ಪುಡಿ ಎರಚಿ ಬಿಯರ್ ಬಾಟಲಿಯಿಂದ ಹಲ್ಲೆ
ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪಗೆ ಓಪನ್ ಚಾಲೆಂಜ್
ಮುಂದಿನ ತಿಂಗಳು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (Global Capital Investors Conference) ನಡೆಯುತ್ತಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಉದ್ದಿಮೆದಾರರನ್ನು ಕರೆತಂದು ಶಿವಮೊಗ್ಗದಲ್ಲಿ ಬಂಡವಾಳ ಹೂಡುವಂತೆ ಮಾಡಲಿ. ಇಲ್ಲಿನ ಜನರಿಗೆ ಉದ್ಯೋಗ ಕೊಡಿಸಲಿ ಎಂದು ಚಾಲೆಂಜ್ ಮಾಡಿದರು.
ಇವರು ನಿರ್ಮಾಣ ಮಾಡಿರುವ ವಾತಾವರಣ ಇಡೀ ಶಿವಮೊಗ್ಗ ಜಿಲ್ಲೆಗೆ ಕಪ್ಪು ಚುಕ್ಕೆ ತಂದಿದೆ. ಯಾರಾದರೂ ಉದ್ದಿಮೆದಾರಿಗೆ ಇಲ್ಲಿ ಉತ್ತಮ ವಾತಾವರಣ ಇದೆ. ಇಲ್ಲಿಗೆ ಬಂದು ಉದ್ದಿಮೆ ಆರಂಭಿಸಿ ಎಂದು ಆಹ್ವಾನಿಸಿ 5 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿಸಲಿ. ಯಾರ್ಯಾರು ಇಲ್ಲಿ ಬಂಡವಾಳ ಹೂಡಿಕೆ ಮಾಡುತ್ತಾರೋ ನೋಡೋಣ ಎಂದು ಹೇಳಿದರು.
ಮಲೆನಾಡಿನ ರೈತರ ಸಮಸ್ಯೆ ಅರಿಯಲು ಸಮಿತಿ ರಚನೆ
ಈ ವಿಚಾರವನ್ನು ಶಿವಮೊಗ್ಗದ ನಾಗರಿಕರು ಅರಿತುಕೊಳ್ಳಬೇಕು. ಈ ಭಾಗದ ರೈತರಿಗೆ ಅರಣ್ಯ ಕಾಯ್ದೆ, ಶರಾವತಿ ನೀರು, ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ ರೈತರ ಸಮಸ್ಯೆ, ಅಡಿಕೆ ಬೆಳೆ ಸಮಸ್ಯೆ ಹೆಚ್ಚಾಗಿದ್ದು, ಇವರಿಗೆ ರಕ್ಷಣೆ ಇಲ್ಲವಾಗಿದೆ. ಈ ವಿಚಾರವಾಗಿ ಸ್ಥಳೀಯ ನಾಯಕರಾದ ರಮೇಶ್ ಹೆಗಡೆ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇನೆ. ಅವರು ಒಂದು ತಿಂಗಳಲ್ಲಿ ವರದಿ ನೀಡಲಿದ್ದು, ಈ ಭಾಗದ ರೈತರ ಹಿತ ಕಾಯಲು ಯಾವ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
https://suddikanaja.com/2022/10/29/operation-lotus-was-also-done-on-mla-bk-sangamesh-leader-of-the-opposition-in-the-legislative-assembly-siddaramaiah-alleged-at-bhadravathi/