ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯವನ್ನು ಸಂಪೂರ್ಣ ಬರಗಾಲವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಹೋರಾಟಗಾರರು, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಬರಗಾಲದಿಂದ ರೈತರ ಬೆಳೆ ನಾಶವಾಗಿದೆ. ಎಷ್ಟೋ ಕಡೆ ಬಿತ್ತನೆಯೇ ಆಗಿಲ್ಲ. ರೈತರು ಸಾಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷಗಳು ಮುಂಬರುವ ಚುನಾವಣೆಯ ಗುಂಗಿನಲ್ಲಿದ್ದಾರೆ. ರೈತರು ತಮ್ಮ ಉಳಿವಿಗಾಗಿ ಪರಿತಪಿಸುವಂತಾಗಿದೆ. ಕೃಷಿ ಪಂಪ್ ಸೆಟ್ಟುಗಳಿಗೂ ವಿದ್ಯುತ್ ಇಲ್ಲವಾಗಿದೆ. ಆದ್ದರಿಂದ
ರಾಜ್ಯ ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
READ | ಹಲವು ರೈಲು ಸಂಚಾರ ರದ್ದ, ಕೆಲವು ರೈಲುಗಳ ಸಮಯ ಬದಲಾವಣೆ
ಬೇಡಿಕೆಗಳೇನು?
- ರೈತರ ಸಾಲ ಮನ್ನಾ ಮಾಡಬೇಕು.
- ಕಾಡುಪ್ರಾಣಿ ಮತ್ತು ಮಂಗಗಳ ಹಾವಳಿಯಿಂದ ರೈತನ ಬೆಳೆ ಹಾಳಾಗುತ್ತಿದ್ದು, ಮಂಗಗಳನ್ನು ಹಿಡಿದು ಹೊರಹಾಕಬೇಕು.
- ರಬ್ಬರ್ ಬೆಳೆಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು.
- ಶಿಕಾರಿಪುರ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು.
- ಪುರದಾಳು ಗ್ರಾಪಂನ ಗ್ರಾಮ ಠಾಣಾ ನಿವೇಶನಗಳಿಗೆ ಕಾನೂನು ಬಾಹಿರವಾಗಿ ಹಕ್ಕುಪತ್ರ ನೀಡಿರುವ ಬಗ್ಗೆ ತನಿಖೆ ನಡೆಸಬೇಕು.
ಧರಣಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಕೆ. ರಾಘವೇಂದ್ರ, ಪಿ.ಡಿ. ಮಂಜಪ್ಪ, ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಆರ್. ಚಂದ್ರಶೇಖರ್, ಹನುಮಂತಪ್ಪ, ಜ್ಞಾನೇಶ್, ಸಿ. ಚಂದ್ರಪ್ಪ, ಕಸೆಟ್ಟಿ ರುದ್ರೇಶ್ ಸುಗಂಧರಾಜು ಮತ್ತಿತರರು ಇದ್ದರು.