ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದ ಕೃಷಿ ನಗರದ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಪ್ರಕಾಶ್ ಮತ್ತು ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂಬುವವರ ಮನೆ ಲೋಕಾಯುಕ್ತರು ಶುಕ್ರವಾರ ಬೆಳ್ಳಂಬೆಳಗ್ಗೆಯೇ ದಾಳಿ ಮಾಡಿದ್ದಾರೆ. ಇಬ್ಬರ ಬಳಿಯೂ ಕೋಟಿಗಟ್ಟಲೇ ಹಣ, ಆಸ್ತಿ ಪತ್ತೆಯಾಗಿದೆ. ರಾತ್ರಿ 9.30 ಗಂಟೆಯಾದರೂ ದಾಖಲೆಗಳ ಪರಿಶೀಲನೆ ನಡೆಯುತ್ತಲೇ ಇತ್ತು.
ಇವರಿಬ್ಬರ ಮೇಲೆಯೂ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇರೆಗೆ ಲೋಕಾಯುಕ್ತ ದಾಳಿ ಮಾಡಲಾಗಿದೆ. ಎಸ್.ಪಿ ಮಂಜುನಾಥ್ ಚೌದರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. 45ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
READ | ಶಿವಮೊಗ್ಗ, ಭದ್ರಾವತಿಯಲ್ಲಿ ಲೋಕಾಯುಕ್ತ ದಾಳಿ, ಇನ್ನೂ ಮುಂದುವರಿದಿದೆ ದಾಖಲೆ ಪರಿಶೀಲನೆ
ಯಾರ ಬಳಿ ಸಿಕ್ಕಿದ್ದೇನು?
→ ಜಿ.ಎನ್.ಪ್ರಕಾಶ್, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ
ಕೃಷಿನಗರದ ಮನೆ ಸೇರಿ ಮೂರು ಕಡೆಗಳಲ್ಲಿ ದಾಳಿ ನಡೆದಿದೆ. ಒಟ್ಟು ₹2.07 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಪ್ರಕಾಶ್ ಹೆಸರಿನಲ್ಲಿ ಎರಡು ವಾಸದ ಮನೆಗಳು, ಎರಡು ಎಕರೆ ಎಂಟು ಗುಂಟೆ ಜಮೀನಿದೆ. ಇದರ ಮಾರುಕಟ್ಟೆ ಮೌಲ್ಯ ₹1.40 ಕೋಟಿ ಇದೆ ಎಂದು ಅಂದಾಜಿಸಲಾಗಿದೆ.
ಇವರ ಮನೆಯಲ್ಲಿ ₹12.86 ಲಕ್ಷ ನಗದು, ₹38.32 ಲಕ್ಷ ಮೌಲ್ಯದ ಚಿನ್ನಾಭರಣ, ₹11.30 ಲಕ್ಷ ಮೌಲ್ಯದ ಇತರೆ ಸಾಮಗ್ರಿಗಳು ಪತ್ತೆಯಾಗಿರುವುದಾಗಿ ಲೋಕಾಯುಕ್ತರು ಪ್ರಕಟನೆ ತಿಳಿಸಿದೆ.
→ ಬಿ.ನಾಗೇಶ್, ಅಂತರಗಂಗೆ ಗ್ರಾಪಂ ಅಧ್ಯಕ್ಷ
ಭದ್ರಾವತಿಯಲ್ಲಿ ಐದು ಕಡೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಈತ ಕಾಂಗ್ರೆಸ್ ಮುಖಂಡನಾಗಿದ್ದು, ಒಟ್ಟು ₹2.19 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಈತನ ಬಳಿ ಎರಡು ನಿವೇಶನ, ಐದು ಎಕರೆ 14 ಗುಂಟೆ ಕೃಷಿ ಭೂಮಿ ಇದೆ. ಇವುಗಳ ಮೌಲ್ಯ ಅಂದಾಜು ₹1.92 ಕೋಟಿ ಇದೆ. ಮನೆಯಲ್ಲಿ ₹5.71 ಲಕ್ಷ ನಗದು, ₹12.80 ಲಕ್ಷ ಮೌಕ್ಯದ ಚಿನ್ನಾಭರಣ, ₹1.76 ಲಕ್ಷ ಮೌಲ್ಯದ ವಾಹನಗಳು, ₹7 ಲಕ್ಷ ಮೌಲ್ಯದ ಇತರೆ ವಸ್ತುಗಳು ಸಿಕ್ಕಿವೆ.