ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಳೆಯಿಂದ ಮೆಕ್ಕೆ ಮತ್ತು ಭತ್ತದ ಮೇಲೆ ಆಗಬಹುದಾದ ಅಡ್ಡಪರಿಣಾಮ ಮತ್ತು ಮುಂಜಾಗ್ರತೆಯ ಬಗ್ಗೆ ಶಿವಮೊಗ್ಗ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಟಿ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ವಾಡಿಕೆಗಿಂತ 134 ಮಿಮೀ ಅಧಿಕ ಮಳೆ
ತಾಲೂಕಿನಾದ್ಯಂತ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣ ಮಳೆಯಾಗುತ್ತಿದೆ. ಜುಲೈ ಒಂದರಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ 286 ಮಿ.ಮೀ. (ವಾಡಿಕೆ 134 ಮಿಮೀ) ಮಳೆ ಆಗಿದೆ. ಇಲ್ಲಿಯವರೆಗೆ ವಾಡಿಕೆಗಿಂತ ಶೇ.113 ರಷ್ಟು ಅಧಿಕ ಮಳೆ ಬಂದಿರುತ್ತದೆ. ಹವಾಮಾನ ಇಲಾಖೆಯ ಪ್ರಕಾರ ಇನ್ನು ಒಂದು ವಾರದವರೆಗೆ ಇದೇ ರೀತಿ ಮಳೆ ಮುಂದುವರೆಯುವ ಮುನ್ಸೂಚನೆಯಿದ್ದು, ಸಹಾಯಕ ಕೃಷಿ ನಿರ್ದೇಶಕರು ಜಿಲ್ಲೆಯ ಹಾನಿಗೊಳಗಾದ ರೈತರುಗಳಿಗೆ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.
RAED | ಶಿವಮೊಗ್ಗದಲ್ಲಿ ಲೋಕಾಯುಕ್ತ ಬಲೆಗೆ ಕೋಟಿ ಕುಳಗಳು, ಪಂಚಾಯಿತಿ ಅಧ್ಯಕ್ಷನ ಬಳಿ ಕೋಟಿ ನಗದು, ಅಧಿಕಾರಿಯೂ ಸಾಹುಕಾರ
ಮೆಕ್ಕೆಜೋಳಕ್ಕೆ ವಹಿಸಬೇಕಾದ ಎಚ್ಚರಿಕೆ
ತಾಲ್ಲೂಕಿನ ಪ್ರಮುಖ ಕೃಷಿ ಬೆಳೆಯಾಗಿರುವ ಮೆಕ್ಕೆಜೋಳ ಈಗಾಗಲೇ ಸುಮಾರು 13,582 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು 30 ರಿಂದ 50 ದಿನಗಳ ಹಂತದಲ್ಲಿರುತ್ತದೆ.
* ಕಾಲುವೆ ಹಾಗೂ ಕೆರೆಯ ಪಕ್ಕದಲ್ಲಿರುವ ರೈತರ ಜಮೀನುಗಳಲ್ಲಿ ನೀರು ನಿಂತಿರುವುದು ಕಂಡುಬಂದಿದ್ದು, ಇತರೆ ರೈತರ ಜಮೀನುಗಳಲ್ಲಿ ಪ್ರಸ್ತುತ ಯಾವುದೇ ಹಾನಿ ಆಗಿರುವುದು ಕಂಡುಬಂದಿರುವುದಿಲ್ಲ. ಒಂದು ವೇಳೆ ರೈತರ ಜಮೀನಿನಲ್ಲಿ ನೀರು ನಿಂತಿದ್ದರೆ ಬಸಿಗಾಲುವೆ ಮಾಡಿ ಹೊರಹಾಕಬೇಕು.
* ಹೆಚ್ಚಿನ ತೇವಾಂಶದಿಂದಾಗಿ ಬೆಳೆಯಲ್ಲಿ ಪೋಷಕಾಂಶ ಕೊರತೆಯು ಉಂಟಾಗುವುದರಿಂದ ಮಳೆ ನಿಂತ ನಂತರ ಒಂದು ವೇಳೆ ಬೆಳೆಯು ತಿಳಿ ಹಳದಿ ಬಣ್ಣಕ್ಕೆ ತಿರುಗಿದ್ದರೆ ನ್ಯಾನೊ ಯೂರಿಯಾ ಅಥವಾ ನ್ಯಾನೊ ಡಿಎಪಿ (2.5mಟ ಪ್ರತಿ ಲೀಟರ್ ನೀರಿಗೆ) ಅಥವಾ 19:19:19 ನೀರಿನಲ್ಲಿ ಕರಗುವ ರಸಗೊಬ್ಬರ (2.5 ಗ್ರಾಂ ಪ್ರತಿ ಲೀಟರ್ ನೀರಿಗೆ)ವನ್ನು ಸಿಂಪರಣೆ ಮಾಡಬೇಕು
* ಬೆಳೆಯು ತಿಳಿ ಹಸಿರು ಬಣ್ಣದಲ್ಲಿದ್ದರೆ ಎಕರೆಗೆ 20 ಕೆಜಿಯಷ್ಟು ಯೂರಿಯಾ ಮತ್ತು 10 ಕೆಜಿ ಪೊಟ್ಯಾಶ್ ಅನ್ನು ಹಾಕಿ. ಕೇದಿಗೆ ಮತ್ತು ಎಲೆ ಚುಕ್ಕೆ ರೋಗದ ಬಾಧೆ ಕಂಡುಬರುವ ಸಾಧ್ಯತೆ ಇರುವುದರಿಂದ ಮೆಟಾಲಾಕ್ಸಿಲ್+ಮ್ಯಾಂಕೊಜೆಬ್ ಶಿಲೀಂದ್ರನಾಶಕ (2 ಗ್ರಾಂ ಪ್ರತಿ ಲೀಟರ್ ನೀರಿಗೆ) ವನ್ನು ಮುಂಜಾಗ್ರತಾ ಕ್ರಮವಾಗಿ ಸಿಂಪಡಿಸಬೇಕು.
* ಮೆಕ್ಕೆಜೋಳ ಬೆಳೆಗೆ ಜು. 31ರವರೆಗೆ ಹಾಗೂ ಭತ್ತದ ಬೆಳೆಗೆ ಆಗಸ್ಟ್ 16ರವರೆಗೆ ಪ್ರದಾನ ಮಂತ್ರಿ ಫಸಲ್ ಬಿಮಾ (Pradhan Mantri Fasal Bima Yojana – PMFBY) ಯೋಜನೆಯಡಿ ನೋಂದಾಯಿಸಿಕೊಳ್ಳಲು ಅವಕಾಶವಿದೆ.
* ರೈತರು ಹೆಚ್ಚಿನ ಸಂಖ್ಯೆಯಲ್ಲಿ ವಿಮಾ ಕಂತು ಪಾವತಿಸಿ ನೋಂದಾಯಿಕೊಳ್ಳಿ. ಅತಿಯಾದ ಮಳೆಯಿಂದಾಗಿ ಬೆಳೆಯು ಸಂಪೂರ್ಣವಾಗಿ ಹಾಳಾಗಿದ್ದಲ್ಲಿ ವೈಯಕ್ತಿಕವಾಗಿ ಪರಿಹಾರ ನೀಡಲು ವಿಮಾ ಯೋಜನೆಯಡಿ ಅವಕಾಶವಿರುವುದರಿಂದ, ಮೆಕ್ಕೆಜೋಳ ಬೆಳೆಗೆ ವಿಮಾ ಯೋಜನೆಯಡಿ ನೋಂದಾಯಿಸಿಕೊಂಡಿರುವ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದಲ್ಲಿ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ವಿಮಾ ನೊಂದಣಿ ಪತ್ರ ಮತ್ತು ಆಧಾರ್ ಕಾರ್ಡ್ ನೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.