ಸುದ್ದಿ ಕಣಜ.ಕಾಂ
ಶಿವಮೊಗ್ಗ: ಉಂಬ್ಳೇಬೈಲು ಅರಣ್ಯ ಪ್ರದೇಶದ ವ್ಯಾಪ್ತಿಯ ಅಕ್ಕಪಕ್ಕದ ಜನರ ನಿದ್ದೆಗೆಡಿಸಿರುವ ಕಾಡಾನೆ ಹಿಡಿಯುವುದಕ್ಕೆ ಅರಣ್ಯ ಇಲಾಖೆ ಮನಸ್ಸು ಮಾಡಿದೆ. ಅದಕ್ಕಾಗಿ, ಆದೇಶ ಕೂಡ ನೀಡಿದ್ದು, ಇನ್ನೆರಡು ದಿನಗಳಲ್ಲಿ ಕಾರ್ಯಾಚರಣೆಯ ಸಾಧ್ಯತೆ ಇದೆ.
ಉಂಬ್ಳೇಬೈಲು ಭಾಗದಲ್ಲಿ ಕಳೆದ ಐದಾರು ವರ್ಷಗಳಿಂದ ಬೆಳೆ ಹಾನಿ ಮಾಡುತ್ತ ಓಡಾಡುತ್ತಿರುವ ಸಲಗ ಹಲವು ಸಲ ಜನರ ಕಣ್ಣಿಗೂ ಕಾಣಿಸಿಕೊಂಡಿದೆ.
ಎಲ್ಲೆಲ್ಲಿ ಹಾನಿ | ಉಂಬ್ಳೇಬೈಲು, ಕೈದೊಟ್ಲು, ಯರಗನಾಳ್, ತೋಟದಕೆರೆ, ಹುರುಳಿಹಳ್ಳಿ, ಸಾರಿಗೆರೆ, ಹಾಲ್ ಲಕ್ಕವಳ್ಳಿ ಮುಂತಾದ ಕಡೆಗಳಲ್ಲಿ ಈ ಸಲ ಬೆಳೆ ಹಾನಿ ಮಾಡಿದೆ ಎಂಬುವುದು ಗ್ರಾಮಸ್ಥರ ಆರೋಪವಾಗಿದೆ.
ಕಾರ್ಯಾಚರಣೆಗೆ ಸಾಗರನ ನೇತೃತ್ವ | ಜನರಲ್ಲಿ ಭಯ ಹುಟ್ಟಿಸಿರುವ ಕಾಡಾನೆಯನ್ನು ಹಿಡಿಯುವುದಕ್ಕೆ ಸಕ್ರೆಬೈಲು ಆನೆಬಿಡಾರದಲ್ಲಿರುವ ಸಾಗರ ನೇತೃತ್ವ ವಹಿಸಲಿದ್ದಾನೆ. ಕಾರ್ಯಾಚರಣೆಯಲ್ಲಿ ಇನ್ನೊಂದು ಗಂಡಾನೆ ಹಾಗೂ ಹೆಣ್ಣಾನೆಯನ್ನು ಬಳಸಲಾಗುವುದು.
ಈಗಾಗಲೇ ಹಲವು ಕಾಡಾನೆಗಳನ್ನು ಹಿಡಿದು ಅನುಭವ ಹೊಂದಿರುವ ಸಾಗರ ಇದರ ನೇತೃತ್ವ ವಹಿಸುವುದಂತೂ ಕಾಯಂ ಆಗಿದೆ.