ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಖಡಕ್ ಆದೇಶ ನೀಡಿದ್ದಾರೆ.
ಜಲಾಮೃತ ಯೋಜನೆ ಅಡಿ ಕೆರೆಗಳ ಹೂಳೆತ್ತುವಿಕೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೊದಲು ಒತ್ತುವರಿಗಳನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಲಾಮೃತ ಹಾಗೂ ಕೆರೆ ಸಂಜೀವಿನಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು.
ಇದನ್ನೂ ಓದಿ । ಇಂದು ಮಧ್ಯಾಹ್ನ ಆಪರೇಷನ್ ಸಲಗ ಫಿನಿಷ್
1.20 ಕೋಟಿ ರೂ. ಪ್ರಸ್ತಾವನೆ | 2020-21ನೇ ಸಾಲಿನಲ್ಲಿ ಯೋಜನೆ ಅಡಿ 1.20 ಕೋಟಿ ರೂಪಾಯಿ ವೆಚ್ಚದಲ್ಲಿ 24 ಬದಲಿ ಕೆರೆಗಳ ಹೂಳೆತ್ತುವ ಕಾಮಗಾರಿಗಳ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಲಾಮೃತ ಯೋಜನೆ ಅಡಿ ಸಣ್ಣ ನೀರಾವರಿ ಕೆರೆಗಳು ಮತ್ತು ಸಾಂಪ್ರದಾಯಿಕ ಜಲಮೂಲಗಳಾದ ಕಲ್ಯಾಣಿ, ಕುಂಟೆ, ಗೋಕಟ್ಟೆ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಇದೇ ರೀತಿ ಅಗತ್ಯವಿರುವ ಕಡೆಗಳಲ್ಲಿ ವೈಜ್ಞಾನಿಕಾಗಿ ಹೊಸದಾಗಿ ಜಲಮೂಲಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೇ ರೀತಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಬಾವಿ, ಕೊಳವೆಬಾವಿ ಸುತ್ತ ಮಳೆ ನೀರು ಮರುಪೂರಣ ಘಟಕಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
– ಎಂ.ಎಲ್.ವೈಶಾಲಿ, ಸಿಇಒ, ಜಿಲ್ಲಾ ಪಂಚಾಯಿಯಿ, ಶಿವಮೊಗ್ಗ
2019-20ನೇ ಸಾಲಿನಲ್ಲಿ ಉಳಿಕೆಯಾಗಿರುವ 1.42 ಕೋಟಿ ರೂಪಾಯಿ ಮೊತ್ತದಲ್ಲಿ ಸಾಗರ ವಿಭಾಗದಲ್ಲಿ 29 ಕೆರೆ ಹಾಗೂ ಶಿವಮೊಗ್ಗ ವಿಭಾಗದಲ್ಲಿ 92 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಕೆರೆ ಕಾಮಗಾರಿ ಪ್ರಸ್ತಾವನೆಯನ್ನು ಅನುಮೋದನೆಗೆ ಸಲ್ಲಿಸಲು ನಿರ್ಧರಿಸಲಾಯಿತು. * ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಾ ನಾಯ್ಕ ಕೆರೆ ಅಭಿವೃದ್ಧಿಗೆ ಅಂದಾಜು 22 ಲಕ್ಷ ರೂ. ಪ್ರಸ್ತಾವನೆಯನ್ನು ಸಲ್ಲಿಸಲು ತೀರ್ಮಾನಿಸಲಾಯಿತು.
ಎಲ್ಲಿ ಎಷ್ಟು ಕಾಮಗಾರಿ ಪೂರ್ಣ?
- ಸಾಗರ ವಿಭಾಗದಲ್ಲಿ ಯೋಜನೆಯಡಿ 15 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ 14 ಪೂರ್ಣಗೊಂಡಿವೆ. 3.59 ಕೋಟಿ ರೂ. ಬಿಡುಗಡೆಯಾಗಿದ್ದು 3ಕೋಟಿ ರೂ. ಖರ್ಚಾಗಿದೆ.
- ಶಿವಮೊಗ್ಗ ವಿಭಾಗದಲ್ಲಿ 16 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 14 ಪೂರ್ಣಗೊಂಡಿವೆ. 1.60 ಕೋಟಿ ರೂ. ಬಿಡುಗಡೆಯಾಗಿದ್ದು 1 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಕೆರೆ ಸಂಜೀವಿನಿ ಯೋಜನೆಯಡಿ ಶಿವಮೊಗ್ಗ ಹಾಗೂ ಸಾಗರ ವಿಭಾಗಗಳಿಂದ 15.77 ಕೋಟಿ ರೂ. ವೆಚ್ಚದಲ್ಲಿ 267 ಕೆರೆಗಳ ಹೂಳೆತ್ತುವ ಕಾಮಗಾರಿಗಳ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಅವುಗಳ ಪೈಕಿ ಪ್ರತಿ ತಾಲೂಕಿನಲ್ಲಿ ತಲಾ 10 ಕೆರೆಗಳಂತೆ 5.51 ಕೋಟಿ ರೂ. ವೆಚ್ಚದಲ್ಲಿ 69 ಕೆರೆಗಳ ಹೂಳೆತ್ತುವ ಕಾಮಗಾರಿಗಳನ್ನು ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ರಂಗಸ್ವಾಮಿ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.