ಸುದ್ದಿ ಕಣಜ.ಕಾಂ
ಭದ್ರಾವತಿ: ನಗರದ ಕನಕ ಮಂಟಪ ಮೈದಾನದಲ್ಲಿ ಆಯೋಜಿಸಿದ್ದ 2 ದಿನಗಳ ಕಬ್ಬಡ್ಡಿ ಹೊನಲು ಬೆಳಕಿಗೆ ಪಂದ್ಯಾವಳಿ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾನುವಾರ ಜಗಳವಾಗಿದೆ.
ಪ್ರೊ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು. ಆದರೆ, ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದವಾಗಿದೆ. ನಂತರ ಅದು ವಿಕೋಪಕ್ಕೆ ತಿರುಗಿದೆ.
ಕಾರಣವೇನು | ಸ್ನೇಹ ಜೀವಿ ಉಮೇಶ್ ಅವರ ಮಲ್ನಾಡ್ ವಾರಿಯರ್ಸ್ ತಂಡ ವಿನ್ನರ್ ಆಗಿದ್ದು, ಧರ್ಮಪ್ರಸಾದ್ ಅವರ ಸ್ಟೀಲ್ ಟೈಂ ಟೀಂ ರನ್ನರ್ ಅಪ್ ಆಗಿದೆ. ಇದು ಇಷ್ಟಕ್ಕೆ ಇದ್ದಿದ್ದರೆ ಪಂದ್ಯವೇ ಮುಕ್ತಾಯವಾಗುತ್ತಿತ್ತು. ಆದರೆ, ಧರ್ಮಪ್ರಸಾದ್ ಅವರ ತಂಡದ ಪ್ಲೇಯರ್ ವೊಬ್ಬರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದಾರೆಂದು ತಿಳಿದುಬಂದಿದೆ. ಆಗ, ಕಾಂಗ್ರೆಸ್ಸಿನ ಕೆಲವರು ಆಕ್ಷೇಪಿಸಿದ್ದಾರೆ. ಈ ವಿಚಾರ ಮಾರಾಮಾರಿಯ ಸ್ವರೂಪ ಪಡೆದುಕೊಂಡಿದೆ ಎಂದು ಗೊತ್ತಾಗಿದೆ.
ಪೊಲೀಸರು ಲಾಠಿ ಚಾರ್ಜ್ | ಏಕಾಏಕಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಹೀಗಾಗಿ, ಪೊಲೀಸರು ಪೇಚಿಗೆ ಸಿಲುಕಿದರು. ಬಳಿಕ ಅನಿವಾರ್ಯವಾಗಿ ಲಘು ಲಾಠಿ ಪ್ರಹಾರದ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಫಲರಾದರು.
ಐದಾರು ಜನ ಆಸ್ಪತ್ರೆಗೆ ದಾಖಲು | ಬಿಜೆಪಿ ಮುಖಂಡ ಧರ್ಮಪ್ರಸಾದ್ ಹಾಗೂ ನಕುಲ್, ಬಜರಂಗದಳದ ಸುನೀಲ್ ಕುಮಾರ್ ಸೇರಿ ಐದಾರು ಜನರ ಮೇಲೆ ಹಲ್ಲೆ ಮಾಡಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲಿಯೂ ಪರವಿರೋಧದ ದನಿ ಎದ್ದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಭೇಟಿ ನೀಡಿ ಪರಿಶೀಲಿಸಿದ್ದಾರೆ.