12ನೇ ಶತಮಾನದ ಶಾಸನವೊಂದರಲ್ಲಿ ಪೂಜೆ ಎಂದರೆ ಹೇಗಿರಬೇಕು. ಯಾವ ವಿಧಾನಗಳಲ್ಲಿ ಪೂಜಿಸಿದರೆ ಸಮಾಜಕ್ಕೆ ಒಳಿತಾಗುವುದು ಎಂಬ ವಿವರಣೆಯನ್ನು ನೀಡಲಾಗಿದೆ.
ರೇಚರಸನೆಂಬ ಚಾಲುಕ್ಯರ ದಂಡನಾಯಕನು 12ನೇ ಶತಮಾನದಲ್ಲಿ ಅನೇಕ ಧರ್ಮ ಪ್ರಸಂಗಗಳಿಗೆ ಕಾರಣವಾದ ದೈವಾರಾಧಕನಾಗಿದ್ದಾನೆ. ಆತನು ಬನವಾಸಿ 12,000 ನಾಡನ್ನು ಆಳುತಿದ್ದ ಕೇಸಿಮಯ್ಯ ದಂಡನಾಯಕನಿಗೆ ದಾನದ ಮಹತ್ವ ತಿಳಿಸಿ, ತ್ರಿವಿಧ (ಭೂ ದಾನ, ಅನ್ನದಾನ, ವಿದ್ಯಾದಾನ) ದಾನಗಳ ಕುರಿತು ವಿವರಿಸಿದ್ದಾರೆ.
https://www.suddikanaja.com/2020/12/12/the-12th-century-kaspaya-leaders-inscription-discovered-during-development-in-shikaripura/
ಅದೇ ವಿಧಾನದಲ್ಲಿ ಅಂದಿನ ಶ್ರೇಷ್ಠ ಪವಿತ್ರ ಧರ್ಮ ಕ್ಷೇತ್ರವಾದ ತಾಣಗುಂದೂರಿನ ಪಂಚತೀರ್ಥ ಪುಣ್ಯದ ನೆಲದಲ್ಲಿ ಪರಿ ಪರಿಯಾದ ದಾನ ಕಾರ್ಯ ನೆರೆವೇರಿಸಿದ ನಂತರ ದಾನದ ಉದ್ದೇಶಗಳನ್ನು ವಿವರಿಸಿ, ದಾನ ಪಡೆದವರು ಸೂಕ್ತ ವಿಧಾನಗಳಲ್ಲಿ ದೈವಗಳನ್ನು ಪೂಜಿಸಿದರೆ ನಾಡಿನ ಸಕಲರೆಲ್ಲರಿಗೂ ಒಳಿತಾಗುವುದು ಎಂದು ಅರುಹಿ ಪೂಜಾ ವಿಧಾನಗಳನ್ನು ಈ ಕೆಳಗಿನಂತೆ ವಿವರಿಸಿದ್ದಾರೆ.
ಶಾಸನದಲ್ಲಿನ ಪೂಜಾ ವಿಧಾನ | ಅನೇಕ ರೂಪದಲ್ಲಿ ದಾನ ಪಡೆದ ದ್ರವ್ಯದಿಂದ ನಿತ್ಯವೂ ಗದ್ದುಗೆ ಪೂಜೆ, ದೂಪದೀಪಾರತಿ, ನಂದಾದೀವಿಗೆ, ನೈವೇದ್ಯ, ನಿತ್ಯ ಸಹಸ್ರನಾಮ, ಹೋಮಗಳನ್ನು ನಡೆಸುವುದು. ಪ್ರತಿ ತಿಂಗಳು ಎರಡು ಅಷ್ಟಮಿ ಹಾಗೂ ಎರಡು ಚತುರ್ದಶಿಯ ಅಮಾವಾಸ್ಯೆ ವ್ಯತಿಪತ ಹಾಗೂ ಅಮಾವಾಸ್ಯೆಯ ಸಂಕ್ರಮಣ, ಹಬ್ಬಗಳಲ್ಲಿ ಮತ್ತು ನಿತ್ಯವೂ ತಪ್ಪದೇ ಪೂಜೆ ಮಾಡಬೇಕು.
ವಿಶೇಷ ಪೂಜಾ ಸಂದರ್ಭಗಳಲ್ಲಿ ಶಾಸ್ತ್ರ್ರದ ಉಪಾಧ್ಯಾಯರು ಶಿವಾರಾಧನೆ ಮತ್ತು ಶಾಂತಾಧ್ಯಯಗಳನ್ನು ಪಠಿಸಿ, ಜಪಗೈದು ಮುಂದೆ ಹೇಳಿದ ಕ್ರಮದಲ್ಲೇ ಎಂಟು ದಿಕ್ಕುಗಳಲ್ಲಿ ಮಂಡಲ ರಚಿಸಿ, ಮಂತ್ರ ಪಠಿಸುತ್ತಾ ಅಂಬಲಿ ನೀಡಿ, ದೇಶವನ್ನು ಆಳುವವರಿಗೆ, ಗೋವುಗಳಿಗೆ, ದ್ವಿಜರಿಗೆ ಹಾಗೂ ಇಡೀ ಸಮಾಜಕ್ಕೆ ಹರಸುವುದು ಎಂದು ಹೇಳಲಾಗಿದೆ.
ಶಾಸ್ತ್ರ ಖಂಡಿಕದವರು ವಿದ್ಯಾಮಂಡಲ, ಗುರುಮಂಡಲ ಮತ್ತು ಶಿವ ಮಂಡಲಗಳನ್ನು ರಚಿಸಿ ಶಾಂತಾಧ್ಯಯನ ಪಠಿಸಿ ನಂತರ ವೇದ ಖಂಡಿಕದ ನಾಲ್ವರು ನಾಲ್ಕು ಬೃಹತ್ ಕಳಸಗಳಲ್ಲಿ ಪವಿತ್ರ ಉದಕವನ್ನು ತುಂಬಬೇಕು. ಆ ಕಳಸಗಳಲ್ಲಿ ಸುಗಂಧ ದ್ರವ್ಯ ಹೊಂದಿದ ಎಲೆಗಳನ್ನು ಇಟ್ಟು ಕಳಸದೊಳಗಿನ ಉದಕಕ್ಕೆ ಗೋಮೂತ್ರ, ಬಿಳಿ ಸಾಸಿವೆ ಮತ್ತು ಐದು ವಿಧವಾದ ಚಿಗುರುಗಳನ್ನು ಸೇರಿಸಿ, ಐದು ವಿಧವಾದ ಚಕ್ಕೆಗಳನ್ನು ಬೆರೆಸಿ, ಗೋವಿನ ಹಾಲು, ತುಪ್ಪ, ಗೋಮೂತ್ರದಂತಹ ಗೋವಿನ ಪಂಚ ಉತ್ಪನ್ನಗಳನ್ನು ಸೇರಿಸಬೇಕು. ಏಲಕ್ಕಿ ಚಂದನದಂತಹ ದ್ರವ್ಯಗಳನ್ನು ಹಚ್ಚಬೇಕು.
ನಂತರ, ಈ ಕಳಸಗಳನ್ನು ನಾಲ್ಕೂ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ ನಾಲ್ಕು ವೇದದೊಳಗಣ ರುದ್ರ ಸೂಕ್ಷ್ಮಗ¼ನ್ನು ಪಠಿಸಬೇಕು. ಈಗ ಗದ್ದುಗೆ ಪೂರ್ಣವಾಗುತ್ತದೆ. ವೇದ ಖಂಡಿಕದವರು ದೇವರಿಗೆ ಎಂಟು ವಿಧವಾದ ಉದಕ ಅರ್ಪಣೆ ಮಾಡಿ ಪಂಚ ವಿಧವಾದ ಗೋವುತ್ಪನ್ನಗಳನ್ನು , ಪಂಚ ವಿದಧ ಮಕರಂದದ ಸಿಹಿಗಳನ್ನು (ತುಪ್ಪ, ಜೇನು, ಸಕ್ಕರೆ, ಕೊಬ್ಬರಿ ಹಾಲು ಇತರೆ) ತಯಾರಿಸಿ, ಇವುಗಳ ಜೊತೆಗೆ ಗೋಧಿ ಮತ್ತು ಅಕ್ಕಿಯ ಹಿಟ್ಟನ್ನು ಬಿಸಿಯಾದ ನೀರಿನಲ್ಲಿ ಮಿಶ್ರಮಾಡಿಬೇಕು. ಈ ಮಿಶ್ರಣಕ್ಕೆ ಅಳಲೆಕಾಯಿ ಮತ್ತು ಅರಿಶಿಣದ ಪುಡಿಯನ್ನು ಸೇರಿಸಿ ಇವೆಲ್ಲವುಗಳನ್ನು ದೇವರಿಗೆ ಲೇಪಿಸಬೇಕು. ಇದಾದ ನಂತರ ಕುಶೋಧಕ, ಗಂಧದುದಕ, ಪುಷ್ಪದುದಕ, ಫಲದುದಕ, ಚಿನ್ನದುದಕ ಮತ್ತು ರತ್ನೋದಕಗಳಿಂದ ಮಜ್ಜನ ಮಾಡಿಸಬೇಕು.
ನಂತರ ಈ ನಾಲ್ಕು ಕಳಸಗಳನ್ನು ಹಿಡಿದು ಸಮುದ್ರ -ಪೂರ್ವಕವಾಗಿ ಋಗ್ವೇದದ ಮೂವರು ಯತಿಗಳಿಂದ ಮಂಗಳಾಭಿಷೇಕ ಮಾಡಿಸಿ ಪಂಚ ಸುಗಂಧಗಳನ್ನು ಲೇಪಿಸಿ, ಶುಭ್ರವಸ್ತ್ರಾಲಂಕಾರ ಮಾಡಿ, ಮಧುಪರ್ಕವನ್ನು (ತುಪ್ಪ-ಮೊಸರುಗಳಿಂದ ಮಾಡಿದ ನೈವೇದ್ಯ) ಸಿದ್ಧಪಡಿಸಬೇಕು. ಪುಷ್ಪಾರ್ಚನೆ ಮಾಡಿ ಬಹು ವಿಧ ಫಲಗಳನ್ನು ಅರ್ಪಿಸಿಬೇಕು. ಈಗಾಗಲೇ ಸಿದ್ಧಪಡಿಸಿದ ಆಹಾರ ನೈವೇದ್ಯಗಳನ್ನು ಒಂದು ಮಂಟಪದಲ್ಲಿರಿಸಿ ತುಪ್ಪದಾರತಿಯಿಂದ ಬೆಳಗಬೇಕು.
ನಾಲ್ಕು ಲೋಹದ ತಟ್ಟೆಗಳಲ್ಲಿ ನಾಲ್ಕು ವರ್ಣದ ಅಕ್ಷತೆಗಳ ಜೊತೆಗೆ ಮೊಸರು ಮತ್ತು ದರ್ಬೆಗಳ ಜೊತೆ ಆರತಿ ಮಾಡಿ ನಿವಾಳಿಸುವಾಗ ಮಂಗಳ ಗೀತೆಗಳು ಮೊಳಗಬೇಕು. ಸಂಗೀತ ವಾದ್ಯಗಳು, ಡಮರುಗ, ಶಂಖ ಮತ್ತು ಕಹಳೆಗಳಿಂದ ಘಂಟಾನಾದಗಳು ಹೊರಹೊಮ್ಮಬೇಕು. ಹಾಲು, ಅಕ್ಕಿ, ತುಪ್ಪ ಮತ್ತು ಸಕ್ಕರೆಗಳಿಂದ ಮಾಡಿದ ಪಾಯಸವನ್ನು ತಯಾರಿಸಿ ಪ್ರಸಾದ ನೀಡುವುದರ ಜೊತೆಗೆ ತಾಂಬೂಲವನ್ನು ಹಂಚಬೇಕು.
ಉತ್ಸವದ ಮೆರವಣಿಗೆಯೂ ದೇವನ ಮೂಲ ಸ್ಥಾನವೂ | ಮಾಘ ಮಾಸದ ಹುಣ್ಣಿಮೆಯ ದಿನ ತುಪ್ಪದ ಉಂಡೆಯನ್ನು ಮಾಡಿ ಹಂಚುವುದರ ಜೊತೆಗೆ ಚೈತ್ರಮಾಸದಲ್ಲಿ ಮಹಾಪೂಜೆ ಮಾಡಿ ದೇವರನ್ನು ಮಹಾರಥದಲ್ಲಿ ಕುಳ್ಳಿರಿಸಿ, ಚಾಮರ ಸೇವೆ ಮಾಡುತ್ತಾ ಧ್ವಜಗಳಿಂದ, ಪತಾಕೆಗಳಿಂದ, ಶಂಖಾನಾದಗಳಿಂದ, ಮಂಗಳ ಗೀತೆಗಳಿಂದ, ನೃತ್ಯ ಪ್ರದಕ್ಷಣೆಯಿಂದ ಗ್ರಾಮದ ಬೀದಿಗಳಲ್ಲಿ ಉತ್ಸವದ ಮೆರವಣಿಗೆ ಮಾಡಿ ನಂತರ ಮರಳಿ ಆ ದೇವನ ಮೂಲ ಸ್ಥಾನದಲ್ಲಿ ಸ್ಥಾಪಿಸಬೇಕು.
https://www.suddikanaja.com/2021/02/02/hunasodu-blast-investigation-by-revenue-commissioner/
ಈ ವಿಧಾನದಲ್ಲಿ ಭಕ್ತಿ ಸಮರ್ಪಣೆ ಮಾಡಿದರೆ, 10 ಸಾವಿರ ಹೋಮದ ಪುಣ್ಯ ಪ್ರಾಪ್ತಿ | ಈ ವಿಧಾನಗಳಲ್ಲಿ ಭಕ್ತಿ ಸಮರ್ಪಣೆ ಮಾಡುವುದರಿಂದ ಹತ್ತು ಸಾವಿರ ಹೋಮಗಳನ್ನು ಮಾಡಿದಂತಹ ಪುಣ್ಯಪ್ರಾಪ್ತಿಯಾಗುತ್ತದೆ. ಉತ್ತರಾಯಣ ಕಾಲದಲ್ಲಿ ದೇವರಿಗೆ ನೂರು ತೈಲ ಮತ್ತು ತುಪ್ಪದ ಅಭಿಶೇಕ ಮಾಡುವುದರಿಂದ 1008 ಕಮಲಗಳನ್ನು ದೇವರಿಗೆ ಅರ್ಪಿಸಿದ ಪುಣ್ಯ ದೊರೆಯುವುದು.
ವರ್ಷದೊಳಗೆ ಘಟಿಸುವ ಎರಡು ಶಯನ ಎರಡು ಉತ್ತರಾಯಣ – ದಕ್ಷಿಣಾಯಣ, ಸೂರ್ಯ ಗ್ರಹಣ, ಚಂದ್ರ ಗ್ರಹಣ, ಆಶಾಢ, ಕಾರ್ತಿಕ, ಮಾಘ ಮತ್ತು ವೈಶಾಖ ಮಾಸದ ಒಂದು ಹುಣ್ಣಿಮೆಯ ದಿನಗಳಲ್ಲಿ ಮಾಡಿದ ಪೂಜಾ ಸೇವೆಯು ಆರು ತಿಂಗಳುಗಳ ಕಾಲ ಮಾಡಿದ ಪೂಜೆಗೆ ಸಮವಾಗಿದೆ.
ಇಂತಹ ಪೂಜಾ ವಿಧಾನ ಅನುಸರಿಸಿದ ಭಕ್ತಿಮಾರ್ಗವು ನಾಡನ್ನು ಆಳುವ ಅರಸರಿಗೆ, ಹೆಗ್ಗಡೆಗಳಿಗೆ, ಕರಣಕರಿಗೆ, ದ್ವಿಜರಿಗೆ ಮತ್ತು ನಾಡಿನ ಸಕಲ ಜೀವಿಗಳಿಗೂ ನೇರವಾಗಿ ಶ್ರೇಷ್ಠತೆ ಮತ್ತು ಒಳಿತನ್ನು ದೊರಕಿಸಿಕೊಡುವುದು.
– ಲೇಖಕರು: ರಮೇಶ್ ಬಿ.ಹಿರೇಜಂಬೂರು