
HIGHLIGHTS
- ಶಿವಮೊಗ್ಗದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಹಬ್ಬದ ವಾತಾವರಣ ಇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ
- ಸೆ.27ರಿಂದ ಅ.1ರ ವರೆಗೆ ಶಿವಮೊಗ್ಗ ನಗರದಾದ್ಯಂತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಹವಾ
- ನಾಟಕ ಹಾಗೂ ಹಾಸ್ಯ ನಾಟಕ ಸ್ಪರ್ಧೆಯಲ್ಲಿ ವಿಜೇತರಿಗೆ ಚಾಮುಂಡೇಶ್ವರಿ ಟ್ರೋಫಿ ನೀಡಲು ತೀರ್ಮಾನ
ಸುದ್ದಿ ಕಣಜ.ಕಾಂ | DISTRICT | 20 SEP 2022
ಶಿವಮೊಗ್ಗ (shivamogga): ಮಹಾನಗರ ಪಾಲಿಕೆ ವತಿಯಿಂದ ಆಚರಿಸಲಾಗುತ್ತಿರುವ ನಾಡಹಬ್ಬದ ಪ್ರಯುಕ್ತ ‘ರಂಗ ದಸರಾ’ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ರಂಗ ದಸರಾ ಸಮಿತಿ ಅಧ್ಯಕ್ಷ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ರಂಗ ದಸರಾದಲ್ಲಿ ರಂಗಕಲೆಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ರಂಗ ಸಮಾಗಮ, ಮೂಕಾಭಿನಯ ಸ್ಪರ್ಧೆ, ರಂಗತುಣಕು, ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ, ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ, ರಾಜ್ಯಮಟ್ಟದ ಹಾಸ್ಯ ನಾಟಕ ರಚನಾ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು
ಸರ್ಕಾರಿ ಶಾಲಾ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಿದ್ದು, ಅವರಿಂದಲೇ 5 ಮಕ್ಕಳ ನಾಟಕ ಮಾಡಿಸುತ್ತಿದ್ದು, ಶಿಕ್ಷಣ ಇಲಾಖೆ ಇದಕ್ಕೆ ಸಹಕಾರ ನೀಡಿದೆ. 5 ಹೊಸ ನಾಟಕಗಳು ಹೊಸ ನಿರ್ದೇಶಕರಿಂದ ಮೂಡಿ ಬರುತ್ತಿದ್ದು, ಒಂದು ತಂಡದಲ್ಲಿ 30 -35 ಮಕ್ಕಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನಾಟಕದಲ್ಲಿ ವಿಜೇತರಿಗೆ, ಹಾಸ್ಯ ನಾಟಕ ಸ್ಪರ್ಧೆಯಲ್ಲಿ ವಿಜೇತರಿಗೆ ಚಾಮುಂಡೇಶ್ವರಿ ಟ್ರೋಫಿ ನೀಡಲು ತೀರ್ಮಾನಿಸಲಾಗಿದೆ. ಹಾಸ್ಯ ನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರಿಗೆ ಒಂದು ತಿಂಗಳ ನಂತರ ಬಹುಮಾನ ನೀಡುವ ಕಾರ್ಯಕ್ರಮ ಹಮ್ಮಿಕೊಂಡು ಅದೇ ದಿನ ಆ ನಾಟಕ ಪ್ರದರ್ಶಿಸಲಾಗುವುದು. ಹಾಸ್ಯ ನಾಟಕದ ರಚನೆ ಪುಸ್ತಕ ರೂಪದಲ್ಲಿ ಒಂದು ಸಾವಿರ ಪ್ರತಿ ಮುದ್ರಿಸಿ ನೀಡಲು ರಂಗಾಯಣ ನಿರ್ದೇಶಕರು ಮುಂದೆ ಬಂದಿದ್ದಾರೆ. ಸಾವಿರಕ್ಕೂ ಹೆಚ್ಚು ಮಕ್ಕಳು ರಂಗದಸರಾದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
| ಎಸ್.ಎನ್.ಚನ್ನಬಸಪ್ಪ, ಅಧ್ಯಕ್ಷ, ರಂಗ ದಸರಾ ಸಮಿತಿ
ಪ್ರತಿ ದಿನ ಸಂಜೆ ರಂಗ ಗೀತೆ ಗಾಯನ, ಎಲ್ಲೆಲ್ಲಿ ನಡೆಯಲಿದೆ?
5 ರಂಗಗೀತೆ ಗಾಯನ ತಂಡಗಳಿಂದ ಪ್ರತಿದಿನ ಸಂಜೆ 6.30 ರಿಂದ 7.30ರ ವರೆಗೆ ರಂಗಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ.27 ರಂದು ಮಧುರಾ ಕಲಾತಂಡದಿಂದ ನಿಸರ್ಗ ಪಾರ್ಕ್ ಗೋಪಾಲಗೌಡ ಬಡಾವಣೆ ಇ ಬ್ಲಾಕ್ ನಲ್ಲಿ ನಡೆಯಲಿದೆ.
ಸೆ.28 ರಂದು ರಂಗಬೆಳಕು ತಂಡದಿಂದ ವಿನೋಬನಗರ ಪಿ ಅಂಡ್ ಟಿ ಕಾಲೋನಿಯಲ್ಲಿ, ಸೆ. 29 ರಂದು ಸಹ್ಯಾದ್ರಿ ಕಲಾತಂಡದಿಂದ ಇಸ್ಲಾಪುರ ನಾಗಚೌಡೇಶ್ವರಿ ದೇವಾಲಯದಲ್ಲಿ, ಸೆ. 30 ರಂದು ನಮ್ ಟೀಂ ವತಿಯಿಂದ ರಾಜೇಂದ್ರ ನಗರ ಪಾರ್ಕ್ ನಲ್ಲಿ, ಅ. 1 ರಂದು ಚೆಲುವರಂಗ ತಂಡದಿಂದ ಕೋಟೆ ಬಯಲು ರಂಗಮಂದಿರದಲ್ಲಿ ರಂಗಗೀತೆ ಗಾಯನ ನಡೆಯಲಿದೆ.
READ | ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ CLT ಪುನರಾರಂಭ, ಯಾವಾಗ ನಡೆಯಲಿವೆ ಪರೀಕ್ಷೆ?
ಯಾವ ದಿನ ಏನು ಕಾರ್ಯಕ್ರಮ?
- Day 1 | ಸೆಪ್ಟೆಂಬರ್ 27 ರಂದು ಬೆಳಗ್ಗೆ 10.30 ಗಂಟೆಗೆ ಮಹಾನಗರ ಪಾಲಿಕೆಯಿಂದ ರಂಗಕರ್ಮಿ ಹಾಲೇಶ್ ಅವರು ರಂಗ ಜಾಥಾಕ್ಕೆ ಚಾಲನೆ ನೀಡುವರು. ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. 11.30 ಕ್ಕೆ ರಂಗಕರ್ಮಿ ಡಾ. ಗಜಾನನ ಶರ್ಮಾ ಅವರು ಕುವೆಂಪು ರಂಗಮಂದಿರದಲ್ಲಿ ರಂಗ ದಸರಾ ಉದ್ಘಾಟಿಸುವರು. ಮಧ್ಯಾಹ್ನ 12.30 ಕ್ಕೆ ಜಿಲ್ಲಾ ಮಟ್ಟದ ರಂಗ ಸಮಾಗಮ, ರಂಗ ಕಲಾವಿದರ ಗೋಷ್ಠಿ, ಮಧ್ಯಾಹ್ನ 2.30 ಕ್ಕೆ ಜಿಲ್ಲಾಮಟ್ಟದ ಮೂಕಾಭಿನಯ ಸ್ಪರ್ಧೆಗೆ ರಂಗ ನಿರ್ದೇಶಕ ಕಾಂತೇಶ್ ಕದರಮಂಡಲಗಿ ಚಾಲನೆ ನೀಡಲಿದ್ದಾರೆ. ಸಂಜೆ 6.30 ಕ್ಕೆ ರಂಗ ತುಣಕುಕು ಕಾರ್ಯಕ್ರಮಕ್ಕೆ ರಂಗಕರ್ಮಿ ರೇಣುಕಪ್ಪ ಚಾಲನೆ ನೀಡಲಿದ್ದಾರೆ.
- Day 2 | ಸೆ.28 ರಂದು ಬೆಳಗ್ಗೆ 10.30ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಶಾಲಾ, ಕಾಲೇಜು ಮತ್ತು ಸಾರ್ವಜನಿಕ ವಿಭಾಗಗಳಲ್ಲಿ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ನಡೆಯಲಿವೆ. ರಂಗಕರ್ಮಿ ಹರಿಗೆ ಗೋಪಾಲಸ್ವಾಮಿ ಚಾಲನೆ ನೀಡುವರು. ಅಂದು ಸಂಜೆ 5 ಗಂಟೆಗೆ ಕುವೆಂಪು ರಮಗಮಂದಿರದಲ್ಲಿ ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ ನಡೆಯಲಿದೆ. ಪರಿಸರ ಪ್ರೇಮಿ ಪ್ರೊ.ಬಿ.ಎಂ. ಕುಮಾರಸ್ವಾಮಿ, ಡಿ.ಎಂ. ರಾಜಕುಮಾರ್ ಹಾಗೂ ಗಾಯತ್ರಿ ಚಾಲನೆ ನೀಡುವರು.
- Day 3 | ಸೆ.29 ರಂದು ಸಂಜೆ 5 ಗಂಟೆಗೆ ರಾಜ್ಯಮಟ್ಟದ ಹಾಸ್ಯ ನಾಟಕ ಸ್ಪರ್ಧೆ ನಡೆಯಲಿದೆ. ಸೆ.30 ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 5 ಗಂಟೆಗೆ ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಹಾಸ್ಯ ನಾಟಕ ರಚನಾ ಸ್ಪರ್ಧೆ ನಡೆಯಲಿದೆ.
- Day 4 | ಅಕ್ಟೋಬರ್ 1 ರಂದು ಬೆಳಗ್ಗೆ 10 ಗಂಟೆಗೆ ಕುವೆಂಪು ರಮಗಮಂದಿರದಲ್ಲಿ ಮಕ್ಕಳ ರಂಗೋತ್ಸವ ನಡೆಯಲಿದೆ. ಸರ್ಕಾರಿ ಶಾಲಾ ಮಕ್ಕಳಿಂದ 5 ನಾಟಕ ಪ್ರದರ್ಶನ ನಡೆಯಲಿದೆ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಾಲನೆ ನೀಡುವರು. ಸಂಜೆ 5ರಿಂದ ಕುವೆಂಪು ರಂಗಮಂದಿರದಲ್ಲಿ ರಂಗದಸರಾ ಸಮಾರೋಪ ಸಮಾರಂಭ ನಡೆಯಲಿದೆ. ಡಾ. ಎಚ್.ಎಸ್. ನಾಗಭೂಷಣ್, ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಪಾಲ್ಗೊಳ್ಳುವರು.
ರಂಗದಸರಾ ಸಮಿತಿ ಸದಸ್ಯರಾದ ಆರ್.ಸಿ. ನಾಯಕ್, ಪ್ರಭಾಕರ್, ಎಚ್. ಮೂರ್ತಿ, ಶಿರೀಶ್, ಮಧು ಇದ್ದರು.
ಶಿವಮೊಗ್ಗ ರಂಗಾಯಣದಲ್ಲಿ ‘ರಂಗ ಶಿಕ್ಷಣ’ ಸರ್ಟಿಫಿಕೇಟ್ ಕೋರ್ಸ್ ಆರಂಭ, ಪ್ರವೇಶಕ್ಕೇನು ಅರ್ಹತೆ?