ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಡಿಎಆರ್ (DAR) ಪೊಲೀಸ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್.ಟಿ.ಓ) ಗಂಗಾಧರ ನೇತೃತ್ವದಲ್ಲಿ ಗುರುವಾರ ಸಂಜೆ ಸಭೆ “ಶಿವಮೊಗ್ಗದ ಖಾಸಗಿ ಬಸ್ ಗಳ ಮಾಲೀಕರ ಸಭೆ” ನಡೆಸಿ ಹಲವು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ.
READ | ಓಟರ್ ಐಡಿ ವರ್ಗಾವಣೆ, ಹೆಸರು ಸೇರ್ಪಡೆ, ಬದಲಾವಣೆ, ಹೊಸಬರ ಹೆಸರು ಸೇರ್ಪಡೆಗೇನು ಮಾಡಬೇಕು?
ನೀಡಿರುವ ಸೂಚನೆಗಳೇನು?
- ಖಾಸಗಿ ಬಸ್ ಗಳ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಸಮಯದಲ್ಲಿ ಕಡ್ಡಾಯವಾಗಿ ಸಮವಸ್ತ್ರವನ್ನು ಧರಿಸುವುದು. ತಪಾಸಣೆಯ ವೇಳೆ ಸಮವಸ್ತ್ರ ಧರಿಸದೆ ಇರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
- ಚಾಲಕರು ಹಾಗೂ ನಿರ್ವಾಹಕರುಗಳು ಸಾರ್ವಜನಿಕರೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸುವುದು ಮತ್ತು ತೊಂದರೆಯಾಗದಂತೆ ನಡೆದುಕೊಳ್ಳುವುದು.
- ಪ್ರಯಾಣಿಕರ ಸುರಕ್ಷತೆ ಮತ್ತು ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ವೇಗ ಮಿತಿ ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು.
- ಬಸ್ ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೇ, ನಿಗದಿಪಡಿಸಿದ ಬಸ್ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಮಾಡುವುದು.
- ಬಸ್ ಗಳಲ್ಲಿ ಸರಕು ಸಾಗಾಣಿಕೆಯ (Parcel Service) ಸಮಯದಲ್ಲಿ ಗಮನ ಹರಿಸುವುದು. ಒಂದು ವೇಳೆ ಯಾವುದೇ ಅನುಮಾನಾಸ್ಪದ ಸರಕುಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡುವುದು.
- Public Safety Act (ನಾಗರಿಕ ಸುರಕ್ಷತಾ ಕಾಯ್ದೆ) ಪ್ರಕಾರ ಶಿವಮೊಗ್ಗ ನಗರ ಖಾಸಗಿ ಬಸ್ ನಿಲ್ದಾಣ ಮತ್ತು ತಾಲ್ಲೂಕು ಬಸ್ ನಿಲ್ದಾಣಗಳಲ್ಲಿ 10 ದಿನಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದು.
- ಬಸ್ ಗಳಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸಂಬಂಧಪಟ್ಟ ಖಾಸಗಿ ಬಸ್ ಗಳ ಮಾಲೀಕರೆ ಹೊಣೆಗಾರರಾಗಿರುತ್ತಾರೆ.
- ಚಾಲಕರು ಬಸ್ ಗಳನ್ನು ಚಾಲನೆ ಮಾಡುವ ಸಮಯದಲ್ಲಿ, ಮೊಬೈಲ್ ಬಳಸುವುದು ಕಂಡುಬಂದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಭೆಯಲ್ಲಿ ಡಿವೈಎಸ್ಪಿ ಬಾಲರಾಜು, ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ ಮತ್ತು ಪಿಎಸ್ಐ (ಸಂಚಾರ) ಉಪಸ್ಥಿತರಿದ್ದರು.