ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ಮಲೆನಾಡಿನ ಪ್ರಮುಖ ಹಾಗೂ ಸಾಂಪ್ರದಾಯಿಕ ಬೆಳೆಯಾದ ಅಡಿಕೆಗೆ ಎಲೆಚುಕ್ಕೆ ರೋಗ (leaf spot disease) ಬಾಧಿಸುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಇದನ್ನು ಪರಿಶೀಲಿಸುವುದಕ್ಕಾಗಿ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj bommai) ಅವರೇ ತೋಟಗಳಿಗೆ ಭೇಟಿ ನೀಡಿದರು. ಅಡಿಕೆ ಮರದ ಎಲೆ ಮತ್ತು ಮರಗಳನ್ನು ಪರಿಶೀಲಿಸಿದರು. ಅಧಿಕಾರಿಗಳು ಮತ್ತು ಬೆಳೆಗಾರರಿಂದ ಮಾಹಿತಿ ಪಡೆದರು.
VIDEO REPORT | CM BASAVARAJ BOMMAI VISIT
ಸಿಎಂ ಬೊಮ್ಮಾಯಿ ಹೇಳಿದ್ದೇನು?
- ಕಳೆದ ಎರಡು ವರ್ಷಗಳಿಂದ ನಿರಂತರ ವರ್ಷಧಾರೆಯಾಗುತ್ತಿದ್ದು, ಬೇಸಿಗೆಯಲ್ಲೂ ಮಳೆಯಾಗಿದೆ. ಪರಿಣಾಮ ಎಲೆಚುಕ್ಕೆ ರೋಗ ಉಲ್ಬಣಿಸಿದೆ. ಅಡಿಕೆ ಮರಕ್ಕೆ ಬೇಕಾಗುವಷ್ಟು ಪೋಷಕಾಂಶ ಲಭ್ಯವಾಗುತ್ತಿಲ್ಲ. ಹೀಗಾಗಿ, ಎಲೆಚುಕ್ಕೆ ರೋಗ ವ್ಯಾಪಕವಾಗಿ ಹರಡಿದೆ. ಈ ಬಗ್ಗೆ ತೋಟಗಾರಿಕೆ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ ಮತ್ತು ಕೇಂದ್ರ ತಂಡವು ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡುವ ಮುನ್ನ ತಜ್ಞರು ಸಲಹೆಗಳನ್ನು ನೀಡಿದ್ದಾರೆ.
- ಎಲೆಚುಕ್ಕೆ ರೋಗ ನಿಯಂತ್ರಿಸುವುದಕ್ಕೂ ಮುಂಚೆ ವ್ಯವಸ್ಥಿತ ನಿರ್ವಹಣೆ (ಇಂಟಿಗ್ರೇಟೆಡ್ ಮ್ಯಾನೇಜ್ಮೆಂಟ್) ಅವಶ್ಯಕತೆ ಇದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಅದರಂತೆ, ರೋಗವನ್ನು ತಡೆಗಟ್ಟುವುದಕ್ಕಾಗಿ ಅಗತ್ಯ ಕ್ರಮಗಳೇನು ಕೈಗೊಳ್ಳಬೇಕು, ವ್ಯವಸ್ಥಿತ ನಿರ್ವಹಣೆಗೇನು ಮಾಡಬೇಕು ಎಂಬ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ತಜ್ಞರ ಸಲಹೆಯಂತೆ ಔಷಧ ವಿತರಣೆ ಮಾಡಲಾಗುವುದು.
- ವ್ಯವಸ್ಥಿತ ನಿರ್ವಹಣೆಗೆ ಅಗತ್ಯವಿರುವ ಯೋಜನೆ ರೂಪಿಸಲು ತಾಕೀತು ಮಾಡಲಾಗಿದೆ. ಅದಕ್ಕೆ ಅಗತ್ಯವಿರುವ ಖರ್ಚು ಭರಿಸುವ ಜವಾಬ್ದಾರಿ ಸರ್ಕಾರದ್ದು. ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸಲಿದೆ.
- 42 ಸಾವಿರ ಹೆಕ್ಟೆರ್ ಅಡಿಕೆ ಬೆಳೆಯುವ ಪ್ರದೇಶವಿದ್ದು, ತೋಟಗಳಲ್ಲಿ ಎಲೆಚುಕ್ಕೆ ರೋಗ ಉಲ್ಬಣಿಸಿದೆ. ಈಗಾಗಲೇ ರಾಜ್ಯ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದು, ರೋಗ ತಡೆ ಮತ್ತು ಮಲೆನಾಡಿನ ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಗೋವಿಂದ ಕಾರಜೋಳ, ಬಿ.ಎ.ಬಸವರಾಜು, ಶಾಸಕ ಹರತಾಳು ಹಾಲಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
https://suddikanaja.com/2022/11/26/person-who-wrote-a-request-letter-to-shivamogga-sp-to-find-a-bride-the-letter-went-viral/