Sagar news | ಸಾಗರ ತಾಲೂಕು ಆಡಳಿತ ಸೌಧ ಕಟ್ಟಡ ಉದ್ಘಾಟನೆ, ಯಾವೆಲ್ಲ ಕಾಮಗಾರಿಗಳಿಗೆ ಕೋಟಿ ಕೋಟಿ ಅನುದಾನ?

Kagodu timmappa

 

 

ಸುದ್ದಿ ಕಣಜ.ಕಾಂ ಸಾಗರ
SAGAR: ಜನರನ್ನು ಕಚೇರಿಯಿಂದ ಕಚೇರಿಗೆ ಅಲೆಸದೇ ಒಂದೇ ಸೂರಿನಡಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಆಡಳಿತ ಸೌಧ ನಿರ್ಮಿಸಲಾಗಿದ್ದು, ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಸಲಹೆ ನೀಡಿದರು.
ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸಾಗರ ತಾಲ್ಲೂಕಿನ ನೂತನ ಆಡಳಿತ ಸೌಧ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

READ | ಟಿಕೆಟ್ ಘೋಷಣೆ ಬೆನ್ನಲ್ಲೇ ಈಶ್ವರಪ್ಪ ತುರ್ತು ಮಾಧ್ಯಮಗೋಷ್ಠಿ, ಯಡಿಯೂರಪ್ಪ ವಿರುದ್ಧ ಮಾಡಿದ 5 ನೇರ ಆರೋಪಗಳೇನು?

ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಪದೇ ಪದೇ ಸರ್ಕಾರಿ ಕಚೇರಿ ಅಲೆಯುವುದನ್ನು ಅಧಿಕಾರಿಗಳು ತಪ್ಪಿಸಬೇಕು. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಒದಗಿಸಬೇಕು ಎಂದರು.
ಸರ್ಕಾರ ರಚನೆ ಆಗುವ ಪೂರ್ವದಲ್ಲಿ ನೀಡಲಾಗಿದ್ದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ. ಸರ್ಕಾರ ನುಡಿದಂತೆ ನಡೆದು ತನ್ನ ಮಾತನ್ನು ಉಳಿಸಿಕೊಂಡಿದೆ. ಇನ್ನು ಮುಂದೆ ಅಭಿವೃದ್ದಿ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಸರ್ಕಾರ ₹57 ಸಾವಿರ ಕೋಟಿಯನ್ನು ಬಡವರ ಮಡಿಲಿಗೆ ಹಾಕಿದೆ. ಬಡವರಿಗೆ ಹಣ ನೀಡಿದರೆ ಅವರು ಖರ್ಚು ಮಾಡು ಪುನಃ ಸರ್ಕಾರಕ್ಕೆ ಅನುಕೂಲವಾಗುವಂತೆ ಮಾಡುತ್ತಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿಲ್ಲ ಎಂದು ತಿಳಿಸಿದರು.
ಇದೀಗ ತಾನೆ ಸೊರಬ ತಾಲ್ಲೂಕಿನ ಭೈರೇಕೊಪ್ಪದಲ್ಲಿ ₹18 ಕೋಟಿ ಮೊತ್ತದ ನಾರಾಯಣ ಗುರು ವಸತಿ ಶಾಲೆಗೆ ಗುದ್ದಲಿ ಪೂಜೆ ನೆರವೇರಿಸಿ ಬಂದಿದ್ದೇನೆ. ಹಾಗೂ ಸಾಗರ ತಾಲ್ಲೂಕಿನ ಗೆಣಸಿನಕುಣಿಯಲ್ಲಿ ₹18 ಕೋಟಿ ಅಂದಾಜು ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶಂಕುಸ್ಥಾಪನೆ ಮಾಡಲಾಗುವುದು. ನನ್ನ ಇಲಾಖೆಗೆ ಸರ್ಕಾರ 44,500 ಕೋಟಿ ಅನುದಾನ ಒದಗಿಸಿದೆ ಎಂದರು.
₹965 ಲಕ್ಷದಲ್ಲಿ ಆಡಳಿತ ಭವನ
ಶಾಸಕರು ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ತಕ್ಷರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಗರ ಕ್ಷೇತ್ರ ಬೆಳೆಯುತ್ತಿದ್ದು, ಇನ್ನೂ ಅಭಿವೃದ್ಧಿ ಹೊಂದಬೇಕಿದೆ. ಈ ಆಡಳಿತ ಸೌಧ ಮಂಜೂರಾತಿ ಪಡೆದ ನಂತರ ಮೂರು ವರ್ಷಗಳ ಕಾಲ ಕಾಮಗಾರಿ ತಡೆಹಿಡಿಯಲಾಗಿತ್ತು. ನಂತರ ಹಂತ ಹಂತವಾಗಿ ₹965 ಲಕ್ಷ ಅನುದಾನದಲ್ಲಿ ಆಡಳಿತ ಸೌಧವನ್ನು ನಿರ್ಮಿಸಲಾಗಿದ್ದು ಆದಷ್ಟು ಎಲ್ಲ ಇಲಾಖೆಗಳು ಇಲ್ಲಿ ಕಾರ್ಯ ನಿರ್ವಹಿಸಲಿವೆ. ಜನರ ಕಷ್ಟಗಳಿಗೆ ಸ್ಪಂದಿಸಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದರು.

one click many news logo
ಯಾವುದಕ್ಕೆಷ್ಟು ಅನುದಾನ?
* ಸಾಗರದ ಎಲ್ಲ ವಾರ್ಡುಗಳಿಗೆ ತಲಾ ಅಂದಾಜು 1 ಕೋಟಿ ಅನುದಾನ ನೀಡಿದ್ದೇವೆ.
* ₹4.80 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ರಂಗಮಂದಿರ ನಿರ್ಮಿಸಲಾಗುವುದು.
* ನಗರದ ಮೂರು ಕಡೆ ಫುಡ್‌ ಕೋರ್ಟ್ ಗಳನ್ನು ಸ್ಥಾಪಿಸಲಾಗುವುದು.
* ಜನರಲ್ ಆಸ್ಪತ್ರೆಗೆ ₹1.45 ಕೋಟಿ ಬಿಡುಗಡೆಯಾಗಿದ್ದು 14 ಡಯಾಲಿಸಿಸ್ ಯಂತ್ರ ಮತ್ತು ಫಿಸಿಯೋಥೆರಪಿ ಕೂಡ ಆರಂಭವಾಗಲಿದೆ.
* ನಗರದಲ್ಲಿ ಪಾರ್ಕ್ ಗಳನ್ನು ನಿರ್ಮಿಸಲಾಗುವುದು.
* ಮೀನು ಮಾರುಕಟ್ಟೆಗೆ ₹1.35 ಕೋಟಿ ಮಂಜೂರಾಗಿದೆ.
* 317 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಜಾರಿಗೊಳಿಸಲಾಗಿದ್ದು ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಪ್‍ಲೈನ್ ಕೆಲಸ ನಡೆಯುತ್ತಿದೆ.
* ಯುಜಿಡಿ ಕಾಮಗಾರಿಗಳಿಗೆ ₹47 ಕೋಟಿ ಮಂಜೂರಾಗಿದೆ. ಸಾಗರ ತಾಲ್ಲೂಕು ಉತ್ತಮ ಪ್ರವಾಸಿ ಕೇಂದ್ರವಾಗಿದ್ದು ಜೋಗ ಜಲಪಾತಕ್ಕೆ ನಿರಂತರವಾಗಿ ಜನರು ಬರುವಂತೆ ಮಾಡಲು ಅಭಿವೃದ್ದಿ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದ್ದು ಇಲ್ಲಿಯ ಹೋಟೆಲ್ ಹಾಗೂ ಇತರೆ ಪೂರಕ ಉದ್ಯಮಗಳು ಬೆಳೆಯಬೇಕು.
ಸಾಮಾಜಿಕ ನ್ಯಾಯದ ಹರಿಕಾರ ಕಾಗೋಡು ತಿಮ್ಮಪ್ಪ
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ ಕಾಗೋಡು ತಿಮ್ಮಪ್ಪನವರು ಆರಂಭಿಸಿದ ಕಟ್ಟಡವನ್ನು ಅವರ ಹಸ್ತದಿಂದಲೇ ಇಂದು ಲೋಕಾರ್ಪಣೆಗೊಳಿಸಿರುವುದು ಸಂತಸದ ವಿಷಯ. ಜನರನ್ನು ಕಚೇರಿ ಕೆಲಸಗಳಿಗಾಗಿ ಅಲೆಸಬಾರದೆಂಬ ಉದ್ದೇಶದಿಂದ ಆಡಳಿತ ಸೌಧ ನಿರ್ಮಿಸಲಾಗಿದೆ ಎಂದರು.
ಪಿಡಬ್ಲ್ಯುಡಿ ಎಇಇ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವರು ಹಾಗೂ ಮಾಜಿ ವಿಧಾನಸಭಾ ಸಭಾಪತಿಗಳಾದ ಕಾಗೋಡು ತಿಮ್ಮಪ್ಪ ಅವರನ್ನು ಈ ಸಂದರ್ಭದಲ್ಲಿ ಅಭಿಂದಿಸಲಾಯಿತು. ಸಾಗರ ಎಸಿ ಆರ್.ಯತೀಶ್ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷ ತುಕಾರಾಂ, ನಗರಸಭಾ ಸದಸ್ಯರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಇಓ ನಾಗೇಶ್ ಬ್ಯಾಲಾಳ್ , ಸಾಗರ ತಹಶಿಲ್ದಾರ್ ಸೈಯದ್ ಕಲೀಂ ಉಲ್ಲಾ, ಇತರೆ ಅಧಿಕಾರಿಗಳು ಹಾಜರಿದ್ದರು.

error: Content is protected !!