ಸುದ್ದಿ ಕಣಜ.ಕಾಂ | KARNATAKA | TALENT JUNCTION
ಶಿವಮೊಗ್ಗ: ಮಲೆನಾಡಿನ ಪ್ರತಿಭೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆದಿದ್ದು, ಈಗ ‘ಶಿಖರದಿಂದ ಸಾಗರ’ ಸಾಹಸಮಯ ಕಾರ್ಯಕ್ರಮದ ತಂಡಕ್ಕೂ ಆಯ್ಕೆಯಾಗಿದೆ.
ಸೊರಬ ತಾಲ್ಲೂಕಿನ ಚಂದ್ರಗುತ್ತಿ ವಿ.ಐಶ್ವರ್ಯ ಅವರು ವೆಂಕಟೇಶ್ ಮತ್ತು ಮಂಜುಳ ದಂಪತಿಯವರ ಹಿರಿಯ ಮಗಳಾಗಿದ್ದು, ಮಲೆನಾಡಿನ ಕೀರ್ತಿ ಪತಾಕೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಉನ್ನತಕ್ಕೇರುವಂತೆ ಮಾಡಿದ್ದಾರೆ. ಐಶ್ವರ್ಯ ಬಿಎ ದ್ವಿತೀಯ ವರ್ಷದಲ್ಲಿ ಓದುತಿದ್ದಾರೆ.
ಪ್ರವಾಸದ ವೇಳೆಯಲ್ಲಿ ತಾವೇ ಊಟ ತಯಾರಿಸಿಕೊಳ್ಳುವಾಗ ಆಹಾರದ ಪ್ರಾಮುಖ್ಯತೆಯ ಅರಿವು ಮೂಡಿತು. ದಯಮಾಡಿ ಆಹಾರವನ್ನು ವ್ಯರ್ಥ ಮಾಡದೆ ಅವಶ್ಯವಿದ್ದಷ್ಟೇ ಬಳಸಬೇಕು. ಎಲ್ಲ ಹೆಣ್ಣು ಮಕ್ಕಳು ಸಮಸ್ಯೆ ಎದುರಾದಾಗ ಧೈರ್ಯವಾಗಿ ಎದುರಿಸಬೇಕು.
– ವಿ.ಐಶ್ವರ್ಯ, ಶಿಖರದಿಂದ ಸಾಗರ ಪ್ರವಾಸ ತಂಡದ ಸದಸ್ಯೆ
ಸ್ವಾತಂತ್ರ್ಯೋತ್ಸವ ಹಿನ್ನೆಲೆ ದೇಶದಾದ್ಯಂತ ಸುವರ್ಣ ಮಹೋತ್ಸವ ಪ್ರಯುಕ್ತ ಕ್ರೀಡೆಗಳ ಕುರಿತು ಜಾಗೃತಿ ಅಭಿಯಾನವಾಗಿ ‘ಶಿಖರದಿಂದ ಸಾಗರ’ ಎಂಬ ಸಾಹಸಮಯ ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿತ್ತು. ಈ ಅಭಿಯಾನಕ್ಕೆ ರಾಜ್ಯದಿಂದ ಆಯ್ಕೆಯಾದ ಐವರು ಯುವತಿಯರ ತಂಡದಲ್ಲಿ ಶಿವಮೊಗ್ಗದ ವಿ.ಐಶ್ವರ್ಯ ಸಹ ಒಬ್ಬರಾಗಿದ್ದಾರೆ.
ಸಾಧನೆಯ ಹಾದಿಯಲ್ಲಿ ಐಶ್ವರ್ಯ
ಕಾಶ್ಮೀರದ ಕರದೂಂಗ್ಲದಿಂದ ಕರ್ನಾಟಕದ ಕಾರವಾರದ ತನಕ ಒಟ್ಟು 3,350 ಕಿ.ಮೀ ಸೈಕ್ಲಿಂಗ್ ಪ್ರಯಾಣ, 5,359 ಮೀ ಎತ್ತರದ ಕರದೂಂಗ್ಲ ಪಾಸ್ ಅನ್ನು ಕೇವಲ 7 ದಿನಗಳಲ್ಲಿ ಸೈಕ್ಲಿಂಗ್ ಮೂಲಕ ಯಶಸ್ವಿಯಾಗಿ ಕ್ರಮಿಸಿರುವ ಇತಿಹಾಸ ಈ ತಂಡದ್ದಾಗಿದೆ.
READ | ಶಿವಮೊಗ್ಗದಲ್ಲಿ ನಿಷೇದಾಜ್ಞೆ ಜಾರಿ, ಏನೇನು ನಿಯಮಗಳು ಅನ್ವಯ?
ಕಾರವಾರದಿಂದ ಮಂಗಳೂರಿನ 300 ಕಿ.ಮೀ ದೂರವನ್ನು ಸಮುದ್ರಯಾನ ಕಯಾಕಿಂಗ್ ಮೂಲಕ ಕ್ರಮಿಸಿ 72 ದಿನಗಳಲ್ಲಿ ತಮ್ಮ ಗುರಿಯನ್ನು ಮುಟ್ಟಿರುತ್ತಾರೆ. ಕಾಶ್ಮೀರದ ಕೊಲ್ಲೋಹಿ ಶಿಖರವನ್ನು ಯಶಸ್ವಿಯಾಗಿ ಕ್ರಮಿಸಿದ ‘ಕಿರಿಯ ಮೌಂಟೇನಿಯರ್’ ಎಂಬ ಐತಿಹಾಸಿಕ ಸಾಧನೆಯನ್ನು ಐಶ್ವರ್ಯ ಮಾಡಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕಯಾಕಿಂಗ್ ತಂಡಗಳಲ್ಲಿ ಆಯ್ಕೆಯಾಗಿ ಹಲವಾರು ಪದಕಗಳನ್ನು ಮುಡಿಗೇರಿಸಿರುತ್ತಾರೆ.
2020-21ರಲ್ಲಿ ಮಧ್ಯ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ವರ್ಧೆಯಲ್ಲಿ ತಂಡದೊಂದಿಗೆ ಭಾಗವಹಿಸಿ ಕ್ರಮವಾಗಿ ಕಂಚು ಮತ್ತು ರಜತ ಪದಕವನ್ನು ಪಡೆದಿರುತ್ತಾರೆ. ಸಾಹಸ ಕ್ರೀಡೆಯಲ್ಲಿ ಧೈರ್ಯದಿಂದ ಭಾಗವಹಿಸಿ ಅದ್ಭುತ ಪ್ರದರ್ಶನವನ್ನು ನೀಡುತ್ತಿರುವ ಐಶ್ವರ್ಯ ಅವರನ್ನು ಸಮಾಜ ಕಲ್ಯಾಣ ಇಲಾಖೆ ಪರವಾಗಿ ವಿದ್ಯಾರ್ಥಿ ನಿಲಯದಲ್ಲಿ ಸನ್ಮಾನಿಸಲಾಗಿದೆ.
https://www.suddikanaja.com/2020/11/16/acchari-short-movie/