ಸುದ್ದಿ ಕಣಜ.ಕಾಂ | CITY | PARKING ZONE
ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ 13 ಕನ್ಸರ್ವೆನ್ಸಿಗಳನ್ನು ಪಾರ್ಕಿಂಗ್ ಪ್ರದೇಶಗಳಾಗಿ ಮಾಡಲಾಗುವುದು. ಇದು ಟೆಂಡರ್ ಹಂತದಲ್ಲಿದೆ ಎಂದು ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ್ ವಟಾರೆ ಹೇಳಿದರು.
ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಪಡಿಸಲಾಗಿರುವ ಕನ್ಸರ್ವೆನ್ಸಿಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗುವುದು. ಇದರಿಂದ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
ಕನ್ಸರ್ವೆನ್ಸಿಗಳ ನಿರ್ವಹಣೆಗೂ ಒತ್ತು ನೀಡಲಾಗುತ್ತಿದೆ. ಅದರಲ್ಲಿ ಕೆಲವೆಡೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಅದದರೆಡೆಗೂ ಗಮನಹರಿಸಲಾಗುವುದು ಎಂದು ಹೇಳಿದರು.
ನೋಂದಾಯಿತ ಬೀದಿ ವ್ಯಾಪಾರಿಗಳಿಗೆ ವೆಂಡಿಂಗ್ ಜೋನ್ ನಲ್ಲಿ ಜಾಗ
ಸಾಗರ ರಸ್ತೆ ಸೇರಿದಂತೆ ವಿವಿಧೆಡೆ ನಾನ್ ವೆಂಡಿಂಗ್ ಜೋನ್ ಆಗಿ ಪರಿಗಣಿಸಿ, ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ಮಹಾನಗರ ಪಾಲಿಕೆಯಲ್ಲಿ ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಿಗೆ ವೆಂಡಿಂಗ್ ಜೋನ್ ನಲ್ಲಿ ಜಾಗ ನೀಡಲಾಗುವುದು. ಅದಕ್ಕಾಗಿ, ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
ಬಂದ ದೂರುಗಳಿಗೆ ನೀಡಲಾಗುತ್ತಿದೆ ಸ್ಪಂದನೆ
ಸಾರ್ವಜನಿಕರ ಅಹವಾಲು ಮತ್ತು ಕುಂದುಕೊರತೆ ನಿವಾರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ದೂರವಾಣಿ, ಇಮೇಲ್, ವಾಟ್ಸಪ್ ಸೇರಿದಂತೆ ಎಲ್ಲ ಮೂಲಗಳಿಂದ ಬರುವ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಲಾಗುತ್ತಿದೆ. ಕುವೆಂಪು ರಸ್ತೆ ಕಾಮಗಾರಿಗಳು ಈ ತಿಂಗಳ ಅಂತ್ಯದ ಒಳಗಾಗಿ ಪೂರ್ಣಗೊಳ್ಳಲಿವೆ. ನಗರದಾದ್ಯಂತ 16,000 ಎಲ್ಇಡಿ ರಸ್ತೆ ಬದಿ ದೀಪಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.