ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ಪೊಲೀಸರ ಚಾಕಚಕ್ಯತೆ ಹಾಗೂ ಕರ್ತವ್ಯ ಪ್ರಜ್ಞೆಯ ಫಲವಾಗಿ ನಡೆಯಬಹುದಾಗಿದ್ದ ದುರಂತವೊಂದು ಸ್ವಲ್ಪದ್ದರಲ್ಲೇ ತಪ್ಪಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಗಲಭೆ ವೇಳೆ ಪೊಲೀಸರು ಸಂಯಮದಿಂದ ವರ್ತಿಸಿದ್ದಾರೆ. ಒಂದು ಗಂಟೆಯೊಳಗಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇಲ್ಲದಿದ್ದರೆ ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಘಟನೆ ಹುಬ್ಬಳ್ಳಿಯಲ್ಲೂ ನಡೆದು ಹೋಗುತಿತ್ತು ಎಂದು ಹೇಳಿದರು.
ಪ್ರಕರಣದ ಸಂಬಂಧ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅನುಮಾನಾಸ್ಪದವಾಗಿರುವ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದರು.
READ | ಇಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಸಿಎಂ ಬಸವರಾಜ್ ಬೊಮ್ಮಾಯಿ, ಯಾವ ಕಾರ್ಯಕ್ರಮಗಳಲ್ಲಿ ಭಾಗಿ
ಹುಬ್ಬಳ್ಳಿ ಘಟನೆಯ ಹಿಂದೆ ಕೋಮುವಾದ
ಹುಬ್ಬಳ್ಳಿಯಲ್ಲಿ ನಡೆದ ಘಟನೆ ಹಿಂದೆ ಕೋಮುವಾದ ಇದೆ. ವ್ಯಕ್ತಿಯೊಬ್ಬ ವಾಟ್ಸಾಪ್ ಸ್ಟೇಟಸ್ ನಲ್ಲಿ ಏನೋ ಹಾಕಿದ್ದಾರೆ ಎಂಬ ಕಾರಣಕ್ಕೆ ಆತನನ್ನು ಬಂಧಿಸಿದ್ದಾರೆ. ಆದರೆ, ಆಮೇಲೆ ಸಾವಿರಾರು ಜನರು ಸೇರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸ್ ವಾಹನ ಜಖಂ ಗೊಳಿಸಿದ್ದಾರೆ. ಗುಂಪೊಂದು ಅರಾಜಕತೆ ನಿರ್ಮಾಣ ಮಾಡುವ ಕೆಲಸ ಮಾಡಿದೆ. ಇದರಲ್ಲಿ ಪೊಲೀಸರು ಸಹ ಗಾಯವಾಗಿದೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆಯಲಾಗಿದೆ ಎಂದರು.
ಕಾನೂನನ್ನು ಯಾರೇ ಕೈಗೆ ತೆಗೆದುಕೊಂಡರೂ ಅವರನ್ನು ಬಿಡುವುದಿಲ್ಲ. ಸರಿಯಾದ ಶಿಕ್ಷೆ ಆಗಲಿದೆ. ದೇಶದಾದ್ಯಂತ ಕೆಲವು ವಿಛಿದ್ರಕಾರಿ ಶಕ್ತಿಗಳು ವ್ಯವಸ್ಥಿತವಾಗಿ ಇಂತಹ ದುಷ್ಕೃತ್ಯ ನಡೆಸುತ್ತಿವೆ ಎಂದು ತಿಳಿಸಿದರು.