ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ಅಕಾಲಿಕ ಮಳೆ ಮಲೆನಾಡಿನಾದ್ಯಂತ ಭಾರಿ ಆವಾಂತರ ಸೃಷ್ಟಿಸಿದೆ. ಮಧ್ಯಾಹ್ನದವರೆಗೆ ಧಗೆ, ಬಿಸಿಲು ಸಂಜೆಯಾಗುತ್ತಿದ್ದಂತೆಯೇ ಗುಡುಗು ಸಹಿತ ಮಳೆಯಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಶಿಕಾರಿಪುರ ತಾಲೂಕಿನಲ್ಲಿ ಭಾರಿ ಹಾನಿ
ಶಿಕಾರಿಪುರ ತಾಲೂಕಿನ ಬೇಗೂರು ಸರ್ಕಾರಿ ಶಾಲೆಯ ಗೋಡೆ, ಗಾಂಧಿನಗರ ಗ್ರಾಮದ ಸರ್ಕಾರಿ ಶಾಲೆಯ ಚಾವಣಿ ಗೋಡೆಗಳು ಕುಸಿದಿದೆ. ರಿಪೇರಿ ಕಾಣದ ಸರ್ಕಾರಿ ಶಾಲೆಯ ಕಟ್ಟಡಗಳು ಹಾಳಾಗಿವೆ. ಅಂಜಾನಪುರ ಹೋಬಳಿ 1, ಹೊಸೂರು ಹೋಬಳಿ 4, ಕಸಬಾ ಹೋಬಳಿ 6 ಇಲ್ಲಿ ಮನೆಗಳು ಕುಸಿದಿವೆ.
ಅಂಜನಾಪುರ ಜಲಾಶಯದ ಹಿನ್ನೀರು ಪ್ರದೇಶ, ಕೆರೆಗಳು ಕೋಡಿ ಹಿರಿಯುವ ಪ್ರದೇಶಗಳಲ್ಲಿ ಅಂದಾಜು 50 ಎಕರೆಯಷ್ಟು ಬೆಳೆ ಹಾನಿಯಾಗಿದೆ. ಮೆಕ್ಕೆ, ಭತ್ತ ಒಣಗಿಸಲಾಗದೇ ಹಾಳಾಗಿವೆ.
ಸಾಗರ ತಾಲೂಕಿನಲ್ಲಿ ಕಟಾವಿಗೆ ಬಂದ ಬೆಳೆ ನೀರು ಪಾಲು
ಕಟಾವಿಗೆ ಬಂದಿರುವ ಮೆಕ್ಕೆಜೋಳ, ಅಡಿಕೆ, ಶೇಂಗಾ, ಶುಂಠಿ ಬೆಳೆಗಳು ನೀರು ಪಾಲಾಗುತ್ತಿವೆ. ತ್ಯಾಗರ್ತಿ ಪ್ರದೇಶದಲ್ಲಿ ಈಗಾಗಲೇ ಕೆಲವರು ಭತ್ತವನ್ನು ಕಟಾವು ಮಾಡಿದ್ದು ಅದನ್ನು ಒಣಗಿಸಲಾಗುತ್ತಿಲ್ಲ. ಭತ್ತ ಕೋಯ್ಲು ಮಾಡಲಾಗದೇ ಗದ್ದೆಯಲ್ಲೇ ಮೊಳಕೆಯೊಡೆಯುತ್ತಿವೆ. ರೈತ ಕಂಗಾಲಾಗಿದ್ದಾನೆ.
ಆನಂದಪುರಂ ಭಾಗದಲ್ಲಿ ರೈತರು ಮಳೆಗೆ ಮುನ್ನವೇ ಅಡಿಕೆ ಕಟಾವು ಮಾಡಿದ್ದರು. ನಂತರ ಮಳೆ ಆರಂಭವಾಗಿದ್ದರಿಂದ ಒಣಗಿಸಲು ಸಾಧ್ಯವಾಗುತ್ತಿಲ್ಲ. ಇಟ್ಟಲ್ಲೇ ಮುಗ್ಗಲು ಹಿಡಿದು ಸಂಪೂರ್ಣ ಹಾಳಾಗುತ್ತಿದೆ. ರೈತರು ಅಡಿಕೆ ಒಣಗಿಸುವುದಕ್ಕಾಗಿ ಮನೆಯಲ್ಲಿ ಖಾಲಿ ಇರುವ ಜಾಗಗಳಲ್ಲೆಲ್ಲ ಅಡಿಕೆ ಹಾಕುತಿದ್ದಾರೆ. ಮಳೆ ವಿರಾಮ ನೀಡಿದರೆ ಕಟಾವು ಮಾಡಿರುವ ಅಡಿಕೆ ಒಣಗಿಸಲು ಸಾಧ್ಯವಾಗಲಿದೆ. ಇಲ್ಲದಿದ್ದದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಆನಂದಪುರಂನ ಅಶೋಕ ರಸ್ತೆಯಲ್ಲಿರುವ ವ್ಯಕ್ತಿಯೊಬ್ಬರ ಮನೆಯು ನೆಲಸಮವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋಡೆಗಳು ಹಸಿ ಹಿಡಿದು ಮನೆ ಕುಸಿದಿದೆ. ಇದುವರೆಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂಬುವುದು ರೈತರ ಅಭಿಪ್ರಾಯವಾಗಿದೆ.
ತಾಲೂಕಿನ ಹಲವೆಡೆ ಬೆಳೆಸಲಾಗಿರುವ ಮೆಕ್ಕೆ ಜೋಳ ಈಗಾಗಲೇ ಹಲವಡೆ ಕಟಾವು ಮಾಡಲಾಗಿದೆ. ಆದರೆ, ಅವುಗಳನ್ನು ಒಣಗಿಸಲು ಸಾಕಾಗುವಷ್ಟು ಬಿಸಿಲು ಇಲ್ಲದೇ ಇರುವುದರಿಂದ ಅವುಗಳು ಇಟ್ಟಲ್ಲೇ ಮೊಳಕೆಯೊಡೆಯುತ್ತಿವೆ. ಇನ್ನೇನು ಮಳೆ ಬಿಡುವು ನೀಡಿದೆ ಎನ್ನುವ ಖುಷಿಯಲ್ಲಿದ್ದ ರೈತರಿಗೆ ಸೋಮವಾರ ರಾತ್ರಿ ಸುರಿದ ಮಳೆ ಮತ್ತೆ ಆಘಾತ ನೀಡಿದೆ.
https://www.suddikanaja.com/2021/11/20/due-to-heavy-rain-in-shivamogga-loss-of-crop-and-house-damage/