ಸುದ್ದಿ ಕಣಜ.ಕಾಂ | KARNATAKA | FUNERAL
ಬೆಂಗಳೂರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿವಮೊಗ್ಗ ಸುಬ್ಬಣ್ಣ (Shivamogga subbanna) ಅವರ ಹೆಸರಿನಲ್ಲಿ ಪ್ರತಿಷ್ಠಾನ ಅಥವಾ ಸ್ಮಾರಕ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಅಂತ್ಯಸಂಸ್ಕಾರ ವೇಳೆ ಮಾತನಾಡಿದ ಅವರು, ಸುಬ್ಬಣ್ಣ ಅವರು ದೊಡ್ಡ ಸಂಗೀತ ಕಲಾ ಪರಂಪರೆಯನ್ನು ಬಿಟ್ಟು ಹೋಗಿದ್ದು, ಇದನ್ನು ಯುವಜನರ ಮೂಲಕ ಮುಂದುವರಿಸುವ ಅಗತ್ಯವಿದೆ. ಅದಕ್ಕಾಗಿ ಸ್ಮಾರಕ ಇಲ್ಲವೇ ಪ್ರತಿಷ್ಠಾನ ಸ್ಥಾಪಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.
READ | ವಿದೇಶದಲ್ಲೂ ಕನ್ನಡದ ಕಂಪು ಸೂಸಿದ ಶಿವಮೊಗ್ಗ ಸುಬ್ಬಣ್ಣ
ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ
ಹೃದಯಾಘಾತದಿಂದ ನಿಧನರಾದ ಶಿವಮೊಗ್ಗ ಸುಬ್ಬಣ್ಣ (83) ಅವರ ಅಂತ್ಯಕ್ರಿಯೆ ಸಕಲ ಗೌರವದಿಂದ ನೆರವೇರಿತು. ಬ್ರಾಹ್ಮಣ ಋಗ್ವೇದ ವಿಧಿ ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿತು.
ನಿಧನಕ್ಕೆ ಗಣ್ಯರಿಂದ ಸಂತಾಪ
ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಸಂತಾಪ ಸೂಚಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೊಮ್ಮಾಯಿ, ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಆರಗ ಜ್ಞಾನೇಂದ್ರ, ಪ್ರಮುಖರಾದ ಪಿಜಿಆರ್ ಸಿಂಧ್ಯಾ, ಮುಖ್ಯಮಂತ್ರಿ ಚಂದ್ರು, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
https://suddikanaja.com/2022/08/08/body-took-from-malathi-river-for-funeral-at-kodla-village-thithahalli/