ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2022-23ನೇ ಸಾಲಿನ 233 ಮುಂದುವರಿದ ಕಾಮಗಾರಿಗಳು ಮತ್ತು 1137 ಹೊಸ ಕಾಮಗಾರಿಗಳು ಸೇರಿ ಒಟ್ಟು 1370 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರದ ಅನುಮೋದನೆ ದೊರೆತಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (Malnad Area Development Board ) ಅಧ್ಯಕ್ಷ ಕೆ.ಎಸ್.ಗುರುಮೂರ್ತಿ (KS Gurumurthy) ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
READ | ಹೊಳೆಹೊನ್ನೂರಿನಲ್ಲಿ ಕಲುಷಿತ ನೀರು ಕುಡಿದು ಹಲವರು ಅಸ್ವಸ್ಥ
ಮಂಡಳಿಯ ಸದಸ್ಯರು ತಮ್ಮ ಪ್ರಸ್ತಾವಿತ ಹೊಸ ಕಾಮಗಾರಿಗಳ ಕ್ರಿಯಾಯೋಜನೆಯನ್ನು ರೂಪಿಸಿ, ಏಜೆನ್ಸಿಯನ್ನು ಗುರುತಿಸಿ ತ್ವರಿತವಾಗಿ ಸಲ್ಲಿಸಿದಲ್ಲಿ ಅವುಗಳನ್ನು ಪರಿಶೀಲಿಸಿ, ಡಿಸೆಂಬರ್ ಮಾಸಾಂತ್ಯದೊಳಗಾಗಿ ಅನುಮೋದನೆ ನೀಡಲಾಗುವುದು. ಕೈಗೊಳ್ಳುವ ಯೋಜನೆಗಳನ್ನು ಮಾರ್ಚ್ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಈ ಎಲ್ಲ ಕಾಮಗಾರಿಗಳ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ ಎಂದರು.
ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಪ್ರಸ್ತಾವನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ವಿಷಯದ ಕುರಿತು ಈ ಹಿಂದೆ ಮುಖ್ಯಮಂತ್ರಿಗೆ 2 ಬಾರಿ ಭೇಟಿ ಮಾಡಿ ಸಮಾಲೋಚನೆ ನಡೆಸಲಾಗಿತ್ತು.
| ಕೆ.ಎಸ್.ಗುರುಮೂರ್ತಿ, ಅಧ್ಯಕ್ಷ, ಎಂಎಡಿಬಿ
ಶಾಸಕರಿಗೆ ತಲಾ 33 ಲಕ್ಷ ರೂ. ಅನುದಾನ
ಈ ಹಿಂದೆ ಮಂಡಳಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ಮಂಡಳಿಯ 65 ವಿಧಾನಸಭೆ ಮತ್ತು 21 ವಿಧಾನ ಪರಿಷತ್ ಸೇರಿದಂತೆ ಒಟ್ಟು 86ಶಾಸಕರುಗಳಿಂದ ತಲಾ 33 ಲಕ್ಷ ರೂ.ದಂತೆ ಕ್ರಿಯಾ ಯೋಜನೆ ಪ್ರಸ್ತಾವನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರವು 86 ಶಾಸಕರಿಗೆ ತಲಾ 1 ಕೋಟಿಯಂತೆ 86 ಕೋಟಿ ರೂ.ಗಳಿಗೆ ಹಾಗೂ ಶೇ.20ರಷ್ಟು ಹೆಚ್ಚುವರಿ ಕ್ರಿಯಾ ಯೋಜನೆ ರೂಪಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಸರ್ಕಾರಕ್ಕೆ ಸಲ್ಲಿಸಲಾದ ಒಟ್ಟು 102.53 ಕೋಟಿ ರೂ.ಗಳ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದರು.
ರಾಜಸ್ವಕ್ಕೆ ಅನುಗುಣವಾಗಿ ಅನುದಾನ ಕೇಳಿ
ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ಮಲೆನಾಡು ಭಾಗದ ಜಿಲ್ಲೆಗಳಿಂದ ರಾಜ್ಯ ಸರ್ಕಾರಕ್ಕೆ ಸಂದಾಯವಾಗಿರುವ ರಾಜಸ್ವದ ಕುರಿತು ಸರ್ಕಾರದ ಗಮನಸೆಳೆದು, ಈ ಹಿಂದೆ ಸಲ್ಲಿಸಿದ ಪ್ರಸ್ತಾವನೆಯ ಮೊತ್ತಕ್ಕಿಂತ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಮುಖ್ಯಮಂತ್ರಿಗಳ ಗಮನ ಸೆಳೆಯಲು ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಮಂಡಳಿಯ ಸರ್ವ ಸದಸ್ಯರ ಸಭೆ ಕರೆದು ಸಮಾಲೋಚನೆ ನಡೆಸುವಂತೆಯೂ ತಿಳಿಸಿದರು.
READ | ಮಾರಕಾಸ್ತ್ರಗಳೊಂದಿಗೆ ರಸ್ತೆ ಬದಿ ನಿಂತಿದ್ದ ಗ್ಯಾಂಗ್, ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ
ಲಭ್ಯ ಅನುದಾನವೇ ಸರಿಯಾಗಿ ಬಳಕೆಯಾಗುತ್ತಿಲ್ಲ!
ಕುಮಾರ್ ಬಂಗಾರಪ್ಪ ಅವರ ಮಾಹಿತಿ ಪ್ರಕ್ರಿಯಿಸಿದ ಗುರುಮೂರ್ತಿ, ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನ ಸಕಾಲದಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ. ಶಾಸಕರು ಕಾಮಗಾರಿಗಳ ಕ್ರಿಯಾಯೋಜನೆ ಸಲ್ಲಿಸದಿರುವುದು, ಹಳೆಯ ಕಾಮಗಾರಿಗಳಿಗೆ ಅನುದಾನ ಬಳಸಿಕೊಳ್ಳುತ್ತಿರುವುದು ಇದಕ್ಕೆ ಕಾರಣ ಎಂದರು. ಸಣ್ಣ ಮೊತ್ತದ ಹೆಚ್ಚಿನ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಕ್ಕಿಂತ ಕನಿಷ್ಠ 5 ಲಕ್ಷ ರೂ.ಗಳ ಮೇಲ್ಪಟ್ಟ ಮೊತ್ತದ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಪ್ರೊ.ಲಿಂಗಣ್ಣ ಮಾಯಕೊಂಡ, ಕೆ.ಬಿ.ಅಶೋಕನಾಯ್ಕ್, ಕುಮಾರ ಬಂಗಾರಪ್ಪ, ಸಿ.ಎಂ.ನಿಂಬಣ್ಣ ಕಲಘಟಗಿ, ತಿಮ್ಮಯ್ಯ ಚಾಮರಾಜನಗರ, ವಿರೂಪಾಕ್ಷಪ್ಪ ಬ್ಯಾಡಗಿ, ಡಿ.ಎಸ್.ಅರುಣ್, ಮಂಡಳಿಯ ನಾಮನಿರ್ದೇಶಿತ ಸದಸ್ಯರು, ಆಡಳಿತಾಧಿಕಾರಿ ಕೆ.ಎಸ್.ಮಣಿ ಮತ್ತಿತರರು ಉಪಸ್ಥಿತರಿದ್ದರು.