ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದಲ್ಲಿ ಮಹಾ ಮೋಸದ ಜಾಲವೊಂದು ಪೊಲೀಸರ ಕೈಗೆ ಸಿಕ್ಕಿದೆ. ಈ ಜಾಲ ಬ್ಯಾಂಕ್ ಗಳನ್ನೇ ಯಾಮಾರಿಸಿ ಲಕ್ಷಾಂತರ ಹಣ ವಂಚನೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.
READ | ಚಿಕ್ಕಮ್ಮನ ತಾಳಿಯನ್ನೇ ದೋಚಿದ ಭೂಪ, 24 ಗಂಟೆಯೊಳಗೆ ಆರೋಪಿ ಬಂಧಿಸಿದ ಪೊಲೀಸ್
ನಕಲಿ ಬಂಗಾರವನ್ನು ಜನರಿಗೆ ನೀಡಿ ಮೋಸ ಮಾಡಿರುವುದು ಕೇಳಿದ್ದೇವೆ. ಆದರೆ, ಈ ಪ್ರಕರಣದಲ್ಲಿ ಬ್ಯಾಂಕ್ ಗಳನ್ನು ವಂಚಿಸಲಾಗಿದೆ. 1,800 ಗ್ರಾಂ. ಬಂಗಾರವನ್ನು ಬ್ಯಾಂಕಿನಲ್ಲಿ ಅಡವಿಟ್ಟು ₹76 ಲಕ್ಷ ಸಾಲವನ್ನು ಪಡೆಯಲಾಗಿದೆ. ಆದರೆ, ಈ ಬಂಗಾರ ನಕಲಿ ಎನ್ನುವ ವಿಚಾರ ನಂತರ ಗೊತ್ತಾಗಿದೆ. ಬಂಗಾರದ ಪರೀಕ್ಷೆ ಮಾಡಿದಾಗ ಅದು ನಕಲಿ ಎಂದು ತಿಳಿದಿದ್ದೇ ಬ್ಯಾಂಕ್ ಅಧಿಕಾರಿಗಳು ದೊಡ್ಡಪೇಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳೆಲ್ಲರೂ ವಿದ್ಯಾವಂತರೇ!
ಈ ಪ್ರಕರಣ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ. ವಿಶೇಷವೆಂದರೆ ಎಲ್ಲರೂ ವಿದ್ಯಾವಂತರೇ ಆಗಿರುವುದು. ಮಲವಗೊಪ್ಪದ ಗಗನ್ ಮತ್ತವನ ಸಹೋದರ ಪವನ್ ಇಬ್ಬರೂ ಬ್ಯಾಂಕ್ ಗಳಲ್ಲಿ ನೌಕರರಾಗಿದ್ದಾರೆ. ಗಗನ್ ಪತ್ನಿ ನಯನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾಳೆ. ಇವರ ಮನೆ ಪಕ್ಕದ ಮಂಜುನಾಥ್ ಎಂಬಾತನನ್ನು ಬಂಧಿಸಲಾಗಿದೆ.
ಇವರೆಲ್ಲ ಸೇರಿ ಶಿವಮೊಗ್ಗದ ವಿವಿಧ ಬ್ಯಾಂಕ್ ಗಳಲ್ಲಿ ಸುಮಾರು 18 ಖಾತೆಗಳನ್ನು ತೆರೆದಿದ್ದಾರೆ. ಆ ಖಾತೆಗಳನ್ನು ಬಳಸಿ ಕಳೆದ ಎಂಟು ದಿನಗಳಲ್ಲಿ ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.