ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆಎಫ್ಡಿ (ಮಂಗನ ಕಾಯಿಲೆ) ಪಾಸಿಟಿವ್ ಹೊಂದಿದ್ದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಜಿಡ್ಡಿ ಉಪಕೇಂದ್ರದ ಕೋರ್ಲಕೈ ಗ್ರಾಮದ ನಿವಾಸಿ ನಾಗಮ್ಮ ಸುಬ್ಬ ಮಡಿವಾಳ(57) ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.
READ | ಶಿವಮೊಗ್ಗದಲ್ಲಿ ಮತ್ತೆ ಮಂಗನ ಕಾಯಿಲೆ ಪಾಸಿಟಿವ್, ಜಿಲ್ಲೆಯಲ್ಲಿ ಇದುವರೆಗೆ ಎಷ್ಟು ಜನರಿಗೆ ಸೋಂಕು ತಗುಲಿದೆ?
ಎಲ್ಲೆಲ್ಲಿ ಚಿಕಿತ್ಸೆ ಪಡೆದಿದ್ದರು?
ಜ.28 ರಂದು ಆಶಾ ಕಾರ್ಯಕರ್ತೆ ಮನೆ ಭೇಟಿ ಸಂದರ್ಭದಲ್ಲಿ ನಾಗಮ್ಮ ಇವರಿಗೆ ಕೆಮ್ಮು ಮತ್ತು ಜ್ವರ ಇರುವುದು ಗೊತ್ತಾಗಿ ಕಫ ಪರೀಕ್ಷೆಗೆ ನೀಡಲು ಹಾಗೂ ಆಸ್ಪತ್ರೆಗೆ ಹೋಗಲು ತಿಳಿಸಲಾಗಿದ್ದು ರೋಗಿಯು ತಾನು ಆರಮಾಗಿ ಇರುವುದಾಗಿ ಹೇಳಿರುತ್ತಾರೆ. ತದನಂತರ ರೋಗಿಯು ಜ.29 ರಂದು ಸಾಗರದ ಭಾಗವತ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿರುತ್ತಾರೆ.
ಜ.30 ರಂದು ಮನೆ ಭೇಟಿ ಸಮಯದಲ್ಲಿ ಜ್ವರ ಅವರಿಗೆ ಜ್ವರ ಇರುವ ಕಾರಣ ಸಮುದಾಯ ಆರೋಗ್ಯಾಧಿಕಾರಿಗಳು ರಕ್ತದ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆ ನಡೆಸಿ, ಫೆ.1 ರಂದು ಕೆಎಫ್ಡಿ ಆರ್ಟಿಪಿಸಿಆರ್ ಪಾಸಿಟಿವ್ ಎಂದು ವಿಡಿಎಲ್ ಶಿವಮೊಗ್ಗದಿಂದ ವರದಿ ಬಂದಿರುತ್ತದೆ.
ಫೆ.2 ರಂದು ರೋಗಿಯನ್ನು ಸಿದ್ದಾಪುರ ತಾಲ್ಲೂಕಾಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚೇತರಿಕೆಯಾಗದ ಕಾರಣ ಅವರನ್ನು ಫೆ.3 ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರೆಫರ್ ಮಾಡಿರುತ್ತಾರೆ.
ಅಲ್ಲಿಯೂ ಚೇತರಿಕೆ ಆಗದ ಕಾರಣ ಕೆಎಂಸಿ ಮಣಿಪಾಲಕ್ಕೆ ಫೆ.4 ರಂದು ರೆಫರ್ ಮಾಡಿದ್ದು ಅದೇ ದಿನ ಹೋಗಿ ಕೆಎಂಸಿ ಮಣಿಪಾಲಕ್ಕೆ ದಾಖಲಾಗಿರುತ್ತಾರೆ. ಐಸಿಯು ನಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಫೆ.5 ರಂದು ಮರು ರಕ್ತ ಪರೀಕ್ಷೆ ಮಾಡಲಾಗಿ ಫೆ.6 ರಂದು ಕೆಎಫ್ಡಿ ಪಾಸಿಟಿವ್ ವರದಿ ಬಂದಿರುತ್ತದೆ.
ಫೆ.24 ರಂದು ವೈದ್ಯರ ಸಲಹೆ ವಿರುದ್ದವಾಗಿ ಕೆಎಂಸಿ ಆಸ್ಪತ್ರೆಯಿಂದ ಮಧ್ಯಾಹ್ನ 3.30ಕ್ಕೆ ಬಿಡುಗಡೆ ಹೊಂದಿರುತ್ತಾರೆ. ಆರೋಗ್ಯ ಇಲಾಖೆಯವರು ಮನವೊಲಿಸಿ ಫೆ.24 ರಂದು ಸಂಜೆ ಮೆಗ್ಗನ್ ಆಸ್ಪತ್ರೆಗೆ ದಾಖಲಿಸಿ ಐಸಿಯು ನಲ್ಲಿ ಚಿಕಿತ್ಸೆ ನೀಡಿರುತ್ತಾರೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಡಿಎಚ್ಓ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.