ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಸ್ತುತ ಶಿವಮೊಗ್ಗ ರೈಲು ನಿಲ್ದಾಣ (shivamogga railway station)ಕ್ಕೆ ಕೇಂದ್ರ ಸರ್ಕಾರ ₹24.37 ಕೋಟಿಯನ್ನು ನೀಡಿದ್ದು ಸಾಗರ ರೈಲು ನಿಲ್ದಾಣಕ್ಕೆ ₹26.44 ಕೋಟಿ ಹಾಗೂ ತಾಳಗುಪ್ಪಕ್ಕೆ ₹27.86 ಕೋಟಿ ಅನುದಾನವನ್ನು ನೀಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ (BY Raghavendra) ಹೇಳಿದರು.
READ | ಶಿವಮೊಗ್ಗದಲ್ಲಿ ಎಥೆನಾಲ್ ಉತ್ಪಾದನೆಗೆ ವಿಫುಲ ಅವಕಾಶ, ಆಗುಂಬೆ ಘಾಟಿಯಲ್ಲಿ ಟನಲ್ ನಿರ್ಮಾಣ, ಗಡ್ಕರಿ ಹೇಳಿದ್ದೇನು?
ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಪ್ರಧಾನಿ ಮೋದಿ ಅವರು ವರ್ಚುಯಲ್ ವೇದಿಕೆ ಮೂಲಕ ನೈಋತ್ಯ ರೈಲ್ವೆಯ 1192.86 ಕೋಟಿ ಮೌಲ್ಯದ ವಿವಿಧ ರೈಲ್ವೆ ಯೋಜನೆಗಳ ಅಮೃತ್ ಮಿಷನ್ ಯೋಜನೆ ಅಡಿ 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು 1500 ರಸ್ತೆಗಳ ಮೇಲ್ಸೇತುವೆಗಳ ಅಂಡರ್ ಪಾಸ್ಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಆನಂದಪುರ, ಕುಂಸಿ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ವಂದೇ ಮಾತರಂ ರೈಲು ಸೇವೆ
ಶಿವಮೊಗ್ಗ ರೈಲ್ವೆ ನಿಲ್ದಾಣ ಕೂಡ ಈ ಯೋಜನೆಯಲ್ಲಿ ಸೇರಿಕೊಂಡಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ನಮ್ಮ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಪ್ರತಿ ನಿತ್ಯ 15 ರಿಂದ 18 ಸಾವಿರ ಜನರು ಪ್ರಯಾಣವನ್ನು ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದಲೂ ವಂದೇ ಭಾರತ್ ರೈಲು ಆರಂಭಿಸಲಾಗುವುದು. ಪಕ್ಕದ ಭದ್ರಾವತಿಯ ರೈಲ್ವೆ ನಿಲ್ದಾಣವನ್ನು ಕೂಡ ಮುಂದಿನ ಹಂತದಲ್ಲಿ ಈ ಯೋಜನೆಗೆ ಜೋಡಿಸಲಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರವನ್ನು ವಹಿಸಕೊಂಡ ನಂತರ ದೇಶದಲ್ಲಿಯೇ ರೈಲ್ವೆ ಇಲಾಖೆ ಐತಿಹಾಸಿಕ ಬದಲಾವಣೆ ಕಂಡು, ಸಮಗ್ರ ಅಭಿವೃದ್ಧಿಯಾಗಿದೆ. ರೈಲ್ವೆ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರದ ಅಮೃತ್ ಭಾರತ್ ಸ್ಟೇಷನ್ ಸ್ಟೀಮ್ -2 ರ ಅಡಿಯಲ್ಲಿ ನೈರುತ್ಯ ರೈಲ್ವೆ ಮೂಲಕ ರಾಜ್ಯದಲ್ಲಿ 28 ನಿಲ್ದಾಣಗಳನ್ನು ನವೀಕರಿಸಲು ಮತ್ತು ಆಧುನೀಕರಿಸಲು ಯೋಚಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಎಲ್ಲಾ ಯೋಜನೆಗಳಿಗೆ ವರ್ಚಯಲ್ ವೇದಿಕೆ ಮೂಲಕ ದೆಹಲಿಯಿಂದ ಚಾಲನೆ ನೀಡಿದ್ದಾರೆ ಎಂದರು.
ಪ್ರಯಾಣಿಕರಿಗೆ ಹೈಟೆಕ್ ಸೌಲಭ್ಯಗಳು
ಈ ಯೋಜನೆ ಮುಖ್ಯ ಉದ್ದೇಶ ರೈಲು ನಿಲ್ದಾಣಗಳನ್ನು ಅತ್ಯಾಧುನಿಕ ತಂತ್ರಜ್ಞಾನ, ಆರೋಗ್ಯ ಕೇಂದ್ರ, ಹಿರಿಯರಿಗೆ ಅನುಕೂಲ, ವ್ಯಾಪಾರ ವಹಿವಾಟು ಸೇರಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿದೆ. ರೈಲು ನಿಲ್ದಾಣಗಳನ್ನು ಸುಂದರಗೊಳಿಸುವುದರ ಮೂಲಕ ದೇಶಕ್ಕೆ ಹೆಚ್ಚಿನ ಮೆರಗು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ 10 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಸ್ವತಂತ್ರ ಭಾರತದಲ್ಲಿ ಈವರೆಗೂ ಆಗಿರುವುದಿಲ್ಲ. ನಾವು ಹೊರ ದೇಶದ ಅಭಿವೃದ್ಧಿಯನ್ನು ಹೊಗಳುತ್ತಿದ್ದ ಕಾಲ ಹಿಂದೆ ಇತ್ತು. ಆದರೆ ಈಗ ಪರಿಸ್ಥತಿ ಬದಲಾಗಿದೆ. ಭಾರತದಲ್ಲಿ ಈಗಾಗಲೇ 68 ವಂದೇ ಭಾರತ್ ರೈಲುಗಳು ಆರಂಭವಾಗಿದ್ದು ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ. ಇದು ಸ್ವದೇಶಿ ನಿರ್ಮಿತ ಎಂಬುದು ನಮ್ಮ ದೇಶದ ಹೆಮ್ಮೆ ಎಂದು ತಿಳಿಸಿದರು.
ರೈಲ್ವೆ ಇಲಾಖೆಯ ಎಡಿಎಂ ವಿನಾಯಕ್ ನಾಯ್ಕ್, ಎಡಿಆರ್ ಎಂ ಮಹೇಶ್ ನಾಗರಾಜ್, ಇಂಜಿನಿಯರ್ ಸಿ.ಮೊಹನ್ ರಾವ್, ಮೂರ್ತಿ, ಯಶೋಧ, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.