ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲಾತಿ ನೀಡಬಹುದಲ್ಲ ಎಂಬ ವಿರೋಧ ಪಕ್ಷದ ನಾಯಕರ ಪ್ರಶ್ನೆಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಸರ್ಕಾರ ಕಳೆದ 70 ವರ್ಷಗಳಿಂದ ಅಧಿಕಾರದಲ್ಲಿತ್ತು. ಆ ಸಮಯದಲ್ಲೇನು ಮಂಡಕ್ಕಿ ತಿಂತಿದ್ರಾ? ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ಗೆ ಚಳಿಜ್ವರ | ಕಾಂಗ್ರೆಸ್ ಪಕ್ಷ ಅಹಿಂದ ಓಟ್ ಬ್ಯಾಂಕ್ ಪಡೆದಿದ್ದೇ ವಿನಹ ಅವರ ಉದ್ಧಾರ ಮಾಡಿಲ್ಲ. ಈಗ ಬಿಜೆಪಿ ಹಿಂದುಳಿದವರ ಪರ ನಿಂತಿದ್ದರಿಂದ ಕಾಂಗ್ರೆಸ್ ನವರಿಗೆ ಚಳಿಜ್ವರ ಶುರುವಾಗಿದೆ ಎಂದು ಟಾಂಗ್ ನೀಡಿದರು.
ಸಿದ್ದರಾಮಯ್ಯ ಅವರಿಗೆ ಕುರುಬ ಸಮುದಾಯದ ಸ್ವಾಮೀಜಗಳು ಭೇಟಿ ನೀಡಿದ್ದಾರೆ. ಅವರು ಹೋರಾಟದಲ್ಲಿ ಭಾಗವಹಿಸುವುದಿಲ್ಲ. ಆದರೆ, ಅದಕ್ಕೆ ಬೆಂಬಲಿಸುವುದಾಗಿ ಹೇಳಿರುವುದಾಗಿ ಸ್ವಾಮೀಜಿಗಳೇ ಖುದ್ದು ನನಗೆ ತಿಳಿಸಿದ್ದಾರೆ. ಸಮಾವೇಶದಲ್ಲಿ ಭಾಗವಹಿಸುವುದು ಬಿಡುವುದು ಸಿದ್ದರಾಮಯ್ಯ ಅವರ ವೈಯಕ್ತಿಕ ವಿಚಾರ. ಆದರೆ, ಸಮುದಾಯದ ಪರ ಇಷ್ಟು ದೊಡ್ಡ ಪಾದಯಾತ್ರೆ ಬಳಿಕವಾದರೂ ಕನಿಷ್ಠ ಯೋಗಕ್ಷೇಮವಾದರೂ ವಿಚಾರಿಸಬೇಕಿತ್ತು ಎಂದು ಹೇಳಿದರು.
ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ | ಉಪ್ಪಾರ, ಸವಿತಾ ಮತ್ತು ಕುರುಬ ಸಮುದಾಯದ ಕುಲಶಾಸ್ತ್ರ ಅಧ್ಯಯನ ಜನಡೆಯುತ್ತಿದೆ. ಇದಾದ ಬಳಿಕ ವರದಿ ಆಧರಿಸಿ ಮೀಸಲಾತಿ ಸಂಬಂಧಪಟ್ಟಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮೇಯರ್ ಸುವರ್ಣ ಶಂಕರ್ ಉಪಸ್ಥಿತರಿದ್ದರು.