ಸುದ್ದಿ ಕಣಜ.ಕಾಂ
ಶಿವಮೊಗ್ಗ: ಯಡಿಯೂರಪ್ಪ ಅವರ 78ನೇ ಜನ್ಮದಿನದ ಪ್ರಯುಕ್ತ 40 ಸಾವಿರ ಲಡ್ಡು ವಿತರಣೆ ಮಾಡಲಾಗುತ್ತಿದ್ದು, ಭಾರಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ‘ನಮ್ಮೊಲುಮೆ’ಯ ಭಾವಾಭಿನಂದನಾ ಕಾರ್ಯಕ್ರಮವನ್ನು ಫೆಬ್ರವರಿ 28ರಂದು ಸಂಜೆ 6 ಗಂಟೆಗೆ ಹಳೆಯ ಜೈಲು ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಎಸ್.ರುದ್ರೇಗೌಡ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸನ್ಮಾನ ಬಳಿಕ ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಅವರು ಭಾವಾಭಿನಂದನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅನುಶ್ರೀ ನಿರೂಪಣೆ ಮಾಡಲಿದ್ದಾರೆ. ಮಾಚ್ 1ರಂದು ಸಂಜೆ 6 ಗಂಟೆಗೆ ಆಳ್ವಾಸ್ ನುಡಿಸಿರಿ ತಂಡದವರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ಎರಡು ದಿನದ ಕಾರ್ಯಕ್ರಮದಲ್ಲಿ 40 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ. ಕಡ್ಡಾಯವಾಗಿ ಎಲ್ಲರೂ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ಜತೆಗೆ, ಮಾಸ್ಕ್ ವಿತರಣೆ ಮಾಡಲಾಗುವುದು.
– ಡಿ.ಎಸ್.ಅರುಣ್, ಅಭಿನಂದನಾ ಸಮಿತಿ ಮುಖ್ಯಸ್ಥ
27ರಂದು ಯಡಿಯೂರಪ್ಪ ಅವರ ಜನ್ಮದಿನವಿದ್ದು, ಅಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದರಿಂದ 28ರಂದು ಶಿವಮೊಗ್ಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಆದರೆ, ಜನ್ಮದಿನವಾದ 27ರಂದು ಬೆಳಗ್ಗೆ ರವೀಂದ್ರ ನಗರದಲ್ಲಿರುವ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿಯ ವರಿಷ್ಠ ಡಿ.ಎಸ್.ಶಂಕರಮೂರ್ತಿ ಅವರು ಅಭಿನಂದನಾ ನುಡಿ ಆಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ‘ರಾಜಕಾರಣದ ತ್ರಿವಿಕ್ರಮ’ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಸಚಿವ ಭೈರತಿ ಬಸವರಾಜ್ ಭಾಗವಹಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಕುಮಾರ ಬಂಗಾರಪ್ಪ, ಕೆ.ಬಿ.ಅಶೋಕ ನಾಯ್ಕ್, ಆಯನೂರು ಮಂಜುನಾಥ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಜ್ಞಾನೇಶ್ವರ್, ಎಸ್.ಎಸ್.ಜ್ಯೋತಿಪ್ರಕಾಶ್, ವಕೀಲ ಬಸಪ್ಪಗೌಡರು, ಟಿ.ಆರ್. ಅಶ್ವಥ್ನಾರಾಯಣ ಶೆಟ್ಟಿ, ಬಳ್ಳೆಕೆರೆ ಸಂತೋಷ್, ಲಕ್ಷ್ಮಿನಾರಾಯಣ ಕಾಶಿ, ರಮೇಶ್ ಹೆಗ್ಡೆ, ಮಾಲತೇಶ್, ಹಿರಣ್ಣಯ್ಯ ಉಪಸ್ಥಿತರಿದ್ದರು.