ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಮಾರ್ಚ್ 20ರಂದು ಬೃಹತ್ ಜನಶಕ್ತಿ ಹೋರಾಟ ಏರ್ಪಡಿಸಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಐಕ್ಯ ಹೋರಾಟ ಸಂಘಟನೆ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ, ಪರಿಶಿಷ್ಟ ಜಾತಿ, ಮಹಿಳಾ ಸಂಘಟನೆ, ಕಾರ್ಮಿಕ ಸಂಘಟನೆ ಮತ್ತು ಕನ್ನಡ ಪರ ಸಂಘಟನೆಗಳು ಹೋರಾಟದಲ್ಲಿ ಭಾಗವಹಿಸಲಿವೆ.
ಪ್ರಜಾಪ್ರಭುತ್ವ ಮತ್ತು ರೈತ ವಿರೋಧಿ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡುವುದಿಲ್ಲ. ಸುಗ್ರೀವಾಜ್ಞೆಯ ಮೂಲಕ ಇದನ್ನು ಜಾರಿಗೆ ತಂದು ಸಂಸತ್ತಿನಲ್ಲಿ ಈ ಬಗ್ಗೆ ಚರ್ಚಿಸುವುದಕ್ಕೂ ಅವಕಾಶ ನೀಡಿಲ್ಲ.
– ಕೆ.ಟಿ.ಗಂಗಾಧರ್, ರೈತ ನಾಯಕ
ರೈತ ನಾಯಕರಾದ ಕೆ.ಟಿ.ಗಂಗಾಧರ್, ಎಚ್.ಆರ್.ಬಸವರಾಜಪ್ಪ ಅವರು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಹೋರಾಟದ ರೂಪುರೇಷೆಗಳ ಬಗ್ಗೆ ತಿಳಿಸಿದರು.
ಈ ಹೋರಾಟ ಬರೀ ಕಾಯ್ದೆ ವಿರೋಧಿಯಷ್ಟೇ ಅಲ್ಲ. ಸರ್ವಾಧಿಕಾರದ ಧೋರಣೆಯ ವಿರುದ್ಧವೂ ಇದೆ. ಸರ್ಕಾರವನ್ನು ಕಿತ್ತೊಗೆಯುವವರೆಗೆ ಹೋರಾಟ ನಡೆಯಲಿದೆ.
– ಎಚ್.ಆರ್.ಬಸವರಾಜಪ್ಪ, ರೈತ ಸಂಘದ ಮುಖಂಡ
ಹೋರಾಟ ಮತ್ತು ಚಳವಳಿಯ ಹಿನ್ನೆಲೆ ಹೊಂದಿರುವ ಶಿವಮೊಗ್ಗದಿಂದ ಶುರುವಾಗಲಿರುವ ಜನಶಕ್ತಿ ಹೋರಾಟದ ಕಿಚ್ಚು ರಾಜ್ಯಾದ್ಯಂತ ಪಸರಿಸಲಿದೆ ಎಂದು ಹೇಳಿದರು.
ಹೋರಾಟದ ಸ್ಥಳವನ್ನು ಇನ್ನೂ ನಿಗದಿಪಡಿಸಿಲ್ಲ. ಆದರೆ, ಶೀಘ್ರವೇ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ಹೋರಾಟ ಮಾಡುತ್ತಿದ್ದೇವೆ. ಹೋರಾಟದಲ್ಲಿ ರಾಷ್ಟ್ರೀಯ ಹೋರಾಟಗಾರರಾದ ರಾಕೇಶ್ ಟಿಕಾಯಿತ್, ಯದುವೀರ್ ಸಿಂಗ್, ದರ್ಶನ್ ಪಾಲ್, ಯೋಗೇಂದ್ರ ಭಾಗವಹಿಸಲಿದ್ದಾರೆ.
– ಕೆ.ಪಿ.ಶ್ರೀಪಾಲ್, ವಕೀಲರು
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ್, ಡಿ.ಎಸ್.ಎಸ್. ಮುಖಂಡ ಎಂ.ಗುರುಮೂರ್ತಿ, ಎಚ್. ಹಾಲೇಶಪ್ಪ, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಎನ್.ರಮೇಶ್, ಎಚ್.ಸಿ.ಯೋಗೇಶ್, ಕಾಶಿ ವಿಶ್ವನಾಥ್, ಪಾಲಾಕ್ಷಿ, ಶಿವಮೂರ್ತಿ, ಪ್ರಗತಿಪರ ಹೋರಾಟಗಾರ ಕೆ.ಎಲ್.ಅಶೋಕ್, ಶಿಜುಪಾಶ ಉಪಸ್ಥಿತರಿದ್ದರು.