ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಪರಾಧ ಹಿನ್ನೆಲೆ ಹೊಂದಿರುವ ಯಾಸಿನ್ ಖುರೇಷಿ ಎಂಬಾತನ ಮೇಲೆ ಹಲ್ಲೆ ಮಾಡಲು ಬಂದ ಇಬ್ಬರು ಬೀದಿ ಹೆಣವಾದ ಘಟನೆ ಲಷ್ಕರ್ ಮೊಹಲ್ಲಾದಲ್ಲಿ ಬುಧವಾರ ಸಂಜೆ ನಡೆದಿದೆ.
ಕೆ.ಆರ್.ಪುರಂನ ಸೋಹೆಲ್ ಅಲಿಯಾಸ್ ಸೇಬು(32), ಅಣ್ಣಾನಗರದ ಗೌಸ್ (30) ಎಂಬುವವರು ಮೃತಪಟ್ಟಿದ್ದಾರೆ.
ನಡೆದಿದ್ದೇನು?
ಸೋಹೆಲ್, ಸೇಬು ಎಂಬುವವರು ಲಷ್ಕರ್ ಮೊಹಲ್ಲಾಗೆ ಬಂದು ಯಾಸಿನ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆಗ ಆತನ ಸಹಚರರು ಸೇರಿಕೊಂಡು ಹರಿತವಾದ ಸಾಮಗ್ರಿಯಿಂದ ಕೊಲೆ ಮಾಡಿದ್ದಾರೆ. ನಂತರ, ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿ ಹಾಕಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಯಾಸಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹೊಡೆದಾಡುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
READ | ಶಿವಮೊಗ್ಗ ಲೋಕಸಭೆ ಚುನಾವಣೆ, ಎಲ್ಲಿ ಏನು ಎಡವಟ್ಟಾಗಿದೆ?
ಘಟನಾ ಸ್ಥಳಕ್ಕೆ ಎಸ್.ಪಿ ದೌಡು
ಘಟನಾ ಸ್ಥಳಕ್ಕೆ ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ. ಅನಿಲ್ ಕುಮಾರ್ ಭೂಮರಡ್ಡಿ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್.ಪಿ. ಹೇಳಿದ್ದೇನು?
ಸಂಜೆ 5.30 ಗಂಟೆಯ ಹೊತ್ತಿಗೆ ಸ್ಥಳೀಯ ವ್ಯಕ್ತಿಯೊಬ್ಬನ ಮೇಲೆ ಹೊರಗಿನಿಂದ ಬಂದ ಯುವಕರು ಹಲ್ಲೆ ನಡೆಸಿದ್ದರು. ಸ್ಥಳೀಯರು ಸೇರಿ ಹರಿತವಾದ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ಆರೋಪಿಗಳ ಗುರುತು ಪತ್ತೆಯಾಗಿದೆ. ಅವರನ್ನು ಬಂಧಿಸಲಾಗುವುದು ಎಂದು ಮಿಥುನ್ ಕುಮಾರ್ ತಿಳಿಸಿದ್ದಾರೆ.