ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿಧಾನಸಭೆ ಚುನಾವಣೆ (assembly election) ನಿಮಿತ್ತ ಪೊಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ. ಸೋಮವಾರ ರಾತ್ರಿಯೇ ಇನ್ನಷ್ಟು ಸೇನಾ ತುಕ್ಕಡಿಗಳು ಆಗಮಿಸಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ (GK Mithun Kumar) ತಿಳಿಸಿದರು.
ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
READ | ಜಗದೀಶ್ ಶೆಟ್ಟರ್’ಗೆ ಬಹಿರಂಗ ಪತ್ರ ಬರೆದ ಈಶ್ವರಪ್ಪ, ಕೇಳಿದ 5 ಪ್ರಮುಖ ಪ್ರಶ್ನೆಗಳಿವು
ಜಿಲ್ಲೆಗೆ ಈಗಾಗಲೇ CRPF ಆಗಮಿಸಿದೆ. ಜತೆಗೆ, ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪಡೆ ಸೇರಿ ಹಲವು ಭದ್ರತಾ ಪಡೆಗಳು ಆಗಮಿಸಲಿವೆ ಎಂದರು.
ಜಿಲ್ಲೆಗೆ ಆರು ಸಿ.ಆರ್.ಪಿಎಫ್ ತುಕ್ಕಡಿ ಆಗಮಿಸಿದ್ದು, ಅವುಗಳನ್ನು ಹಲವೆಡೆ ನಿಯೋಜಿಸಲಾಗಿದೆ. ಇನ್ನೂ ಎಂಟು ತುಕ್ಕಡಿ ಬರಲಿವೆ ಎಂದು ಮಾಹಿತಿ ನೀಡಿದರು.
1300ಕ್ಕೂ ಹೆಚ್ಚು ಕೇಸುಗಳು ದಾಖಲು
ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೂ ಸುಮಾರು 1,300ಕ್ಕೂ ಹೆಚ್ಚು ಕೇಸುಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿನ 1500 ರೌಡಿ ಶೀಟರ್ಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಒಟ್ಟು 61 ಮಂದಿಯನ್ನು ಗಡಿಪಾರು ಮಾಡುವಂತೆ ಶಿಫಾರಸು ಮಾಡಲಾಗಿದ್ದು ಅದರಲ್ಲಿ 51 ಮಂದಿ ಗಡಿಪಾರು ಆಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಗಡಿಪಾರು ಮಾಡಲಾದಂತಹ ಜಿಲ್ಲೆಗಳಲ್ಲಿ ಶಿವಮೊಗ್ಗ ಮೊದಲ ಸ್ಥಾನದಲ್ಲಿದೆ. ಅಲ್ಲದೆ ಆರು ಜನರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗಿದೆ ಎಂದರು.
ಈವರೆಗೆ ₹17 ಕೋಟಿ ಸೀಜ್
ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯ ವಿವಿಧಡೆ 36 ಚೆಕ್ ಪೋಸ್ಟ್ಗಳನ್ನು ಹಾಕಲಾಗಿದೆ. ನಗದು, ಮದ್ಯ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಸುಮಾರು ₹4.67 ಕೋಟಿ ನಗದು ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಬಾರಿ ಈಗಾಗಲೇ ₹17 ಕೋಟಿ ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಎಸ್. ಲೋಖಂಡೆ, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಎಸ್. ಯಡಗೆರೆ, ನಾಗರಾಜ ನೇರಿಗೆ, ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.
LMD | ವ್ಯಾಪಾರಸ್ಥರೇ ಹುಷಾರ್, ನಿಯಮ ಮೀರಿದ್ರೆ ಬೀಳುತ್ತೆ ದಂಡ, ಒಂದು ವರ್ಷದಲ್ಲಿ ₹18.30 ಲಕ್ಷ ದಂಡ ಸಂಗ್ರಹ