ಸುದ್ದಿ ಕಣಜ.ಕಾಂ
ಶಿವಮೊಗ್ಗ: ಈ ಬಾರಿಯ ನವದೆಹಲಿಯ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾಗವಹಿಸಲು ಆಯ್ಕೆ ಆಗಿರುವ ರಾಜ್ಯದ ಸ್ತಬ್ಧಚಿತ್ರದಲ್ಲಿ ಶಿವಮೊಗ್ಗ ರಂಗಾಯಣದ ಕಲಾವಿದರು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಕಲಾವಿದರು: ಖ್ಯಾತ ಕಲಾ ನಿರ್ದೇಶಕ ಶಶಿಧರ್ ಅಡಪ ಅವರು ವಿನ್ಯಾಸ ಮಾಡಿರುವ ಸ್ತಬ್ಧ ಚಿತ್ರದಲ್ಲಿ ಭಾಗವಹಿಸಲು ಶಿವಮೊಗ್ಗ ರಂಗಾಯಣದ ಕಲಾವಿದರಾದ ಆರ್.ಪ್ರಸನ್ನ ಕುಮಾರ್, ಡಿ.ಆರ್.ನಿತಿನ್, ಎಸ್.ಎಂ.ರವಿಕುಮಾರ್,ಸುಜೀತ್ ಕಾರ್ಕಳ, ಎನ್.ಚಂದನ್, ಎಂ.ಎಲ್.ಶರತ್ ಬಾಬು, ಬಿ.ಕೆ.ಮಹಾ ಬಲೇಶ್ವರ್, ಸವಿತಾ ಆರ್.ಕಾಳಿ, ಆರ್.ರಮ್ಯಾ, ಆರ್.ರಂಜಿತಾ, ಎಂ.ಎಚ್.ದೀಪ್ತಿ, ಕಾರ್ತಿಕ್ ಕಲ್ಲುಕುಟಿಕರ್ ಆಯ್ಕೆಯಾಗಿದ್ದಾರೆ.
ಜನವರಿ 26 ರಂದು ನಡೆಯುವ ಈ ಪೆರೇಡ್ನಲ್ಲಿ ಕಲಾವಿದರಾಗಿ ಭಾಗವಹಿಸಲು ಜನವರಿ 10ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ಅವರು ಬುದ್ಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ | ಜನವರಿ 10ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಶ್ವಾನ, ಬೆಕ್ಕು ಪ್ರದರ್ಶನ, ಕಂಪ್ಲೀಟ್ ಮಾಹಿತಿ ಇಲ್ಲಿದೆ
ಹಕ್ಕಿ ಕಥೆ ಮಕ್ಕಳ ನಾಟಕ: ಹಿರಿಯ ಸಾಹಿತಿ ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ `ಹಕ್ಕಿ ಕಥೆ’ ಮಕ್ಕಳ ನಾಟಕವನ್ನು ಶಿವಮೊಗ್ಗ ರಂಗಾಯಣದ ಕಲಾವಿದರು ಜನವರಿ 8 ಮತ್ತು 9ರಂದು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.
ಎಸ್.ಮಾಲತಿ ಅವರು ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸಿದ್ದು, ನಾಟಕ ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಂಜೆ 6.15ರಿಂದ ಆರಂಭವಾಗಲಿದೆ. ಈ ನಾಟಕವನ್ನು ಗಣೇಶ್ ಮಂದಾರ್ತಿ ಮತ್ತು ಶ್ರವಣ್ ಹೆಗ್ಗೋಡು ಅವರು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ | ಮತ್ತೆ ಸದ್ದು ಮಾಡಿದ ಬಜರಂಗ ದಳ ಸಹ ಸಂಚಾಲಕನ ಮೇಲಿನ ಹಲ್ಲೆ ಪ್ರಕರಣ
ಏನಿದು ನಾಟಕ: ಪ್ರಕೃತಿಯ ಇತರ ಜೀವಿಗಳ ಸಹಜ ಬದುಕಿನ ಮೇಲೆ ಮನುಷ್ಯನ ಹಸ್ತಕ್ಷೇಪ ಎಂತಹದ್ದು ಮತ್ತು ಅದಕ್ಕೆ ಪ್ರಕೃತಿ ಕೊಡುವ ತಿರುಗೇಟಿನ ಉತ್ತರ ಯಾವ ತರಹ ಇರಬಹುದು ಎಂಬುದನ್ನು ಈ ನಾಟಕ ನಮಗೆ ಮನಗಾಣಿಸುತ್ತದೆ.
ಪಶ್ಚಿಮ ಘಟ್ಟಗಳ ಮೇಲಾಗುವ ಮನುಷ್ಯನ ಯಂತ್ರ ದಾಳಿಗೆ ಹೆದರಿ ಹಕ್ಕಿಗಳು ಕಾಡು ಬಿಡುತ್ತವೆ. ಅಲ್ಲಿಂದ ಶುರುವಾಗುವ ಆ ಜೀವಿಗಳ ಬದುಕು ದಾರುಣವಾಗುತ್ತಾ ಬರುವ ಚಿತ್ರಣ ಈ ನಾಟಕದಲ್ಲಿದೆ. ಕಾರ್ಖಾನೆಯ ವಿಷದ ಹೊಗೆ, ಡೈನಾಮೇಟ್ ಗಳ ಸ್ಫೋಟ, ಮುಳುಗಡೆಯ ಪ್ರದೇಶಗಳಿಂದಾಗುವ ಆವಾಂತರ ಹೀಗೆ ಒಂದಾದ ಮೇಲೊಂದು ಅವಘಡಗಳಿಗೆ ಸಿಲುಕಿ ಹಕ್ಕಿಗಳು ಸಾಯುತ್ತವೆ. ಕೊನೆಯಲ್ಲಿ ಮರಗಳ ಕೇಡಿಗೆ ಹೆದರಿ ಮೊಬೈಲ್ ಟವರುಗಳ ಮೇಲೆ ಗೂಡು ಕಟ್ಟುವ ಸ್ಥಿತಿ, ಮನುಷ್ಯನ ಆಧುನಿಕ ಬದುಕಿನ ಕ್ರೌರ್ಯವನ್ನು ವ್ಯಂಗ್ಯವಾಗಿ ತೋರಿಸುತ್ತದೆ. ಅಲ್ಲಿಗೂ ಬರುವ ಮನುಷ್ಯನ ಸ್ವಾರ್ಥ ಬುದ್ಧಿಗೆ ಪ್ರಕೃತಿ ತನ್ನದೇ ರೀತಿಯಲ್ಲಿ ಉತ್ತರಿಸಿ ಬಿಡುತ್ತದೆ ಎಂದು ಹೇಳಿದರು.
ರಂಗ ಸಮಾಜದ ಸದಸ್ಯ ಹಾಲಸ್ವಾಮಿ, ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು.