ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಸರ್ಕಾರ `ಹಸಿರು ಪಟಾಕಿ’ಗಳನ್ನು ಮಾತ್ರ ಹಚ್ಚಲು ಆದೇಶ ಹೊರಡಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಯಂತೆ ಪಟಾಕಿಗಳು ಸಿಗುವುದೇ ಅಪರೂಪ ಎಂಬುವಂತಿದೆ ಪರಿಸ್ಥಿತಿ.
ಉಚ್ಚ ನ್ಯಾಯಾಲಯದ ಆದೇಶದನ್ವಯ `ಹಸಿರು ಪಟಾಕಿ’ ಸಂಬಂಧವಾಗಿ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ದಾಖಲಾಗಿತ್ತು. ಅದರನ್ವಯ ಕೆಲವು ನಿರ್ದೇಶನಗಳನ್ನು ನೀಡಲಾಗಿದೆ. Council of Scientific & Industrial Research (CSIR) ಮತ್ತು National Environmental Engineering Research Institute (NEERI) ಪ್ರಮಾಣಿಕೃತ ಪಟಾಕಿಯನ್ನೇ ಬಳಸುವಂತೆ ಸೂಚನೆ ಸಹ ನೀಡಲಾಗಿದೆ.
ರಾಜ್ಯ ಸರ್ಕಾರ ಕೋವಿಡ್ ಹಿನ್ನೆಲೆ ಹಬ್ಬ ಆಚರಣೆಯ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿರಲಿಲ್ಲ. ಹೀಗಿರುವಾಗ, ನವೆಂಬರ್ 13ರಂದು ಹಸಿರು ಪಟಾಕಿ ಕುರಿತು ಆದೇಶ ಹೊರಡಿಸಲಾಗಿದೆ. ಅದರಲ್ಲಿ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಮಾರಾಟಗಾರರಿಗೆ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
ಆದರೆ, ವಾಸ್ತವದಲ್ಲಿ ಮಾರುಕಟ್ಟೆಯಲ್ಲಿ ಸರ್ಕಾರ ತನ್ನ ಆದೇಶದಲ್ಲಿ ಸೂಚಿಸಿರುವ ಪಟಾಕಿಗಳು ಸಿಗುವುದೇ ಅಪರೂಪವಾಗಿದೆ. ನವೆಂಬರ್ 13ರಿಂದ 16ರ ವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಆಯಾ ಸ್ಥಳೀಯ ಸಂಸ್ಥೆಗಳಿAದ ಆಗಿಲ್ಲ.
ಶಿವಮೊಗ್ಗದಲ್ಲಿ ಶುಕ್ರವಾರದಿಂದ ನಗರದ ನೆಹರೂ ಸ್ಟೇಡಿಯಂ ಹಾಗೂ ಸೈನ್ಸ್ ಮೈದಾನದಲ್ಲಿ ಮಾರಾಟ ಮಳಿಗೆಗಳನ್ನು ಆರಂಭಿಸಲಾಗಿದೆ. ಸೈನ್ಸ್ ಮೈದಾನಕ್ಕೆ ಪಾಲಿಕೆಯಿಂದ ಅನುಮತಿ ನೀಡಲಾಗಿದೆ ಹಾಗೂ ಪ್ರತಿ ಸ್ಟಾಲ್’ಗೆ ಬಾಡಿಗೆ ಸಹ ಪಡೆಯಲಾಗಿದೆ. ಆದರೆ, ಯಾವ ರೀತಿಯ ಪಟಾಕಿಗಳನ್ನು ತರಲಾಗಿದೆ. ಅವುಗಳು ಸರ್ಕಾರ ಮತ್ತು ನ್ಯಾಯಾಲಯ ಸೂಚಿಸಿರುವ ಮಾನದಂಡದಡಿ ಬರುತ್ತವೆಯೇ ಎಂಬುವುದನ್ನು ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಸಾಕಷ್ಟು ಜನ ಮಧ್ಯಾಹ್ನದಿಂದಲೇ ಮಳಿಗೆಗಳಿಗೆ ಭೇಟಿ ನೀಡಿ ಪಟಾಕಿಗಳನ್ನು ಆರಂಭಿಸಿದ್ದಾರೆ. ಆದರೆ, ಯಾರೂ ಖರೀದಿಯನ್ನೂ ತಾವು ಖರೀದಿಸುತ್ತಿರುವುದು ನಿಜವಾಗಿಯೂ `ಹಸಿರು ಪಟಾಕಿ’ಯೇ ಎಂಬುವುದನ್ನು ಪರಿಶೀಲಿಸುತ್ತಿಲ್ಲ. ಮಾರಾಟ ಮಾಡುತ್ತಿರುವ ಪಟಾಕಿಗಳ ಮೇಲೆ ಸಿಎಸ್.ಐ.ಆರ್ ಮತ್ತು ನೀರಿ ಚಿಹ್ನೆ ಕೂಡ ಇಲ್ಲ.
ಏನಿದು ಹಸಿರು ಪಟಾಕಿ?: ಸರ್ಕಾರ ಉಲ್ಲೇಖಿಸಿರುವ `ಹಸಿರು ಪಟಾಕಿ’ ಎಂದರೆ, ಅದರ ಮೇಲೆ ಕಡ್ಡಾಯವಾಗಿ ಸಿಎಸ್.ಐ.ಆರ್ ಮತ್ತು ನೀರಿ ಚಿಹ್ನೆ, ರಾಷ್ಟೀಯ ಪ್ರಮಾಣ ಪತ್ರ ಮತ್ತು ರಾಸಾಯನಿಕ ಬಳಕೆಗಳ ಬಗ್ಗೆ ಮಾಹಿತಿ ಹೊಂದಿರತಕ್ಕದ್ದು.
ಹೈಕೋರ್ಟ್ ನಿರ್ದೇಶನ ಏನು?
- ಪಟಾಕಿ ಮಾರಾಟಗಾರರ ಅಂಗಡಿಗಳಿಗೆ ಭೇಟಿ ನೀಡಿ ಸಿ.ಎಸ್.ಐ.ಆರ್ ಮತ್ತು ಎನ್.ಇ.ಇ.ಆರ್.ಐ ಪ್ರಮಾಣಿಕೃತ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು
ಹಸಿರು ಪಟಾಕಿ ಹಚ್ಚುವ ಬಗ್ಗೆ ಸರ್ಕಾರ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು. - ಪೊಲೀಸ್, ಮಾಲಿನ್ಯ ನಿಯಂತ್ರಣ ಮಂಡಳಿಯು ಶಬ್ದ ಮಾಲಿನ್ಯ ತಡೆಗಟ್ಟಲು ಯಾವುದೇ ಕಾರಣಕ್ಕೂ ನಿಯಮದ ವ್ಯಾಪ್ತಿ ಮೀರಿ ಪಟಾಕಿಗಳ ಶಬ್ದ ಹೆಚ್ಚಾಗಿ ಹೊಮ್ಮದಂತೆ ಕ್ರಮವಹಿಸಬೇಕು. ಇದನ್ನು ಉಲ್ಲಂಘಿಸಿದ್ದಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು.
- ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘಿಸುವವರ ಮೇಲೆ ಸಹಾನುಭೂತಿ ತೋರತಕ್ಕದ್ದಲ್ಲ