ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇಲ್ಲಿ ದಿನ ಬೆಳಗಾದರೆ ಕೋವಿಡ್ ಟೆಸ್ಟ್ ಗಾಗಿ ಗಂಟಲು ದ್ರವದ ಮಾದರಿ ನೀಡಲು ಸರದಿಯಲ್ಲಿ ನಿಲ್ಲಬೇಕು. ಬೆಳಗ್ಗೆ ನಿಂತರೆ ಮಧ್ಯಾಹ್ನದವರೆಗೂ ತಮ್ಮ ಸರದಿ ಬರುವುದು ಕಷ್ಟಸಾಧ್ಯ.
ಈ ಬಗ್ಗೆ ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ.ಯೋಗೇಶ್ ಅವರು, ಡಿಎಚ್ಒ ಡಾ.ರಾಜೇಶ್ ಸುರಗೀಹಳ್ಳಿ ಅವರಿಗೆ ಈ ಕುರಿತು ಶುಕ್ರವಾರ ಮನವಿ ಪತ್ರ ಸಲ್ಲಿಸಿದ್ದು, ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಸರದಿಗೆ ಕಾರಣ: ನ್ಯಾಯಾಲಯಕ್ಕೆ ಬರುವ ಜನ ಕೋವಿಡ್ ಪರೀಕ್ಷೆಗಾಗಿ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ನಿತ್ಯ ನ್ಯಾಯಾಲಯಕ್ಕೆ ಅಂದಾಜು 400ಕ್ಕೂ ಹೆಚ್ಚು ಜನ ವಿವಿಧ ಕಾರಣಗಳಿಗಾಗಿ ಬರುತ್ತಾರೆ. ಒಳಗೆ ಪ್ರವೇಶ ಪಡೆಯುವುದಕ್ಕೂ ಮುಂಚೆ ಸಾರ್ವಜನಿಕರು ಕಡ್ಡಾಯವಾಗಿ ಆರೋಗ್ಯ ಇಲಾಖೆಯ ಪರೀಕ್ಷೆಗೆ ಒಳಪಡಲೇಬೇಕು. ಪ್ರತಿ ವ್ಯಕ್ತಿಗೆ ಕನಿಷ್ಠ 10 ನಿಮಿಷ ಎಂದು ಪರಿಗಣಿಸಿದರೂ ಎಲ್ಲರ ಪರೀಕ್ಷೆಯ ಹೊತ್ತಿಗೆ ಗಂಟೆಗಳೇ ಸವೆದು ಹೋಗುತ್ತವೆ. ಹೀಗಾಗಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪರೀಕ್ಷೆಗಿರುವ ಸಿಬ್ಬಂದಿಗಳೆಷ್ಟು: ಆರೋಗ್ಯ ಇಲಾಖೆಯು ಪರೀಕ್ಷೆಗೋಸ್ಕರ ಕೇವಲ ಮೂವರು ಸಿಬ್ಬಂದಿ, ಡೇಟಾ ಎಂಟ್ರಿಗೆ ಇಬ್ಬರನ್ನು ನಿಯೋಜಿಸಿದೆ. ಆದರೆ, ಇವರಿಂದ ಇಷ್ಟೊಂದು ದೊಡ್ಡ ಪ್ರಮಾಣದ ಜನಸಂದಣಿಯನ್ನು ನಿರ್ವಹಿಸುವುದು ಕಷ್ಟಸಾಧ್ಯ. ಆದ್ದರಿಂದ ಹೆಚ್ಚುವರಿಯಾಗಿ ಸಿಬ್ಬಂದಿ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.