ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಕೇಶಿಯ, ನೀಲಗಿರಿ ನೆಡುತೋಪುಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ಸಭೆ ಕರೆಯುವುದಾಗಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಅವರು ಅರಣ್ಯ ಇಲಾಖೆಯು ಜಿಲ್ಲೆಯ ವಿವಿಧೆಡೆ ಪರಿಸರಕ್ಕೆ ಹಾನಿಕರವಾಗಿರುವ ಅಕೇಶಿಯ, ನೀಲಗಿರಿ ನೆಡುತೋಪುಗಳಿಂದಾಗಿ ಅಂತರ್ಜಲ ಕುಸಿತ, ಪ್ರಾಣಿಪಕ್ಷಿ ಸಂಕುಲಗಳ ನಾಶ, ವನ್ಯಜೀವಿ ಜೀವ ವೈವಿದ್ಯತೆಗೆ ಧಕ್ಕೆ ಆಗುತ್ತಿದೆ. ಈ ಕುರಿತು ಚರ್ಚಿಸುವಂತೆ ದನಿ ಎತ್ತಿದರು.
ಇದನ್ನೂ ಓದಿ । ಸರ್ಕಾರ ಕೈಗೊಂಡ ನಿರ್ಣಯ ವಿರುದ್ಧ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಬಿರುಸಿನ ಚರ್ಚೆ, ಏನದು ಗೊತ್ತಾ?
ಪರಿಸರಕ್ಕೆ ಹಾನಿಯುಂಟು ಮಾಡುವ ನೆಡುತೋಪಿನ ವಿಚಾರವಾಗಿ ಪರಿಸರ ವಾದಿಗಳು ತೀವ್ರ ವಿರೋಧ ಕೂಡ ವ್ಯಕ್ತಪಡಿಸುತ್ತಿದ್ದಾರೆ. ಪಶ್ಚಿಮಘಟ್ಟ ಉಳಿಸುವ ನಿಟ್ಟಿನಲ್ಲಿ ಸಮಿತಿಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ನಿರ್ಣಯವನ್ನು ಸಲ್ಲಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಕಾಂತೇಶ್, ಈ ವಿಷಯದ ಕುರಿತು ವಿಸ್ತøತವಾಗಿ ಚರ್ಚಿಸಲು ವಿಶೇಷ ಸಭೆಯನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.