ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ `ಬರ್ತ್ ಡೇ’ಗೆ ವಿಶೇಷ ಹಾಡೊಂದು ಸಿದ್ಧವಾಗಿದೆ! ಖ್ಯಾತ ಗೀತ ರಚನೆಕಾರ ಕೆ.ಕಲ್ಯಾಣ್ ಅವರು ಹಾಡನ್ನು ರಚಿಸಿದ್ದು, ಖ್ಯಾತ ಗಾಯಕ ವಿಜಯ ಪ್ರಕಾಶ್ ಸಂಗೀತ ನೀಡಿದ್ದಾರೆ.
ಆರು ನಿಮಿಷದ ಹಾಡು ಇದಾಗಿದೆ. ಈ ಸ್ವಲ್ಪವೇ ಸಮಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೀವನ ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. ಅವರು ಬೆಳೆದು ಬಂದ ಹಾದಿ, ಅಭಿವೃದ್ಧಿ, ಮಾನವೀಯತೆ, ಹೋರಾಟ ಹೀಗೆ ಸಮಗ್ರ ಚಿತ್ರಣವನ್ನು ಹಾಡಿನಲ್ಲಿ ನೀಡುವ ಪ್ರಯತ್ನ ಮಾಡಲಾಗಿದೆ. ಆದ್ದರಿಂದ, ಫೆಬ್ರವರಿ 28ರಂದು ಹಳೆಯ ಜೈಲು ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಈ ಹಾಡು ಕೇಂದ್ರವಾಗಲಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಕಾರ್ಯಕ್ರಮದ ಮೂಲಕ ಕಲಾವಿದರಿಗೆ ಗೌರವ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಸಿಎಂ ಒಪ್ಪಿಗೆ ನೀಡಿರುವುದು ಭಾರಿ ಖುಷಿ ನೀಡಿದೆ. ನಿರೂಪಕಿ ಅನುಶ್ರೀ ಸಹ ಈ ವೇಳೆ ಭಾಗವಹಿಸಲಿದ್ದಾರೆ. ಸಂಗೀತ ರಸದೌತಣವನ್ನೇ ಉಣಬಡಿಸಲಾಗುವುದು.
– ರಾಜೇಶ್ ಕೃಷ್ಣನ್, ಗಾಯಕ
ನಗರದಲ್ಲಿ ಶನಿವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಗಾಯಕ ವಿಜಯ ಪ್ರಕಾಶ್, ಯಡಿಯೂರಪ್ಪ ಅವರ ‘ನಮ್ಮೊಲುಮೆ‘ ಕಾರ್ಯಕ್ರಮದ ಬಳಿಕ ಭಾವಾಭಿನಂದನಾ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದನ್ನು ಗಾಯಕರಾದ ವಿಜಯಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು. ಇದು ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ಮಟ್ಟದ ಕಾರ್ಯಕ್ರಮವಾಗಿದ್ದು, ವಿಶೇಷ ಹಾಡು ಪ್ರಸ್ತುತಪಡಿಸಲಾಗುವುದು.
75ಕ್ಕೂ ಅಧಿಕ ಕಲಾವಿದರು ಭಾಗಿ | ಭಾರಿ ನಿರೀಕ್ಷೆಯೊಂದಿಗೆ ಶಿವಮೊಗ್ಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 75ಕ್ಕೂ ಹೆಚ್ಚು ಕಲಾವಿದರು ಈಗಾಗಲೇ ಶಿವಮೊಗ್ಗಕ್ಕೆ ಬಂದಿದ್ದಾರೆ. ಈ ನಿಟ್ಟಿನಲ್ಲಿ ತಾಲೀಮು ಕೂಡ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಬಳ್ಳೆಕೆರೆ ಸಂತೋಷ್ ಉಪಸ್ಥಿತರಿದ್ದರು.