ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಹ್ಯಾದ್ರಿ ಕಾಲೇಜಿನ ಒಂದಿಂಚು ಜಾಗವನ್ನೂ ನೀಡುವುದಿಲ್ಲ ಎಂದು ವಿದ್ಯಾರ್ಥಿ ಮುಖಂಡ ಅಭಿಗೌಡ ಹೇಳಿದರು.
ಜೂಮ್ ತಂತ್ರಾಂಶದ ಮೂಲಕ ಬುಧವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಖೇಲೊ ಇಂಡಿಯಾ ಯೋಜನೆ ಅಡಿ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಕ್ರೀಡಾ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದನ್ನು ಖಂಡಿಸುತ್ತೇವೆ ಎಂದು ಹೇಳಿದರು.
https://www.suddikanaja.com/2020/12/16/sports-village-in-shivamogga-said-mp-by-raghavendra/
ಕ್ರೀಡಾ ತರಬೇತಿ ಕೇಂದ್ರಕ್ಕೆ ಯಾವುದೆ ಕಾರಣಕ್ಕೂ ಅವಕಾಶವನ್ನು ನೀಡುವುದಿಲ್ಲ. ಸಹ್ಯಾದ್ರಿ ಕಾಲೇಜು ಬಡ ವಿದ್ಯಾರ್ಥಿಗಳ ಕಾಲೇಜು ಆಗಿದೆ. ರೈತರು, ಶ್ರಮಿಕರ ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ. ಆರೂವರೆ ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಇನ್ನೂ ಸಾಕಷ್ಟು ಕಟ್ಟಡಗಳು ನಿರ್ಮಾಣವಾಗಬೇಕಿದೆ. ಗ್ರಂಥಾಲಯ, ಪಿಜಿ ಕಟ್ಟಡಗಳು, ಬಾಲಕಿಯರ ಹಾಸ್ಟೆಲ್ ಹೀಗೆ ಹಲವು ಹಂತದಲ್ಲಿ ಕಾಮಗಾರಿ ನಡೆಯಬೇಕಿದೆ. ಇಂತಹದ್ದರಲ್ಲಿ ಆವರಣದಲ್ಲಿ ಕ್ರೀಡಾ ತರಬೇತಿ ಕೇಂದ್ರಕ್ಕೆ ಜಾಗ ನೀಡುವ ಪ್ರಶ್ನೆಯೇ ಇಲ್ಲ ಎಂದರು.
ಪಾರದರ್ಶಕತೆಯ ಕೊರತೆ | ಪ್ರೊ.ರಾಜೇಂದ್ರ ಚೆನ್ನಿ ಮಾತನಾಡಿ, ಕೇಂದ್ರ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಕ್ರೀಡಾ ತರಬೇತಿ ಕೇಂದ್ರ ಆರಂಭಕ್ಕೆ ತೋರಲಾಗುತ್ತಿರುವ ಹಠಮಾರಿತನ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇಲ್ಲಿ ಪಾರದರ್ಶಕದ ಕೊರತೆ ಇದೆ. ಜನರಿಗೆ ಸರಿಯಾದ ಮಾಹಿತಿ ನೀಡದೆಯೇ ತರಬೇತಿ ಕೇಂದ್ರ ಆರಂಭಕ್ಕೆ ಮುಂದಾಗಿದ್ದು, ಇದಕ್ಕೆ ಕಾಲೇಜಿನ ಭೂಮಿಯೇ ಏಕೆ ಬೇಕು ಎಂಬುವುದು ಅರ್ಥವಾಗುತ್ತಿಲ್ಲ ಎಂದರು.
ಮೈಸೂರು ಮಹಾರಾಜರು ಶೈಕ್ಷಣಿಕ ಉದ್ದೇಶಕ್ಕೆ ದಾನ ನೀಡಿದ್ದು, ಅದನ್ನು ಕೂಡ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೃಷಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಧರ್ಮ ಶಾಲೆಯಂತಿರುವ ಸಹ್ಯಾದ್ರಿ ಕಾಲೇಜನ್ನು ಮುಗಿಸಿಬಿಡುವ ಹುನ್ನಾರ ಯಾರು ಮಾಡಬಾರದು. ಸರ್ಕಾರ ಹಠಮಾರಿತ ಕೂಡಲೇ ಕೈಬಿಡಬೇಕು.
– ಕೆ.ಟಿ.ಗಂಗಾಧರ್, ರೈತ ಮುಖಂಡ
ತರಬೇತಿ ಕೇಂದ್ರವೇ ದೊಡ್ಡ ಹುನ್ನಾರ | ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಈಗಾಗಲೆ ಸಹ್ಯಾದ್ರಿ ಕಾಲೇಜಿನ 18.04 ಎಕರೆ ಜಾಗವನ್ನು ಜಿಲ್ಲಾಡಳಿತ ವಶಕ್ಕೆ ನೀಡಲು ಕುವೆಂಪು ವಿಶ್ವವಿದ್ಯಾಲಯಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದ ಯೋಜನೆಗಳೇನು ಎಂಬುವುದು ಅರ್ಥವಾಗುತ್ತಿಲ್ಲ. ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಯೇ ದೊಡ್ಡ ಹುನ್ನಾರ ಎಂದು ಆರೋಪಿಸಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಗುರುಮೂರ್ತಿ, ನಿವೃತ್ತ ಉಪನ್ಯಾಸಕ ಡಾ.ಸಣ್ಣರಾಮಪ್ಪ, ಅಭಿನಂದನ್, ಟಿ.ಎಸ್.ಸ್ವಾಮಿ ಮಾತನಾಡಿದರು. ಚರ್ಚೆಯಲ್ಲಿ ಲೋಹಿತ್, ಕೆ.ರಂಗನಾಥ್ ಇತರರು ಪಾಲ್ಗೊಂಡಿದ್ದರು.
https://www.suddikanaja.com/2021/04/26/old-students-stand-for-sahyadri-collage/